Showing posts with label ಬಿನ್ವಾ. Show all posts
Showing posts with label ಬಿನ್ವಾ. Show all posts

Friday, June 5, 2009

ಹಿಮಾಚಲ ಪರ್ಯಟನೆ - ಬೈಜನಾಥ್



ಹಿಮಾಚಲದ ಕಾಂಗ್ರ ಗುಡ್ಡಗಾಡಿನ ತಪ್ಪಲಲ್ಲಿರುವ ಊರು - ಬೈಜನಾಥ್. ಧರ್ಮಶಾಲಾದಿಂದ ಪೂರ್ವಕ್ಕಿರುವ ಈ ಊರು ಬಿನ್ವಾ ಎಂಬ ನದಿಯ ತಟದಲ್ಲಿದೆ. ಬಿಯಾಸ್ ನದಿಯ ಉಪನದಿ ಈ ಬಿನ್ವಾ.
ಊರಿನ ಹೆಸರೇ ಸೂಚಿಸುವಂತೆ ಇಲ್ಲಿ ಬೈಜನಾಥ್ ದೇವಾಲಯವಿದೆ. ಬೈಜನಾಥನೆಂದರೆ ವೈದ್ಯನಾಥ, ಶಿವ.
ಈ ಸ್ಥಳದಲ್ಲಿ ಶಾರದಾ ಲಿಪಿಯಲ್ಲಿ ಬರೆದ ಶಿಲಾಶಾಸನಗಳು ದೊರೆಕಿವೆ. ಈ ಶಿಲಾಶಾಸನಗಳಿಂದ ಈ ಊರಿನ ಹಳೆಯ ಹೆಸರು ’ಕೀರಗ್ರಾಮ’ ಎಂದೂ, ಬಿನ್ವಾ ನದಿಯ ಹಳೆಯ ಹೆಸರು ’ಬಿಂದುಕಾ’ ಎಂದೂ ತಿಳಿದುಬರುತ್ತದೆ. ಈ ಶಿಲಾಶಾಸನಗಳಿಂದ, ಈ ದೇಗುಲವನ್ನು ಕ್ರಿ.ಶ. ೧೨೦೪ರಲ್ಲಿ ಕಟ್ಟಿದರೆಂದೂ ಹೇಳುತ್ತಾರೆ.
ಉತ್ತರ ಭಾರತದ ನಾಗರ ಶೈಲಿಯಲ್ಲಿ ಕಟ್ಟಿರುವ ಸುಂದರ ದೇಗುಲ - ಬೈಜನಾಥ್. ಇಲ್ಲಿ, ವೈದ್ಯನಾಥನ ಎದುರು(ಲಿಂಗಕ್ಕೆ ನೇರವಾಗಿ) ಎರಡು ನಂದಿ ವಿಗ್ರಹಗಳು ಕಾಣಸಿಗುತ್ತವೆ. ಪುಟ್ಟ ಮಂಟಪದೊಳಗೆ ಕುಳಿತ ನಂದಿಯೊಂದಾದರೆ, ಅದರ ಹಿಂದೆ ನಿಂತಿರುವ ನಂದಿಯೊಂದು. ಪಶ್ಚಿಮಕ್ಕೆ ಮುಖ ಮಾಡಿರುವ ಈ ದೇಗುಲದ ಮುಖಮಂಟಪಕ್ಕೆ ನಾಲ್ಕು ಕಂಬಗಳಿವೆ.
ದೇಗುಲದ ಮುಖ್ಯದ್ವಾರದ ಎಡ ಭಾಗಕ್ಕೆ, ನಿಂತಿರುವ ಗಣಪನ ವಿಗ್ರಹವೊಂದು ಕಾಣಸಿಗುತ್ತದೆ. ದೇಗುಲದ ಹೊರಭಾಗದ ಸುತ್ತಲೂ, ಸುಬ್ರಮಣ್ಯ, ಕಾಳಿ, ಪಾರ್ವತಿ ಮುಂತಾದ ಮನಸೆಳೆವ ವಿಗ್ರಹಗಳಿವೆ.

ಈ ಊರಿನಲ್ಲಿ ನಡೆವ ದಸರೆಯಲ್ಲೊಂದು ವೈಶಿಷ್ಟ್ಯವಿದೆ.
ಉತ್ತರ ಭಾರತದಲ್ಲಿ, ಸಾಮಾನ್ಯವಾಗಿ ದಸರೆಯ ಸಮಯದಲ್ಲಿ ಕಾಣಸಿಗುವುದು ’ರಾಮ-ಲೀಲ’ ಉತ್ಸವ. ಈ ಉತ್ಸವದಲ್ಲಿ, ರಾವಣ-ಕುಂಭಕರ್ಣ-ಮೇಘನಾದರ ಬೊಂಬೆಗಳನ್ನು ಸುಡುವುದು ಸರ್ವೇ ಸಾಮಾನ್ಯ.
ಆದರೆ ಈ ಊರಿನಲ್ಲಿ ರಾವಣನನ್ನು ಸುಡುವುದಿಲ್ಲ. ಈ ಸ್ಥಳದಲ್ಲಿ ಬೈಜನಾಥನನ್ನು ಕುರಿತು ರಾವಣ ತಪಗೈದಿದ್ದನೆಂಬುದು ಇಲ್ಲಿಯವರ ನಂಬಿಕೆ. ಇಲ್ಲಿ ಕೂಡ ಕೆಲ ವರ್ಷಗಳ ಹಿಂದೆ ದಸರಾ ಸಮಯದಲ್ಲಿ, ಬೇರೆಡೆಯಂತೆ ದಸರೆಯ ಸಮಯದಲ್ಲಿ ರಾವಣನ ಬೊಂಬೆ ಸುಟ್ಟಾಗ ಉತ್ಸವ ನಡೆಸಿಕೊಟ್ಟವರಿಗೆ ಸಾವಾಯ್ತಂತೆ.
ಇದೇ ರೀತಿ, ಪ್ರತಿ ವರ್ಷವೂ ರಾವಣನನ್ನು ಸುಟ್ಟಾಗ, ಒಂದಿಲ್ಲೊಂದು ಕೆಡುಕಾಗಿ, ಕೊನೆಗೆ ರಾವಣನ ಸುಡುವ ಪ್ರತೀತಿಯನ್ನು ಈಗ ನಿಲ್ಲಿಸಿದ್ದಾರೆ.

ಒಟ್ಟಿನಲ್ಲಿ, ಬೆಟ್ಟದಿಂದ ಸುತ್ತುವರಿದ, ಸಿಂಧೂ ನದಿಯ ಉಪನದಿಯ ಉಪನದಿಯ ತಟದ ಈ ಬೈಜನಾಥ್, ಕುತೂಹಲಭರಿತ ಪ್ರೇಕ್ಷಣೀಯ ಸ್ಥಳ.

--ಶ್ರೀ