Tuesday, December 1, 2009

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?




ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!
ತುಂಟಾಟವಾಡುವ ತಂಟೆಕೋರನ ಕೇಳಿ...
ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?
ನೂರಾರು ಬಾರಿ ಬಯ್ಗಳವ ತಿಂದರೂ
ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ!

Tuesday, November 24, 2009

ಕೊರೆತ...



ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???

--ಶ್ರೀ

Saturday, November 14, 2009

ನುಡಿ ಸಿಡಿಲು

ಕಟಕಿಯಾಡಿದ
ಹುಡುಗನ
ನಡುಬೀದಿಯಲಿ
ಹಿಡಿಶಾಪ ಹಾಕಿದರೂ, ಅವ
ನುಡಿದ ಮಾತುಗಳು
ಗುಂಡಿಗೆಯಲಿ
ಗುಡುಗಿತ್ತು...

--ಶ್ರೀ
(೧೪ - ನವಂಬರ್ - ೨೦೦೯ )

Tuesday, October 13, 2009

ಒಡೆದ ಕನ್ನಡಿ


ತುಡಿಯುತಿಹುದು ಮನ, ಒಡೆದ ಕನ್ನಡಿಯ ಸುತ್ತ
ಪ್ರತಿ ಚೂರಿನೊಳಗೆ ಕಹಿ ನೆನಪ ಹುತ್ತ

ಖುಷಿಯಲೇ ಮುಳುಗಿದ್ದ ನಮ್ಮಿಬ್ಬರಾ ಮಧ್ಯೆ
ವಿಷವೆಂದು ಮೊಳೆಯಿತೋ ತಿಳಿಯದಾಗಿದೆ
ನಲಿಯುತಾ ಎರಚಿದಾ ಓಕುಳಿಯ ಜೊತೆಗೆ
ಕೊಳಕೆಂದು ಹಾರಿತೋ ನಾನಿಂದು ಅರಿಯೆ

ಮುತ್ತೆಂದು ಇಟ್ಟದ್ದು ಮುಳ್ಳಾಯ್ತೇ ನಿನಗೆ?
ಇತ್ತೆ ನಾ ಮುತ್ತುಗಳ ಕಹಿ ಮನವನರಿಯದೆ
ಇರಿದ ಮುತ್ತನು ಸಹಿಸಿ ಮೌನಿ ಏಕಾದೆ?
ನಲಿವಿನಲಿ ನಾ ನಿನಗೆ ಮುತ್ತಿಡುತ ಹೋದೆ

ನಮ್ಮಿಬ್ಬರಾ ಬಂಧ ಬಲು ಚೆಂದ ಎಂಬ ಭ್ರಮೆ
ಕನ್ನಡಿಯ ಹಿಡಿದು ಕುರುಡನಾಗಿದ್ದೆ
ಹುಡುಗಾಟದಿ ಅಂದು ದೂಡಿದುದು ತಪ್ಪೇನೋ
ಇಂದೆನ್ನ ಮುಂದಿದೆ ಒಡೆದ ಗಾಜಿನ ಮೂಟೆ

--ಶ್ರೀ

Thursday, September 24, 2009

ನಮ್ ಮನೇಲಿ ನವರಾತ್ರಿ ಬೊಂಬೆ ಕೂಡಿಸಿರೋದ್ ಹೀಗೆ!








ನಮ್‍ಹಳ್ಳಿ!





ಬಟ್ಟೆ ವ್ಯಾಪಾರಿ



ರೈಲಿನಲ್ಲಿ "ವಿಶ್ವ ಪರ್ಯಟನೆ"


ಪುಟಾಣಿ ರಾಷ್ಟ್ರೀಯ ಉದ್ಯಾನವನ




ಸಮುದ್ರ ಮಂಥನ

Friday, September 4, 2009

ಬೇಡತಿಯ ಮುತ್ತು

ಹಂಸಾನಂದಿಯವರು ಚಾಣಾಕ್ಯನ ನೀತಿಯನ್ನು ಅನುವಾದಿಸಿ, ’ಬೇಡತಿಗೆ ಬೇಡದ ಮುತ್ತು’ಎಂಬ ತಲೆ ಬರಹ ನೀಡಿದರು.
ಈ ತಲೆಬರಹದಿಂದ ಸ್ಫೂರ್ತಿಗೊಂಡ ನಾನು ಕೆಳಗಿನ ನಾಲ್ಕು ಸಾಲನ್ನು ಬರೆದಿರುವೆ...

ಬೇಡತಿಗೆ ಬೇಡ ಕೊರಳ ಹಾರದ ಮುತ್ತು
ಬೇಡುತಿಹಳು ಬೇಡನ ಮಾರನ ಮತ್ತು,
ಉಡಿಯನು ತುಂಬಲು ಒಲವಿನ ಮುತ್ತು,
ಮಡಿಲಲಿ ಆಡುವ ಬೆಲೆ ನಿಲುಕದ ಮುತ್ತು!

--ಶ್ರೀ

Thursday, August 27, 2009

ನಮ್ಮೂರ ಆಂಜನೇಯನಿಗೆ ಬೆಳ್ಳಿ ಕವಚ...

ಮೂಲ ವಿಗ್ರಹ ಹೀಗಿದೆ:


ಹೊಸ ಕವಚ ಹಾಕಿದ ಮೇಲೆ:


ಅರಿಶಿನ ಲೇಪಿತ ಹನುಮಂತ:

Friday, August 14, 2009

ತಂಪಿನ ಕಂಪು

ಹಂಸಾನಂದಿಯವರು ಮತ್ತೊಂದು ಉತ್ತಮ ಸುಭಾಷಿತವನ್ನು ಪರಿಚಯಿಸಿದರು.

ಸಂಸ್ಕೃತ ಮೂಲ:

ಚಂದನಂ ಶೀತಲಂ ಲೋಕೇ ಚಂದನಾದಪಿ ಚಂದ್ರಮಾಃ
ಚಂದ್ರ ಚಂದನಯೋರ್ಮಧ್ಯೇ ಶೀತಲಾ ಸಾಧು ಸಂಗತಿ:

ಅವರ ಅನುವಾದವನ್ನು ಬಳಸಿ ನನ್ನದೊಂದು ಭಾವನುವಾದ ಹೀಗಿದೆ:

ಚಂದನ ತೊಡುವುದು ಒಡಲಿಗೆ ತಂಪು
ಚಂದ್ರನ ಕಾಂತಿಯು ಅದಕೂ ಇಂಪು+
ಚಂದಿರ ಚಂದನ ಎರಡನು ಮೀರಿದೆ
ಸುಂದರ* ಜನಗಳ ಸಂಗದ ಪೆಂಪು!

--ಶ್ರೀ

+ಇಂಪು:
ಸೊಗಸು, ಅಂದ

*ಸುಂದರ:
೧೮. divine (ಗುಣವಾಚಕ) 1) ದೈವಿಕ, ಪವಿತ್ರವಾದ, ದೇವರಂಥ, ದಿವ್ಯ, ಅತಿಮಾನುಷ, ದೈವದತ್ತ 2) ಸರ್ವೋತ್ಕೃಷ್ಟ, ಅತಿ ಸುಂದರ, ಅತಿ ಶ್ರೇಷ್ಠ, ಅಲೌಕಿಕ ಸೌಂದರ್ಯವುಳ್ಳ
೧೭. comely (ಗುಣವಾಚಕ) 1) ಸೊಗಸಾದ, ಸುಂದರ, ಸ್ಫುರದ್ರೂಪಿಯಾದ 2) ಯೋಗ್ಯವಾದ, ಮನಸ್ಸಿಗೆ ಒಪ್ಪುವ, ರಮಣೀಯ, ಮನೋಹರ

Friday, August 7, 2009

ಕಂಪ್ಯೂಟರ್ ನೆಟ್‍ವರ್ಕಿಂಗ್ ಎಂದರೇನು? - ೧ - ಮನೆಯಲ್ಲಿರುವ ಸಾಧನಗಳ ಮೇಲ್ನೋಟ

ಮೊನ್ನೆ ಸಂಪದ ಮಿತ್ರರೊಬ್ಬರು ಕರೆ ಮಾಡಿದಾಗ, ’ನನ್ನ ಕಂಪ್ಯೂಟರ್‍ನಲ್ಲಿ ಕೆಲವು ಕಡತಗಳಿವೆ, ಇದನ್ನು ನನ್ನ ಕಂಪ್ಯೂಟರ್‍ನಲ್ಲಿ ವೆಬ್ ಹೋಸ್ಟಿಂಗ್ ಮಾಡಿ, ಸಂಪದ.ನೆಟ್ ಮಾದರಿ ಗೆಳೆಯರ ಮನೆಗಳ ಕಂಪ್ಯೂಟರ್ ಪರದೆಗಳಲ್ಲಿ ಮೂಡಿಸಬಹುದಾ?’ ಎಂದು ಪ್ರಶ್ನೆ ಕೇಳಿದರು.
’ನೀವು ಅಂದುಕೊಂಡಷ್ಟು ಸುಲಭವಲ್ಲಾರೀ...ಪ್ರಪಂಚದಲ್ಲಿ ಕೋಟ್ಯಾಂತರ ಕಂಪ್ಯೂಟರ‍್ಗಳಿವೆ. ನೀವು ದಿನವೂ ಸಂಪದವನ್ನು ಓದುತ್ತಿದ್ದರೂ, ಸಂಪದದ ಪುಟಗಳನ್ನು ಓದುವಾಗ, ನಿಮಗೆ ತಿಳಿಯದೆ, ಹಲವಾರು ನೆಟ್‍ವರ್ಕಿಂಗ್ ತಂತ್ರಜ್ಞಾನಗಳನ್ನು ತೆರೆಮರೆಯಲ್ಲಿ ಬಳಸುತ್ತೀರ’ ಎಂದೆ, ಕೆಲವನ್ನು ಫೋನ್‍ನಲ್ಲೇ ವಿವರಿಸಿದೆ. ತಕ್ಷಣವೇ, ’ಹೌದೇ, ಗೊತ್ತೇ ಇರಲಿಲ್ಲ, ನೀವು ಏಕೆ ನೆಟ್‍ವರ್ಕಿಂಗ್ ಬಗ್ಗೆ ಸಂಪದದಲ್ಲಿ ಬರೆಯಬಾರದು?’ ಎಂದು ಕೇಳಿದರು. ಹೀಗಾಗಿ ಈ ಬರಹಮಾಲೆ!

ಮೊದಲೇ ಹೇಳಿ ಬಿಡ್ತೀನಿ, ನೆಟ್‍ವರ್ಕಿಂಗ್ ಅನ್ನೋದು ಸಮುದ್ರ, ನನಗೆ ತಿಳಿದಿರೊಷ್ಟನ್ನ, ಆದಷ್ಟು ಸುಲಭವಾಗಿ ನಿಮಗೆ ಮುಟ್ಟಿಸುವ ಪ್ರಯತ್ನ ಮಾಡ್ತಿದೀನಿ.
ಸರಿ! ಇಷ್ಟು ಪೀಠಿಕೆ ಸಾಕಲ್ವಾ?

ಮೊದಲನೆಯ ಕಂತಿನಲ್ಲಿ, ನಿಮ್ಮ ಮನೆಗಳಲ್ಲಿ ಸಂಪದ ಓದಲಿಕ್ಕೆ ಅಥವಾ ಇಂಟರ‍್ನೆಟ್ ಬಳಸುವುದಕ್ಕೆ ಏನೇನು ಸಾಧನಗಳಿವೆ ಎಂಬುದನ್ನು ಮೇಲ್ಮಟ್ಟದಲ್ಲಿ ತಿಳಿದುಕೊಳ್ಳುವ.

೧. ಕಂಪ್ಯೂಟರ್
೨. ಕಂಪ್ಯೂಟರ್ ಪಕ್ಕದಲ್ಲಿ ಒಂದು ಡಬ್ಬ (ಅಥವಾ ಮೋಡೆಮ್)
ಮೊಡೆಮ್ ಏನು ಮಾಡತ್ತೆ ಅನ್ನೋದು ಸದ್ಯಕ್ಕೆ ಬೇಡ - ಕಂಪ್ಯೂಟರ್ ಪಕ್ಕದ ಒಂದು ಜಾಣ ಡಬ್ಬ ಅಂತ ತಿಳ್ಕೊಳ್ಳಿ ಸಾಕು.
ಮುಂದಿನ ಕಂತುಗಳಲ್ಲಿ ಇದರ ಬಗ್ಗೆ ಬರೀತಿನಿ.
ಕೆಲವು ವರ್ಷಗಳ ಹಿಂದೆ ಐ.ಎಸ್.ಡಿ.ಎನ್ ಮೋಡೆಮ್ ಗಳು ಬಳಕೆಯಲ್ಲಿತ್ತು. ಕಂಪ್ಯೂಟರ‍್ಗೆ ಸೇರಿದ ಹಾಗಿರುವ ಇಂಟರ್ನಲ್ ಮೋಡೆಮ್ ಕೂಡ ಬಳಕೆಯಲ್ಲಿತ್ತು.

ಈಗ ಎ.ಡಿ.ಎಸ್.ಎಲ್ ಮೋಡೆಮ್ ಚಾಲ್ತಿಯಲ್ಲಿದೆ.
(ನೀವು ಇಂಟರ್ನಲ್ ಐ.ಎಸ್.ಡಿ.ಎನ್ ಮೋಡೆಮ್ ಬಳಸುತ್ತಿದ್ದರೆ, ಕಂಪ್ಯೂಟರ್ ಪಕ್ಕ ಡಬ್ಬ ಹುಡುಕಬೇಡಿ Smiling )
ಐ.ಎಸ್.ಡಿ.ಎನ್/ಎ.ಡಿ.ಎಸ್.ಎಲ್ ಈ ರೀತಿಯ ಅಕ್ಷರಗುಛ್ಛ ಏನು ಎಂಬುದೂ ಬೇಡ. ಮುಂದಿನ ಕಂತುಗಳಲ್ಲಿ ಹೇಳ್ತೀನಿ.

೩. ಸ್ಪ್ಲಿಟ್ಟರ್ - ಪುಟಾಣಿ ಡಬ್ಬ. ಈ ಡಬ್ಬ, ಕೆಲವರ ಮನೆಯಲ್ಲಿರದಿರಲೂಬಹುದು.
ಸ್ಪ್ಲಿಟ್ ಅಂದರೆ ಒಡೆಯುವುದು/ಬೇರ್ಪಡಿಸು ಎಂಬ ಅರ್ಥ ಅಲ್ಲವೇ? ಈ ಪುಟಾಣಿ ಸ್ಪ್ಲಿಟ್ಟರ್‍ನ ಕೆಲಸ, ಧ್ವನಿ ಮತ್ತು ಕಂಪ್ಯೂಟರ್‍ಗೆ ಬೇಕಾದ ಮಾಹಿತಿ ಇವೆರಡನ್ನೂ ಬೇರ್ಪಡಿಸುವುದು.

ಕಂಪ್ಯೂಟರ್ ಮತ್ತು ಜಾಣ ಡಬ್ಬ, ಮೋಡೆಮ್ ಇವೆರಡನ್ನು ಒಂದು ವೈರ್ ಬಳಸಿ ಸೇರಿಸಿರುತ್ತಾರೆ.
ಐ.ಎಸ್.ಡಿ.ಎನ್ ಮೋಡೆಮ್‍ಗಳಿಗೆ ಟೆಲಿಫೋನ್ ವೈರ್ ಬಳಸುತ್ತಾರೆ.

ಎ.ಡಿ.ಎಸ್.ಎಲ್ ಮೋಡೆಮ್‍ಗಳಿಗೆ ಟೆಲಿಫೋನ್ ವೈರ‍್ಗಿಂತ ಸ್ವಲ್ಪ ದಪ್ಪನಾದ ವೈರ್ ಬಳಸುತ್ತಾರೆ.
ಈ ದಪ್ಪ ವೈರ್ ತಂತ್ರಜ್ಞಾನ ಹೊಸದೇನಲ್ಲವಾದರೂ, ಮನೆಯಿಂದ ಇಂಟರ‍್ನೆಟ್ ಬಳಕೆ ಮಾಡುವುದಕ್ಕೆ ಕೊಂಚ ಹೊಸತು.
ಇದನ್ನು ಈಥರ‍್ನೆಟ್ ವೈರ್ ಎಂದು ಕರೆಯುತ್ತಾರೆ. ಹೊರ ನೋಟಕ್ಕೆ ಒಂದೇ ವೈರ‍್ನಂತೆ ಕಂಡರೂ, ತುದಿಗಳಲ್ಲಿ ಗಮನಿಸಿ ನೋಡಿದಾಗ ಎಂಟು ಸಣ್ಣ ವೈರ‍್ನಿಂದ ಮಾಡಿರುವುದು ತಿಳಿದು ಬರುತ್ತದೆ.
ಸಾಮಾನ್ಯವಾಗಿ ದಪ್ಪಗಿರೋವ್ರಿಗೆ ಶಕ್ತಿ ಜಾಸ್ತಿ ಅನ್ನೋ ನಂಬಿಕೆ ಇದೆ ಅಲ್ವಾ? ಹಾಗೆ, ಈ ದಪ್ಪ ವೈರ್ ಕೂಡ ಹೆಚ್ಚು ಮಾಹಿತಿ ರವಾನಿಸುವ ಶಕ್ತಿ ಹೊಂದಿರುತ್ತದೆ.

ನಿಮ್ಮ ಬಳಿ ವೈರ್‍ಲೆಸ್ ಎ.ಡಿ.ಎಸ್.ಎಲ್ ಮೋಡೆಮ್‍ ಇದ್ದಲ್ಲಿ, ನಿಮ್ಮ ಕಂಪ್ಯೂಟರ್ ಮತ್ತು ಮೋಡೆಮ್ ಮಧ್ಯೆ ಯಾವುದೇ ವೈರ್ ಇರುವುದಿಲ್ಲ.
ಬದಲಾಗಿ, ಇವೆರಡೂ ಸಾಧನಗಳೂ, ತರಂಗಗಳ ಮೂಲಕ ಸಂಪರ್ಕ ಸ್ಥಾಪಿಸಿಕೊಳ್ಳುತ್ತದೆ.

ಇನ್ನು, ನಿಮ್ಮ ಎ.ಡಿ.ಎಸ್.ಎಲ್ ಮೋಡೆಮ್‍ನಿಂದ (ಅಥವಾ ಸ್ಪ್ಲಿಟ್ಟರ್ ಎಂಬ ಪುಟ್ಟ ಡಬ್ಬದ ಮೂಲಕ ಹಾದು) ಟೆಲಿಫೋನ್ ವೈರ್ ಮನೆಯಿಂದ ಹೊರಹೊರಟಿರುತ್ತದೆ.

ನಿಮ್ಮ ಮನೆಯಲ್ಲಿರುವ ಸಾಧನಗಳ ಒಟ್ಟಾರೆ ನೋಟ ಹೀಗಿರಬಹುದು.

Sunday, August 2, 2009

ನಾಸ್ತಿಕ ಗೋಸುಂಬೆ

ಪುರೋಹಿತರೂ ಶಾಸ್ತ್ರಿಗಳೂ
ಧರ್ಮದ ಹೆಸರ ಬಳಸಿ
ಜನರ ಕೊಳ್ಳೆ ಹೊಡೆಯವರೆಂದು,
ಜ್ಞಾನೋದಯ ಮಾಡುವುದಾಗಿ
ಚೊಕ್ಕವಾದ ಹೊತ್ತಿಗೆಯೊಂದು ಬರೆದು,
ಚಕ್ಕಂದದಿಂದ ನಾಟಕವನಾಡಿ,
ಅದೇ ಧರ್ಮದ ಹೆಸರಲ್ಲಿ
ಕೊಳ್ಳೆ ಹೊಡೆಯುವುದೂ
ನಾಸ್ತಿಕ ಧರ್ಮದ ಒಂದು ಮುಖವೇ?

--ಶ್ರೀ

Sunday, July 19, 2009

ನಡೆಸು ಎನ್ನ ಬಿಡದೆ

ನಡೆಸು ಎನ್ನ ಬಿಡದೆ ಹಿಡಿದು
ಎಡವಿ ಬೀಳೋ ಹುಡುಗೆನದು
ತೊಡರಿ ತಡಕುವಾಗ
ತಡವಿ ಬಿಡಿಸೋ ಒಡೆಯ (ಬಿಡಿಸೆನ್ನೊಡೆಯ)

ಕೇಡನರಿಯದೆ ಮಾಡೆ
ಬಡಿದು ಸರಿಪಡಿಸೆನ್ನ
ಕೋಡ ಮೂಡದ ಹಾಗೆ
ನೋಡೆಕೊಳೊ ಹಡೆದವನೆ

ಕಡಲಿರಲಿ, ಸುಡುತಿರಲಿ
ಒಡಕಿರಲಿ, ಮಡುವಿರಲಿ,
ಅಡಿಗಡಿಗೂ ಹಿಡಿದೆನ್ನ
ದಿಟದ ಜಾಡಲಿ ಇರಿಸು

ಈ ಹಾಡನ್ನು ಹಮೀರ್ ಕಲ್ಯಾಣಿ ರಾಗಕ್ಕೆ ಅಳವಡಿಸಿದ್ದೇನೆ. ಈ ರಾಗವನ್ನು ಕೇದಾರ್ ಎಂದು ಹಿಂದೂಸ್ಥಾನಿ ಪದ್ದತಿಯಲ್ಲಿ ಹೇಳುತ್ತಾರೆ.
ಶಾಸ್ತ್ರೀಯವಾಗಿ ಹೆಚ್ಚಾಗಿ ಕಲಿತಿಲ್ಲವಾದ್ದರಿಂದ, ತಪ್ಪುಗಳಿದ್ದರೆ ಮನ್ನಿಸಿ.

ನಡೆಸು ಎನ್ನ ಬಿಡದೆ.m...


ಪ್ರಖ್ಯಾತ ಹಾಡು ’ ಹಮ್ ಕೊ ಮನ್ ಕಿ ಶಕ್ತಿ ದೇನಾ’, ಇದೇ ರಾಗದಲ್ಲಿದೆ.

--ಶ್ರೀ

Monday, June 29, 2009

ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!

ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು...


ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!



ಈ ಹಿಂದಿ ಹಾಡಿಗೂ, ಗೀತಾ ಚಿತ್ರಗೀತೆಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ?
ಇತ್ತೀಚಿಗೆ ಟಿ.ವಿ. ಮಾಧ್ಯಮದವರೂ, ಕನ್ನಡಪ್ರಭ, ಪ್ರಜಾವಾಣಿ ಮುಂತಾದ ಹೆಸರಾಂತ ಪತ್ರಿಕೆಗಳೂ, ಈ "ಜೊತೆ"ಗೆ ಕೈ ಕೊಟ್ಟು "ಸಾಥ್"ನ ಸಾಥಿಗಳಾಗಿದ್ದಾರೆ...
ಈ "ಸಾಥ್" ಪದದ ಬಳಕೆ, "ಜೊತೆ ಜೊತೆಯಲ್ಲಿ" ಎಂಬ ಅದ್ಭುತ ಹಾಡಿನಲ್ಲಿ ಬಳಸಿದ್ದರೆ ಹೇಗಿರುತ್ತಿತ್ತು ಎಂದನಿಸಿತು.
’ಜೊತೆ’ ಎಂಬ ಕನ್ನಡ ಪದವೂ ತೆರೆಮರೆಗೆ ಸರಿಯುತ್ತಿದೆಯೇ?
ನೀವು ಸಾಥ್‍ನ ಸಾಥಿಗಳಾಗಿದ್ದೀರೇ, ಜೊತೆಯ ಜೊತೆಯಲಿರುವವರೇ?

--ಶ್ರೀ

Saturday, June 27, 2009

ಹೂವು ಮತ್ತು ಟೊಂಗೆ



ಕೊನರಿದ
ಹೊಸ ಹೂಗಳ
ಸವಿಯುತ, ಆನಂದದಿ
ನಲಿಯುತ, ಹೊಗಳುತ,
ಹಳೆ ಹೂಗಳ,
ಚಿಗುರಿಸಿದ
ರೆಂಬೆ-ಟೊಂಗೆಗಳ
ಮರೆಯುವುದೆಷ್ಟು ಸುಲುಭ!

Friday, June 26, 2009

ಮನದ ಹೊಗೆ

ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು...

ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...

--ಶ್ರೀ

Tuesday, June 16, 2009

ಕಾಡುವ ಕರಿನೆರಳು

ಕಾಡುವ
ಕರಿನೆರಳನು ದಿಟ್ಟಿಸಿ
ಬೇಗುದಿಯಲಿ
ಸುಡುವುದಕಿಂತ,
ಕಂಗಳನೆತ್ತಿ
ಸುಡುವ ನೇಸರನಲಿ
ನೆಡುವುದು ಲೇಸು...

--ಶ್ರೀ
(೧೭ - ಜೂನ್ - ೨೦೦೯)

Wednesday, June 10, 2009

ಕೊಚ್ಚೆಯಿಂದ ದೂರ ಉಳಿವಿರೇಕೆ?

ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...

--ಶ್ರೀ
(೧೦ - ಜೂನ್ - ೨೦೦೯)

Monday, June 8, 2009

ಅರಿವು-ಅಳಿವು

ತಿಳಿ ನೀರೂ ಹರಿಯದೆ ನಿಲಲು
ಕೊಳೆಯುವುದು, ಹಳಸುವುದು...
ತಿಳಿವಿನ ಹರಿವು ನಿಲಲು,
ಅಳಿವಿನ ಉರುಳನು ಎಳೆದಂತಲವೇನು?

--ಶ್ರೀ
(೮ - ಜೂನ್ - ೨೦೦೯)

Friday, June 5, 2009

ತಂಪಾದ ಗುಣಗಳ ಕಂಪು

ತಂಪಾದ ಗುಣಗಳು ದೂರದಲಿರುವ ಗರಿಮೆಗಳ ಮುಟ್ಟುವುದು
ಕಂಪಾದ ಕೇದಗೆಯ ಬಳಿಗೆ ದುಂಬಿಗಳು ತಂತಾನೆ ಬರುವಂತೆ

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

--ಶ್ರೀ

(೫-ಜೂನ್-೨೦೦೯)

ಸಾಲ ಮಾಡಿ ತುಪ್ಪ ತಿನ್ನು!

ಬರೀ ತುಪ್ಪ ತಿನ್ನೋದು ನನಗೆ ಇಷ್ಟನೇ ಇಲ್ಲ...
ಆದ್ರೂ, ಕೆಳಗಿನ ಸುಭಾಷಿತವನ್ನು ಹಂಸಾನಂದಿಯವರು ಕೊಟ್ಟಾಗ, ನಾನೂ ಒಂದು ಭಾವಾನುವಾದ ಮಾಡಿಬಿಟ್ಟೆ :)

ಬೂದಿಯಾದ ಒಡಲು ಮರಳಿ ಬರುವುದೇನೋ, ಬೆಪ್ಪ!
ತಿಣುಕಿ ಸಾಲ ಮಾಡಿಯಾದ್ರೂ ತಿನ್ನೋ ನೀನು ತುಪ್ಪ!

ಸಂಸ್ಕೃತ ಮೂಲ (ಚಾರ್ವಾಕ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

--ಶ್ರೀ
(೫-ಜೂನ್-೨೦೦೯)

ದೀಪವು ನಿನ್ನದೇ...ಗಾಳಿಯು ನಿನ್ನದೇ...





















ಸ್ಠಳ: ಮನೋಕಾಮನಾ ಮಂದಿರ, ನೇಪಾಳ

ಹಿಮಾಚಲ ಪರ್ಯಟನೆ - ಬೈಜನಾಥ್



ಹಿಮಾಚಲದ ಕಾಂಗ್ರ ಗುಡ್ಡಗಾಡಿನ ತಪ್ಪಲಲ್ಲಿರುವ ಊರು - ಬೈಜನಾಥ್. ಧರ್ಮಶಾಲಾದಿಂದ ಪೂರ್ವಕ್ಕಿರುವ ಈ ಊರು ಬಿನ್ವಾ ಎಂಬ ನದಿಯ ತಟದಲ್ಲಿದೆ. ಬಿಯಾಸ್ ನದಿಯ ಉಪನದಿ ಈ ಬಿನ್ವಾ.
ಊರಿನ ಹೆಸರೇ ಸೂಚಿಸುವಂತೆ ಇಲ್ಲಿ ಬೈಜನಾಥ್ ದೇವಾಲಯವಿದೆ. ಬೈಜನಾಥನೆಂದರೆ ವೈದ್ಯನಾಥ, ಶಿವ.
ಈ ಸ್ಥಳದಲ್ಲಿ ಶಾರದಾ ಲಿಪಿಯಲ್ಲಿ ಬರೆದ ಶಿಲಾಶಾಸನಗಳು ದೊರೆಕಿವೆ. ಈ ಶಿಲಾಶಾಸನಗಳಿಂದ ಈ ಊರಿನ ಹಳೆಯ ಹೆಸರು ’ಕೀರಗ್ರಾಮ’ ಎಂದೂ, ಬಿನ್ವಾ ನದಿಯ ಹಳೆಯ ಹೆಸರು ’ಬಿಂದುಕಾ’ ಎಂದೂ ತಿಳಿದುಬರುತ್ತದೆ. ಈ ಶಿಲಾಶಾಸನಗಳಿಂದ, ಈ ದೇಗುಲವನ್ನು ಕ್ರಿ.ಶ. ೧೨೦೪ರಲ್ಲಿ ಕಟ್ಟಿದರೆಂದೂ ಹೇಳುತ್ತಾರೆ.
ಉತ್ತರ ಭಾರತದ ನಾಗರ ಶೈಲಿಯಲ್ಲಿ ಕಟ್ಟಿರುವ ಸುಂದರ ದೇಗುಲ - ಬೈಜನಾಥ್. ಇಲ್ಲಿ, ವೈದ್ಯನಾಥನ ಎದುರು(ಲಿಂಗಕ್ಕೆ ನೇರವಾಗಿ) ಎರಡು ನಂದಿ ವಿಗ್ರಹಗಳು ಕಾಣಸಿಗುತ್ತವೆ. ಪುಟ್ಟ ಮಂಟಪದೊಳಗೆ ಕುಳಿತ ನಂದಿಯೊಂದಾದರೆ, ಅದರ ಹಿಂದೆ ನಿಂತಿರುವ ನಂದಿಯೊಂದು. ಪಶ್ಚಿಮಕ್ಕೆ ಮುಖ ಮಾಡಿರುವ ಈ ದೇಗುಲದ ಮುಖಮಂಟಪಕ್ಕೆ ನಾಲ್ಕು ಕಂಬಗಳಿವೆ.
ದೇಗುಲದ ಮುಖ್ಯದ್ವಾರದ ಎಡ ಭಾಗಕ್ಕೆ, ನಿಂತಿರುವ ಗಣಪನ ವಿಗ್ರಹವೊಂದು ಕಾಣಸಿಗುತ್ತದೆ. ದೇಗುಲದ ಹೊರಭಾಗದ ಸುತ್ತಲೂ, ಸುಬ್ರಮಣ್ಯ, ಕಾಳಿ, ಪಾರ್ವತಿ ಮುಂತಾದ ಮನಸೆಳೆವ ವಿಗ್ರಹಗಳಿವೆ.

ಈ ಊರಿನಲ್ಲಿ ನಡೆವ ದಸರೆಯಲ್ಲೊಂದು ವೈಶಿಷ್ಟ್ಯವಿದೆ.
ಉತ್ತರ ಭಾರತದಲ್ಲಿ, ಸಾಮಾನ್ಯವಾಗಿ ದಸರೆಯ ಸಮಯದಲ್ಲಿ ಕಾಣಸಿಗುವುದು ’ರಾಮ-ಲೀಲ’ ಉತ್ಸವ. ಈ ಉತ್ಸವದಲ್ಲಿ, ರಾವಣ-ಕುಂಭಕರ್ಣ-ಮೇಘನಾದರ ಬೊಂಬೆಗಳನ್ನು ಸುಡುವುದು ಸರ್ವೇ ಸಾಮಾನ್ಯ.
ಆದರೆ ಈ ಊರಿನಲ್ಲಿ ರಾವಣನನ್ನು ಸುಡುವುದಿಲ್ಲ. ಈ ಸ್ಥಳದಲ್ಲಿ ಬೈಜನಾಥನನ್ನು ಕುರಿತು ರಾವಣ ತಪಗೈದಿದ್ದನೆಂಬುದು ಇಲ್ಲಿಯವರ ನಂಬಿಕೆ. ಇಲ್ಲಿ ಕೂಡ ಕೆಲ ವರ್ಷಗಳ ಹಿಂದೆ ದಸರಾ ಸಮಯದಲ್ಲಿ, ಬೇರೆಡೆಯಂತೆ ದಸರೆಯ ಸಮಯದಲ್ಲಿ ರಾವಣನ ಬೊಂಬೆ ಸುಟ್ಟಾಗ ಉತ್ಸವ ನಡೆಸಿಕೊಟ್ಟವರಿಗೆ ಸಾವಾಯ್ತಂತೆ.
ಇದೇ ರೀತಿ, ಪ್ರತಿ ವರ್ಷವೂ ರಾವಣನನ್ನು ಸುಟ್ಟಾಗ, ಒಂದಿಲ್ಲೊಂದು ಕೆಡುಕಾಗಿ, ಕೊನೆಗೆ ರಾವಣನ ಸುಡುವ ಪ್ರತೀತಿಯನ್ನು ಈಗ ನಿಲ್ಲಿಸಿದ್ದಾರೆ.

ಒಟ್ಟಿನಲ್ಲಿ, ಬೆಟ್ಟದಿಂದ ಸುತ್ತುವರಿದ, ಸಿಂಧೂ ನದಿಯ ಉಪನದಿಯ ಉಪನದಿಯ ತಟದ ಈ ಬೈಜನಾಥ್, ಕುತೂಹಲಭರಿತ ಪ್ರೇಕ್ಷಣೀಯ ಸ್ಥಳ.

--ಶ್ರೀ

Tuesday, June 2, 2009

ಕುಂದು ಬಂದಾಗ ಎದಿರಿಸುವುದು ಹೇಗೆ???

ಕುಂದು ಬಂದಾಗ ಎದಿರಿಸುವುದು ಹೇಗೆಂದು ಎಣಿಸಿರಬೇಕು
ಬೆಂದು ಉರಿವಾಗ ಮನೆ ಬಾವಿಯ ಅಗೆವುದು ತರವೇನು?

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

(೨-ಜೂನ್-೨೦೦೯)

Sunday, May 31, 2009

ಅತ್ತೆಯ ನೋವು

ಬಿಳಿಯ ಮೈಯವಳಾದರೇನು,
ಮಗಳಂತೆ ಸಲುಹಿದೆ ಸೊಸೆಯನ್ನು...
ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ
ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ!
ಮನೆಯವಳಾದಳಲ್ಲ ಹೊರಗಿನವಳೆಂದು !

ಸಮಯ ಉರುಳಿತು...
ಬಳಿಕ ನನ್ನ ಕಿಬ್ಬೊಟ್ಟೆಯ ನೋವು ಹೆಚ್ಚಾಗಿ
ಕೊನೆಗೆ ನೋವು ತಡೆಯಲಾರದೆ ನೋಡಿಕೊಂಡೆ ಏನಾಗಿದೆಯೆಂದು...
ಆಗಲೇ ನನಗೆ ಕಂಡದ್ದು, ನನ್ನಳೊಗೆ ಆಳವಾಗಿಳಿದ ಮಿರಿ-ಮಿರಿ ಮಿಂಚುವ ಚಾಕು ...
ಆ ಕಿಲಕಿಲ ನಗು ಹೆಚ್ಚಾಗಿತ್ತು...

-ಶ್ರೀ

Monday, April 27, 2009

ಮದರಂಗಿ ಹಚ್ಚಿಸಿಕೊಳುತಿಹೆನೋ, ನಲ್ಲ...


ಹಚ್ಚಿಸಿಕೊಳುತಿಹೆನೋ
ಮದರಂಗಿ, ನಲ್ಲ...
ಚಿತ್ತಾರ ಹೊತ್ತ
ಮದನಿಕೆ ನಾನೀಗ...
ಹೆಚ್ಚಿದೆ ಎನ್ನ
ಹೃದಯ ಮೃದಂಗದಾ ಬಡಿತ...
ನಿನ್ನೊಲವದಷ್ಟೆಂದು
ತಿಳಿಯುವಾ ತುಡಿತ...

--ಶ್ರೀ

[ಮದರಂಗಿ ಒಲವಿನ ಮಾಪಕ ;) ಕೈಗೆ ಹಾಕಿದ ಮದರಂಗಿ ಬಣ್ಣ ದಟ್ಟವಾಗಿ ಮೂಡಿದಷ್ಟು, ಒಲವು ಹೆಚ್ಚು ಎಂಬ ನಂಬಿಕೆ]

ಮದರಂಗಿಯ ಚಿತ್ರ ಹಾಕಿದ ಅನಿಲ್‍ಗೆ ಧನ್ಯವಾದಗಳು!

Wednesday, April 22, 2009

Thursday, April 16, 2009

ಇಂಟರ್‍ನೆಟ್ ಬಳಸೋದು ಹೇಗೆ??? - ಚಿತ್ರಕ್ಕೊಂದು ಕವನ


ಸಿಗುವುದೇನಿಲ್ಲಿ
ನನಗೊಂದು ಒಳ್ಳೆಯ ಹೊತ್ತಿಗೆ...?
ತಿಳಿಯಬೇಕಿಂದು ನಾ
ಬಳಸುವುದು ಹೇಗೆಂದು ಇಂಟರ್‍ನೆಟ್ಟು...

ನನಗಿಲ್ಲಿರುವುದು ಬೇಕಿಲ್ಲ,
ಕಳಚಿಕೊಳ್ಳುವೆ ಮೆತ್ತಗೆ...
ದಿನವೂ ಸಿಗುತಿಹುದು
ಬರೀ ಕಸ-ಕೊಳಕು-ಹೊಟ್ಟು...

ಪಡಬಾರದ ಪಾಡು
ನನ್ನ ಪುಟ್ಟ ಹೊಟ್ಟೆಗೆ...
ಗೂಗಲಿಸಬೇಕಿದೆ ನಾ
ಗಿಟ್ಟಿಸಲು ಮೆಚ್ಚಿನಾ ಹಿಟ್ಟು...

--ಶ್ರೀ

’ಚಿತ್ರಕ್ಕಾಗಿ ಕೊರೆ’ ಎಂದು ಕರೆ ನೀಡಿದ ಬಾಳಿಗರಿಗೆ ನನ್ನಿ! :)

Thursday, April 9, 2009

ದೂರದ ಬೆಟ್ಟ ನುಣ್ಣಗೆ...

ಕಮರಿ-ಕಂದರಗಳ
ಹಂದರವೂ,
ಸುಂದರ ಮೊಲದಂತೆ ಮೂಡುವುದು...

ಸಿಡಿಗುಂಡಂತೆಗರುವ
ಬೆಂಕಿಯುಂಡೆಗಳೂ,
ಬಂಗಾರದ ಚೆಂಡಂತೆ ಬೆಳಗುವುದು...

--ಶ್ರೀ
(೯ - ಏಪ್ರಿಲ್ - ೨೦೦೯)

Thursday, April 2, 2009

ಅಂಗಳಕಿಂದು ಬಾರೋ ಕೃಷ್ಣಯ್ಯ...



ಅಂಗಳಕಿಂದು ಬಾರೋ ಕೃಷ್ಣಯ್ಯ
ಅಂಗಳಕಿಂದು ಬಾರೋ || ಪಲ್ಲವಿ ||

ತಿಂಗಳ ಮೊಗದ ಚೆನ್ನಿಗರಾಯನೇ
ಮಂಗಳವನ್ನು ತಾರೋ... || ಅನು ಪಲ್ಲವಿ ||

ಕಾಲಿಗೆ ಗೆಜ್ಜೆಯ ಕಟ್ಟಿ
ಹಾಲಿನ ಹೆಜ್ಜೆಯನಿಟ್ಟು
ಕುಣಿ ಕುಣಿದಾಡುತಾ ಬಾರೋ || ೧ ||

ಹಳದಿ ರೇಷಿಮೆ ಹೊದ್ದು
ಬಿಳಿಯ ಮುದ್ದೆಯ ಮೆದ್ದು
ಮುದ್ದಿನ ಮೊಗವನು ತೋರೋ || ೨ ||

ಚೆಂದದ ಹೂಗಳ ಧರಿಸಿ
ಚಂದನ ದೇಹಕೆ ಬಳಸಿ
ಗೋಗಳ ಒಲಿಸಲು ಬಾರೋ || ೩ ||

ಚಿಣ್ಣರ ಒಡನೆ ಮೆರೆದು
ಬಣ್ಣದ ಗೋಪಿಯರೆಳೆದು
ತುಂಟಾಟವಾಡಲು ಬಾರೋ || ೪ ||

ವಂಕಿಯ ತೋಳಿಗೆ ಹೇರಿ
ಬಿಂಕದ ನಗುವನು ಬೀರಿ
ಕೊಳಲನು ಊದಲು ಬಾರೋ || ೫ ||

ನವಿಲಗರಿಯನು ತೊಟ್ಟು
ಸವಿಯನು ಹರಿಯಲು ಬಿಟ್ಟು
ನಲಿ ನಲಿದಾಡುತಾ ಬಾರೋ || ೬ ||

--ಶ್ರೀ
(೩೧-ಮಾರ್ಚ್-೨೦೦೯)

Wednesday, April 1, 2009

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ



ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

ಹನುಮನು ದ್ರೋಣ ಪರ್ವತದ ಕಡೆಗೆ ಹೊರಡಲು ಅನುವಾದಾಗ, ತನ್ನ ಸಹಚರರು ನಿದ್ರೆಯಲ್ಲಿರುದುವುದನ್ನರಿತು, ಅವರನ್ನು ಅಲ್ಲೇ ಬಿಟ್ಟು ದ್ರೋಣ ಪರ್ವತಕ್ಕೆ ಹೊರಟು ಹೋಗುತ್ತಾನೆ.
ಹನುಮಂತನಿಗೆ ಸಂಜೀವಿನಿ ದೊರಕುವ ವೇಳೆಗೆ, ಹೆಚ್ಚು ಕಾಲ ಕಳೆದಿದ್ದು, ಹನುಮನು ಝಾಕೂ ಋಷಿಯನ್ನು ಭೇಟಿ ಮಾಡದೆ ಲಕ್ಷ್ಮಣನನ್ನು ಉಳಿಸಲು ಲಂಕೆಗೆ ಹೊರಡುತ್ತಾನೆ.
ಲಕ್ಷ್ಮಣನು ಲಂಕೆಯಲ್ಲಿ ಸಂಜೀವಿನಿ ಮೂಲಿಕೆಯಿಂದ ಚೇತರಿಸುಕೊಳ್ಳುತ್ತಾನೆ.

ಇತ್ತ, ಝಾಕೂ ಋಷಿಯು ಹನುಮನನ್ನು ಮರು ಕಾಣದೆ ಚಡಪಡಿಸುತ್ತಿರುತ್ತಾನೆ. ಹನುಮನು ತನ್ನ ಮಾತನ್ನು ಉಳಿಸಿಕೊಳ್ಳಲು, ಮತ್ತೆ ಝಾಕೂ ಋಷಿಯನ್ನು ಭೇಟಿ ಮಾಡುತ್ತಾನೆ.
ಝಾಕೂ ಋಷಿಗೆ ಸಂಜೀವಿನಿ ದೊರಕಿದ ವಿವರವನ್ನು ತಿಳಿಸಿ, ಹೆಚ್ಚು ಕಾಲವಿಲ್ಲದ್ದರಿಂದ ಲಂಕೆಗೆ ತಮ್ಮನ್ನು ಭೇಟಿ ಮಾಡದೆ ಹಾಗೆ ಹೊರಟು ಹೋಗಬೇಕಾಯಿತೆಂದು ಅರಿಕೆ ಮಾಡಿಕೊಳ್ಳುತ್ತಾನೆ.
ಈ ಸ್ಥಳದಿಂದ ಹನುಮನು ಹೊರಟ ಮೇಲೆ, ಇಲ್ಲಿ ಹನುಮನ ಒಂದು ಉದ್ಭವ ಮೂರ್ತಿ ಕಾಣಿಸುಕೊಳ್ಳುತ್ತದೆ.

ಹನುಮಂತನ ನೆನಪಿಗಾಗಿ ಝಾಕು ಋಷಿ ಈ ಮಂದಿರವನ್ನು ಕಟ್ಟಿದ್ದರೆಂದು ಪ್ರತೀತಿ.
ಅಂದಿನಿಂದ ಈ ಮೂರ್ತಿಯನ್ನೇ ಇಲ್ಲಿ ಪೂಜಿಸುತ್ತಿದ್ದಾರಂತೆ...ಹನುಮನ ಸಹಚರರು ಅಂದಿನಿಂದ ಇಂದಿನವರೆಗೂ ಇಲ್ಲೇ ಇದ್ದಾರೆಂದು, ಹಾಗಾಗಿ ಈ ಸ್ಥಳದಲ್ಲಿ ಕೋತಿಗಳ ಸಂಖ್ಯೆ ಹೆಚ್ಚು ಎಂಬ ನಂಬಿಕೆ.

ಈ ದೇಗುಲದ ಪರಿಸರ ರಮ್ಯವಾಗಿದ್ದು, ದೇವದಾರು, ಪೈನ್ ಮರಗಳ ಮಧ್ಯೆ ಈ ಮಂದಿರವಿದೆ.
ಇಲ್ಲಿಂದ, ಶಿಮ್ಲಾ ನಗರದ ಮನಮೋಹಕ ದೃಶ್ಯ ಕಾಣ ಸಿಗುತ್ತದೆ.
ಇಲ್ಲಿನ ಕೋತಿಗಳು, ಪ್ರವಾಸಿಗರ ಜೇಬುಗಳನ್ನು ಆಹಾರಕ್ಕಾಗಿ ಪರೀಕ್ಷಿಸುತ್ತದೆಂದೂ, ಬ್ಯಾಗ್‍ಗಳನ್ನು ಕಸಿಯುತ್ತದೆಂದೂ ಕುಪ್ರಸಿದ್ಧಿ ಪಡೆದಿವೆ.
ಹಲವಾರು ಮಂದಿ, ಕೋತಿಗಳನ್ನು ಓಡಿಸಲು ದೊಣ್ಣೆಗಳನ್ನು ಬಳಸುತ್ತಿದ್ದುದೂ, ಕೋತಿಗಳು ಪ್ರವಾಸಿಗರ ಚಪ್ಪಲಿಗಳನ್ನು ಎತ್ತೊಯ್ದದ್ದೂ ಕಣ್ಣಾರೆ ಕಂಡೆವು.
ಇಲ್ಲಿಗೆ ಭೇಟಿ ನೀಡುವವರು ತುಸು ಎಚ್ಚರಿಕೆಯಿಂದಿದ್ದರೆ ಒಳಿತು...
ರಾಮ ಜಪದ ಮಹಿಮೆಯೋ / ನಮ್ಮ ಅದೃಷ್ಟವೋ ನಮ್ಮ ಸುತ್ತ-ಮುತ್ತ ಹತ್ತು-ಹಲವಾರು ಕೋತಿಗಳು ಬೇರೆಯವರನ್ನು ದಾಳಿ ಮಾಡಿದರೂ ಒಂದೂ ನಮ್ಮ ತಂಟೆಗೆ ಬರಲಿಲ್ಲ... :)

--ಶ್ರೀ

Monday, February 16, 2009

ಹೀಗೊಂದು ಅಳಲು

[ಈ ಚಿತ್ರಕ್ಕೆ ಕವನ ಬರೆಯಬೇಕೆಂದು ಸಂಪದದಲ್ಲಿ ಹರಿ ಪ್ರಸಾದ್ ನಾಡಿಗ್ ಕರೆ ನೀಡಿದ್ದರು]


ಇಲ್ಲದಿದ್ದರೂ ಪಟದಲಿ
ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...

ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?
ಕವಿತೆಗೇಕಾಗಲಾರೆ ನಾ ಸ್ಫೂರ್ತಿಯ ಸೆಲೆಯು?

--ಶ್ರೀ

[ಫೆಬ್ರವರಿ ೧೬, ೨೦೦೯]

Wednesday, February 11, 2009

ರವಿಯ ನಿಜ ಬಣ್ಣವೇನು???

ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ...
'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!'
ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!'
'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'
ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ...
'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'
ಎಷ್ಟು ವರ್ಷದಿಂದ ನೋಡುತ್ತಿರುವೆ ಇವನನ್ನು...ಇವನು ಜಗಮೊಂಡ...'ನಾ ಹಿಡಿದ ಮೊಲಕ್ಕೆ ಒಂದೇ ಕಿವಿ ಎಂದು ಸಾಧಿಸುವವ' ಎಂದು ಮನದಲ್ಲೆಣಿಸಿದೆ...
ತುಸು ಹೊತ್ತಿನ ನಂತರ ಅವನು ತಲೆ ಎತ್ತಿ, 'ಅಲ್ಲಿ ನೋಡೋ ಮೂರ್ಖ! ಸೂರ್ಯನದೆಷ್ಟು ಕೇಸರಿ' ಎಂದ...
ಆ ವೇಳೆಗಾಗಲೆ ಸಂಜೆಯಾಗಿತ್ತು...

--ಶ್ರೀ
(ಫೆಬ್ರವರಿ ೧೧ ೨೦೦೯)

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

"ಇಲ್ಲ ಸಲ್ಲದ
ನೆಪವ ಹೂಡಿ
ದೂರವೇಕೆ ಸರಿವೆ?
ನಲ್ಲನಿಲ್ಲಿ
ಹಪಹಪಿಸಿಹನು,
ತೋಳ್ಬಂದಿಯಾಗು
ಬಾ ಚೆಲುವೆ!"

"ಕೊಂಚ ನಿಲ್ಲಿ, ನಲ್ಲ...
ಇದಿನ್ನು ಹೊಸತಲ್ಲ!
ಮೈ ಸೋಕದ, ತುಟಿ ತಾಗದ
ಒಲವ ತುಸು ಸವಿಯಿರಲ್ಲ...
ಅವಸರವೇಕೀಗ
ಹೂಡಲು ಕಾಮನಬಿಲ್ಲ?"

--ಶ್ರೀ
(೬-ಫೆಬ್ರವರಿ-೨೦೦೯)

Tuesday, February 10, 2009

ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?

(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!

:)
--ಶ್ರೀ
(೧೦-ಫೆಬ್ರವರಿ-೨೦೦೯)

Monday, February 9, 2009

ಕಂಗಾಲಾಗಿರುವೆ ನಾನಿಲ್ಲಿ

ಕಂಗಾಲಾಗಿರುವೆ ನಾನಿಲ್ಲಿ
ನಿನ್ನ ಬರುವಿಕೆಯನ್ನೇ ಕಾಯುತ್ತ...
ಬರಲೇಕೆ ಇಷ್ಟು ತಡ?
ಚಿಂತೆಗಳಿರಲು ನೀ ಹತ್ತಿರ ಸುಳಿಯೆ;
ನೀ ಬರದೆ ಚಿಂತೆಗಳಿಗಿಲ್ಲ ಚಿತೆ...
ಅಪ್ಪಲೆನ್ನನು ಓಡಿ ಬಾರೇ,
ಓ ನಿದ್ರಾ ದೇವಿ!

--ಶ್ರೀ
(೯-ಫೆಬ್ರವರಿ-೯)

Sunday, February 1, 2009

ಇಲ್ಲಿ ಕುಳಿತರೆ ಸ್ವರ್ಗವಂತೆ...


ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ!
’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ...
ಅದೇನೋ ’ಕವಿ ಕಂಡ ರವಿ’ ಇಲ್ಲೇ ಹುಟ್ಟುವುದಂತೆ! ಕುವೆಂಪು ಕುಳಿತ ’ಕವಿ ಶೈಲ’ವೂ ಈ ಸ್ಥಳದ ಮುಂದೆ ನಾಚಿ ನೀರಾಗುವುದಂತೆ...
ತಿಳಿ ನೀರ ಜಲಲ ಜಲಲ ಧಾರೆ ಹರಿಯುವುದುಂಟಂತೆ...ಇಲ್ಲಿನ ಚೈತ್ರದ ಚಿಗುರೆಲೆಗೆ ಹೊಸ ರಂಗುಂಟಂತೆ...
ಇಲ್ಲಿನ ಹಕ್ಕಿಗಳ ಕಂಠದಲ್ಲಿ ಅದೇನೋ ಹೊಸ ನಾದ, ಹೊಸ ರಾಗವಂತೆ!
ಎಲ್ಲೂ ಇಲ್ಲದ್ದೂ ಇಲ್ಲಿದೆಯಂತೆ...ಇಲ್ಲಿರುವ ಬೆಟ್ಟಗಳ ಮೈಮಾಟವನ್ನು ಬಣ್ಣಿಸಲಾರರಂತೆ, ಒಂದಕಿಂತ ಒಂದ ನೋಡುವುದೇ ಸೊಬಗಂತೆ...
ಒಂದು ನಂದಿಯಂತೆ ಕಂಡರೆ, ಮತ್ತೊಂದು ಕುದುರೆಮುಖವಂತೆ...ಹೀಗೆ ಒಬ್ಬೊಬ್ಬರೂ ಹೇಳಿದ್ದೋ ಹೇಳಿದ್ದು...

ನಾನು ಇಲ್ಲಿಗೆ ಬಂದು ಅದೆಷ್ಟು ಸಮಯ ಕಳಿಯಿತೋ ಕಾಣೆ...ನನಗೆ ಇದಾವುದೂ ಕಾಣುತ್ತಲೇ ಇಲ್ಲ...
ಏನಿದೇ ಇಲ್ಲಿ ಅಂಥದ್ದು! ಅದೇಕೆ ಜನರಿಗೆ ಈ ಜಾಗದ ಬಗ್ಗೆ ಅಷ್ಟೊಂದು ಒಲವು?

ಈ ಜಾಗದಲ್ಲಿ ಹೊಸತನವನ್ನು ಹುಡುಕುತ್ತಾ ತಲ್ಲೀನನಾಗಿದ್ದ ಎನಗೆ, ಮಗುವೊಂದು ಜೋರಾಗಿ ಅತ್ತಾಗಲೇ ಎಚ್ಚರವಾದದ್ದು...
ಪಕ್ಕದಲ್ಲೇ ರಚ್ಚೆ ಹಿಡಿದ ಮಗುವಿಗೆ ತಾಯಿ ಹೇಳಿದ ಮಾತಷ್ಟೆ ಕೇಳುತ್ತಿದೆ,
’ಅಗೋ, ನೋಡು, ಸೂರ್ಯ-ಮಾಮಾ, ಕೆಂಪಗೆ, ಕಿತ್ತಲೆ ಹಣ್ಣಂತೆ ಕಾಣುತ್ತಿದ್ದಾನೆ, ಅದೇನು ಚೆಂದ! ಬೇಕೇನೋ ನಿನಗೆ, ಗುಂಡನೆಯ ಕಿತ್ತಲೆಯ ಹಣ್ಣು?’...
ನನಗೇಕೆ ಕಾಣದಾ ಕಿತ್ತಲೆ ಹಣ್ಣು...ನನಗೂ ಬೇಕದು...ಆದರೆ ಕಾಣದಲ್ಲ...!

ಕಿತ್ತಲೆಯನ್ನೇ ನೆನೆಯುತ್ತಾ ದಿಗಂತವನು ದಿಟ್ಟಿಸಿದೆ ನಾನು ಮತ್ತೆ........ಕಿತ್ತಲೆಯ ಹುಡುಕುತ್ತಾ ಅದೆಷ್ಟು ಹೊತ್ತು ಕಳೆಯಿತೋ ಕಾಣೆ...
ಗದ್ದಲ ಮಾಡುತ್ತ ಹುಡುಗರ ಗುಂಪೊಂದು ಹಾದು ಹೋದಾಗಲೇ ಮತ್ತೆ ಎಚ್ಚರ...
ಗುಂಪಿನಲ್ಲೇ ಇದ್ದವನೊಬ್ಬ ಕೂಗಿದ, ’ಶಬ್ದ ಮಾಡದಿರಿ, ಇಲ್ಲಿ ’ಮಕವಾಕು*’ ಎಂಬ ಹಕ್ಕಿಯ ಇಂಪು ಕೇಳುವುದು’...
ನಾನು ಎಂದೂ ಒಬ್ಬನೇ ಒದರಿಕೊಳ್ಳುವುದೇ ಇಲ್ಲ, ಆದರೂ ಎನ್ನ ಮನಕೇ ಗದರಿದೆ - ’ಸದ್ದು! ಹೊಸ ಹಕ್ಕಿಯ ದನಿಯಂತೆ! ಗಮನವಿಟ್ಟು ಕೇಳು’...
ಊಹೂಂ...ಯಾವ ಹಕ್ಕಿಯ ಶಬ್ದವೂ ಕೇಳದೆನಗೆ...ನನಗೇನಾಗಿದೆ???
ಮತ್ತೆ ಮತ್ತೆ ದಿಟ್ಟಿಸಿ ನೋಡುತ್ತಿದ್ದೇನೆ ಕಿತ್ತಲೆ ಹಣ್ಣು ಬೇಕೆಂದು... ಮೈಯೆಲ್ಲಾ ಕಿವಿಯಾಗಿಸಿ ಹೊಸ ಹಕ್ಕಿಯ ಸವಿ ಕೂಗ ಕೇಳಲು...
ಇಲ್ಲ ಕಿತ್ತಲೆಯೂ ಇಲ್ಲ, ಕೂದನಿಯೂ ಇಲ್ಲ...

ಬಹುಷಃ ಯಾರಿಗೂ ನೋಡಿ ಸುಸ್ತಾಗದಿರಬಹುದು, ನನಗಂತೂ ಇಂದು ನನ್ನ ಸುತ್ತಲಿನ ಪರಿಸರವನ್ನು ನೋಡಿ ನೋಡಿ ದಣಿವಾಗಿದೆಯೆನಗೆ...
ಒಂದೇ ಕಡೆ ಕುಳಿತಿದ್ದರೂ ತಣಿದಿರುವೆ ನಾನು...
ಆದರೂ ನೆನ್ನೆಯಿಂದ ಅದೇನೋ ಆಹ್ಲಾದ...ಈ ದಣಿವಲ್ಲೂ ಹೊಸ ಚೈತನ್ಯವೆನಗೆ...
ಗೆಳೆಯರು ವಿವರಿಸಿದ ’ಸ್ವರ್ಗ’ ನನಗೆ ಈ ಸ್ಥಳದಲ್ಲಿ ಇಂದು ಕಾಣದಿರಬಹುದು, ಆದರೆ ನಾನು ನೆನ್ನೆಯೇ ಸ್ವರ್ಗಕ್ಕೆ ಕಾಲಿಟ್ಟಾಯ್ತಲ್ಲ...!
ನೆನ್ನೆಯೇ ನನ್ನ ಒಲವಿನ ಪ್ರಸ್ತಾಪಕ್ಕೆ ಅವಳ ಒಪ್ಪಿಗೆಯಾಯ್ತಲ್ಲ...ಆದಾದ ಕ್ಷಣದಿಂದ ನನ್ನ ಪ್ರಪಂಚವೇ ಬದಲಾದದ್ದು ಹೇಗೆ?
ಇವಳ ಮಾತೇ ನನಗೆ ಹೊಸ ಹಕ್ಕಿಯ ಹಾಡಾದಾಗ, ಇಲ್ಲೇಕೆ ಕುಳಿತಿದ್ದೀನಿಂದು ನಾನು ಮಕವಾಕುವಿನ ದನಿ ಕೇಳಲು?
ಯಾವ ಕಡೆ ನೋಡಿದರು ಮನದ ಚೆಲುವೆಯ ಮುಖವೇ ಕಂಡಿರುವಾಗ, ಇಲ್ಲಿ ಕಾಣುವ ಕಿತ್ತಲೆ ಹಣ್ಣೇಕೆನಗೆ...
ನನ್ನೊಲುಮೆಯ ಚೆಲುವೆಯೊಂದಿಗೆ ಇನ್ನೊಮ್ಮೆ ಎಂದಾದರೂ ಈ ಸ್ಥಳಕ್ಕೆ ಬರುವ...ಈಗಂತೂ ಜನರು ಹೇಳಿದ್ದೊಂದೂ ಕಾಣದೆನಗೆ...ಒಲವಿನ ಅಮಲೆಂದರೆ ಇದೇ ಏನೋ...

--ಶ್ರೀ

*ಮಕವಾಕು - ನನ್ನ ಕಲ್ಪನೆಯ ಹಕ್ಕಿ

(ಚಿತ್ರ ಕೃಪೆ: ಹರಿ ಪ್ರಸಾದ್ ನಾಡಿಗ್)

ಮಾಸದ ನೆನಪು...

ಮರೆಯಬೇಕೆಂಬ
ಕಹಿ ನೆನಪೊಂದ,
ಮರೆಯಲೇಬೇಕೆಂದು
ಹಟ ಹಿಡಿದು,
ಮರು ನೆನೆದು
ನೆನೆ ನೆನೆದು, ಆ
ಕರಿ ನೆನಪು ಸದಾ
ಮನದಲ್ಲೇ ಮಾಸದೆ
ನೆಲೆ ನಿಲ್ಲುವಂತೆ
ಹೆಪ್ಪುಗಟ್ಟಿಸಿದೆನಲ್ಲ... :(

--ಶ್ರೀ
(೩೦-ಜನವರಿ-೨೦೦೯)

Tuesday, January 27, 2009

ದಾರಿಯ ತೋರೋ ಸಿರಿ ರಾಮ...



ರಾಮಾಯಣದ ಸುಂದರ ಕಾಂಡವು ಬಹು ಜನಪ್ರಿಯವಾದದ್ದೇ...
ನಾನು ಈ ಸುಂದರ ಕಾಂಡದಲ್ಲಿ ಬಣ್ಣಿಸಿರುವ ಒಂದು ಸನ್ನಿವೇಶವನ್ನು ಭಿನ್ನ ರೀತಿಯಲ್ಲಿ ಚಿತ್ರಿಸ ಬಯಸುತ್ತೇನೆ...

ದಾರಿಯ ತೋರೋ ಸಿರಿ ರಾಮ
ದಾರಿಯ ತೋರೋ ಸಿರಿ ರಾಮ ದಿನವೂ
ಜಪಿಸುವೆ ನಾನು ನಿನ್ನ ನಾಮ...

ಜಾಂಬವನಿಂದಲಿ ಬಲವನು ಅರಿತೆ
ಅಂಬರದಾಚೆಗೆ ಒಮ್ಮೆಲೆ ಬೆಳೆದೆ
ಸಾಗರವನ್ನು ಸುಲಭದಿ ಅಳೆದೆ || ದಾರಿಯ ||

ಮೈನಾಕವನು ಲಂಘಿಸಿ ನಡೆದೆ
ಲಂಕಿಣಿಯನ್ನು ಕುಟ್ಟಿ ನಾ ತರಿದೆ
ಬಿಂಕದಿ ನಾನು ಲಂಕೆಲಿ ಮೆರೆದೆ || ದಾರಿಯ ||

ಗರುವವು ಎಂದು ಮೆಟ್ಟಿತೋ ಅರಿಯೆ
ಮಾತೆಯ ಕಾಣದೆ ಎಲ್ಲೆಡೆ ಅಲೆದೆ
ನಿನ್ನಯ ನಾಮವ ಏತಕೋ ಮರೆತೆ || ದಾರಿಯ ||

ಅನುದಿನ ಸ್ಮರಿಸುವೆ ನಿನ್ನ ನಾಮ...
ಅನುಕ್ಷಣ ನೆನಯುವೆ ನಿನ್ನ ನಾಮ...
ದಾರಿಯ ತೋರೋ ಸಿರಿ ರಾಮ || ದಾರಿಯ ||

(ಈ ರಚನೆ ಅಹಿರ್-ಭೈರವ್/ಚಕ್ರವಾಕ ಧಾಟಿಯಲ್ಲಿದೆ)

--ಶ್ರೀ
(೨೨-ಜನವರಿ-೨೦೦೯)

ಅಮ್ಮನ ಕೋಪ...

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ
ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ

ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ
ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ

ತಣಿಯದಮ್ಮನ ಕೋಪ, ಬರಳು ಅಮ್ಮನು ಬಳಿಗೆ, ಸರಿಯಿತು ವಿರಸದಾ ಗಳಿಗೆ
ಮುನಿದ ಅಮ್ಮನಾ ಒಲಿಸುವುದು ಹೇಗೆಂದು ಎಣಿಸುತಾ ನಿಂತನೊಂದುಗಳಿಗೆ

ಕಣ್ಕೆಂಪು ಬೇಕಿಲ್ಲ, ಓಲೈಸಬೇಕಲ್ಲ ರಮಿಸಲೋಡಿದನು ಪುಟ್ಟ
ತಪ್ಪಿನರಿತು ತಾನು ಅಮ್ಮನಾ ಬಿಗಿಹಿಡಿದು ಗಳಗಳನೆ ತುಂಟನತ್ತ

ಮುನಿದ ಅಮ್ಮನು ಕೂಡ ಕಂದನಾ ಕಂಗಳಲಿ ಅಳುವ ಸಹಿಸುವುದಿಲ್ಲ
ಇಳಿಯಿತು ಮುನಿಸೆಲ್ಲ, ಬರಸೆಳೆದು ಮಗನ ಇತ್ತಳು ಮುತ್ತ ಸಿಹಿ ಬೆಲ್ಲ

ತುಂಬಿದಾ ಕಂಗಳಲು ಮಗುವು ತುಸು ನಕ್ಕನು, ವಿರಸಕೆ ಜಾಗವಿನ್ನಿಲ್ಲ
ಸಿಹಿ ಒಲವು ಹರಿಯಿತಲ್ಲೆಲ್ಲಾ...ಸಿಹಿ ಒಲವು ಹರಿಯಿತಲ್ಲೆಲ್ಲಾ...

(೧೪-೧೫ ಜನವರಿ ೨೦೦೯)

-ಶ್ರೀ

Wednesday, January 7, 2009

ಕ್ಲಿಕ್ಕಿಸಿದಾಗ...

ಮೌಸ್ ಕ್ಲಿಕ್ಕಿಸೋದು ಪ್ರತಿ ದಿನದ ಗೋಳೇ ಬಿಡಿ...ಬಿಡುವಿದ್ದಾಗ ಕ್ಯಾಮರ ಕ್ಲಿಕ್ಕಿಸೋ ಪ್ರಯತ್ನ...
ಹೇಗಿದೆ ಹೇಳಿ...?

ಬೇಟೆಗೆ ಹೊಂಚು...
(ಹಿಮಾಲಯದ ತಪ್ಪಲಲ್ಲಿ ಕಂಡ ದೊಣ್ಣೆಕೇತ)



ನಾನೇ ರಾಜಕುಮಾರ...!
(ಗೋಪಾಲಸ್ವಾಮಿ ಬೆಟ್ಟದಲ್ಲಿ)



ನನ್ ಟೋಪಿ...ನಿಂಗ್ ಕೊಡಲ್ಲ...!
(ಶೃಂಗೇರಿ ಶಾರದಾ ಪೀಠ)



ಕೆಂಪಾದವೋ ಎಲ್ಲ ಕೆಂಪಾದವೋ...
(ಚಂದ್ರಗಿರಿ, ತಿರುಪತಿ ಬಳಿ)


ನಿಮಗೆ ಯಾವುದು ಮೆಚ್ಚೆನಿಸಿತು ಹೇಳಿ...

--ಶ್ರೀ
(ಕೆಲವನ್ನು ಇಮೇಜ್ ಎಡಿಟರ್‍ನಲ್ಲಿ ಎಡಿಟ್ ಮಾಡಲಾಗಿದೆ...)