Thursday, September 1, 2011

ನುಣುಪಾದ ಕೆನ್ನೆಯ ಗುಟ್ಟು

ಚೆಲುವೆ,
ಮೊದಲಿಗಿಂತಲೂ
ಹೆಚ್ಚು
ನುಣುಪಾದ
ನಿನ್ನ ಕೆನ್ನೆಗೆ
ಸದಾ ನಾನಿಡುವ
ಮುತ್ತಿನ ಸುರಿಮಳೆಯೇ
ಕಾರಣವಲ್ಲವೇ?

*
ಸರಸಕ್ಕೆಂದು
ಸನಿಹಕೆ ಬಂದಾಗ
ಸರ್ರನೆ ದೂರ
ಸರಿಯುವ
ನಿನ್ನ ಮನದಲ್ಲಿ
ನಾನು
ಮತ್ತೆ ಹಿಡಿದು
ಮುದ್ದಾಡಬೇಕೆಂಬ
ಬಯಕೆ ಇದೆಯೆಂದು
ನನಗೂ ಗೊತ್ತು :)

--ಶ್ರೀ
೨ ಸೆಪ್ಟೆಂಬರ್ ೨೦೧೧

Friday, August 12, 2011

ಅರಿವಿನ ಅಲೆಗಳು - ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಮಾಡುವುದು ಹೇಗೆ?

ಸ್ವತಂತ್ರ ಹಬ್ಬದ ಸಲುವಾಗಿ ಸಂಚಯದ ಸಂಚಲದಿಂದ ಮುಕ್ತ ತಂತ್ರಾಂಶದ ಬಗ್ಗೆ ಏಳುತ್ತಿರುವ ಅರಿವಿನ ಅಲೆಗಳಲ್ಲಿ ನನ್ನ ಪುಟ್ಟ ಪಾತ್ರವೂ ಇದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ.

ಹದಿನಾಲ್ಕು ಅಲೆಗಳಲ್ಲಿ ಒಂದಾಗಿ ಮುಕ್ತ ತಂತ್ರಾಂಶ ಬಳಸಿ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಮಾಡುವುದು ಹೇಗೆ ಎಂಬುದಾಗಿ ಬರೆದ ಬರಹ:’ಯೋಜನಾ ನಿರ್ವಹಣೆ - ತಲೆ ಬಿಸಿ ಏಕೆ?’ ಇಂದು ಪ್ರಕಟವಾಗಿದೆ.ಓದಿ ನಿಮ್ಮ ಅನಿಸಿಕೆ ಹೇಳಿ...

--ಶ್ರೀ

Monday, July 25, 2011

ಮೌನ-ತಾಪ

ದಿನಪೂರ್ತಿ
ಹೆಂಡತಿಯ
ಮೌನವ್ರತದಿಂದ
ತಲೆಕೆಟ್ಟು
ಕಂಗೆಟ್ಟಿದ್ದ
ಗಂಡನಿಗೆ,
ಅವಳು,
’ಥೂ...ಹಾಳಾದ್ದು...
ಲಿಪ್‍ಸ್ಟಿಕ್ ಕಳೆದುಹೋಯ್ತು’
ಎಂದು
ಕನಸಲಿ ಉಲಿದಾಗ
ನೆಮ್ಮದಿ-ನಿಟ್ಟುಸಿರು-ನಿದ್ದೆ...

--ಶ್ರೀ
೨೪-ಜುಲೈ-೨೦೧೧

Saturday, July 23, 2011

ಆರೈಕೆ

ನಿತ್ಯ ನೀರೆರೆದು
ಹೂಗಿಡಗಳ
ಬೆಳೆಸುವುದು
ಕಷ್ಟವೆಂದು
ಮನೆಯೊಳು ತಂದಿಟ್ಟ
ಪ್ಲಾಸ್ಟಿಕ್ ಹೂಗಳೂ
ಬಾಡುವುದು
ಮಾಸುವುದು
ಸಮಯದಿ
ಧೂಳ ಕೊಡವದಿರಲು...

--ಶ್ರೀ

Thursday, June 30, 2011

ಪರೋಪಕಾರಾರ್ಥಮಿದಂ ಶರೀರಂ - genX version

ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ

ಇದು ಒಂದು ಜನಜನಿತ ಸುಭಾಷಿತ...
ಇದಕ್ಕೆ ಒಪ್ಪಾಗಿ ಹಂಸಾನಂದಿಯವರು ಈ ರೀತಿ ಕನ್ನಡಕ್ಕೆ ಅನುವಾದಿಸಿದ್ದಾರೆ:

ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!

ಇದೇ ಹೂರಣವನಿಟ್ಟು, ಹೊಸ ಓರಣವ ಮಾಡಿ, ಕಾಲಕ್ಕೆ ತಕ್ಕಂತೆ ಹೀಗೆ ಹೇಳಿದರೆ ಹೇಗೆ?

ತನ್ನ ಮೈ ಸುಟ್ಟುಕೊಂಡು ಬೆಳಕ ಕೊಡುವ ಟಂಗ್‍ಸ್ಟನ್‍ನಂತೆ
ತನ್ನ ಮೈ ಸವೆಸುತ ಶುಚಿಗೊಳಿಸುವ ಸೋಪಿನಂತೆ
ತನ್ನ ಮೈ ಹಿಚಕಿಸಿಕೊಂಡು ಮದ್ದನೀವ ಆಯಿಂಟ್‍ಮೆಂಟ್ ಟ್ಯೂಬಿನಂತೆ
ಬೇರೆಯವರಿಗಾಗಿ ಮುಡಿಪಿರಲಿ ನಮ್ಮ ಜೀವನವೂ...

--ಶ್ರೀ

Monday, June 27, 2011

ಇಪ್ಪತ್ತು-ಸಾವಿರ ಕಣ್ಣುಗಳು - ನಿಮಗೊಂದು ಪುಟ್ಟ ನಮನ!

ನನ್ನ ಈ ಬ್ಲಾಗ್ ಪುಟ ಇತ್ತೀಚಿಗೆ ೧೦,೦೦೦ ಚಿಟುಕುಗಳನ್ನು(hits) ದಾಟಿತು.
ಇದರಿಂದಾಗಿ ನನ್ನ ಮನದಲ್ಲಿ ತೇಲಿಹೋದ ನೆನಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ..

ಅಕ್ಟೋಬರ್ ೨೦೦೫, ನಮ್ಮ ಆಫೀಸನ್ನು ಹೊಸದೊಂದು ಜಾಗಕ್ಕೆ ಬದಲಾಯಿಸಿದರು...
ಮೊದಲಿನ ಜಾಗಕ್ಕಿಂತ ಊರಿನ ಹೊರಭಾಗದಲ್ಲಿದ್ದರಿಂದ ಕ್ಯಾಬ್/ಶಟಲ್ ವ್ಯವಸ್ಥೆಯನ್ನು ಶುರುಮಾಡಿದರು...
ನಾನು ನನ್ನ ಎರಡು ಚಕ್ರದ ಸಂಗಾತಿಯನ್ನು ಬಿಟ್ಟು, ಕ್ಯಾಬ್ ಹಿಡಿಯಲು ಆರಂಭಿಸಿದೆ...ಇದರಿಂದಾಗಿ ಆಫೀಸಿನಲ್ಲಿರುವ ಹೊಸ ಗೆಳೆಯರ ಪರಿಚಯವಾಯ್ತು...
ಹೆಚ್ಚು ಕಡಿಮೆ ಇವರೆಲ್ಲರೂ ಬೇರೆ ಬೇರೆ ವಿಭಾಗ/ಟೀಮ್‍ಗಳಲ್ಲಿದ್ದವರು...ಇವರಲ್ಲಿ ಕೆಲವರು(೪ ಜನ) ನನಗೆ ಹೆಚ್ಚೇ ಆಪ್ತರಾಗತೊಡಗಿದರು...
ಹೆಚ್ಚು ಹೆಚ್ಚು ಪರಿಚಯಗೊಳ್ಳುತ್ತಿದ್ದಂತೆ, ಈ ನಾಲ್ವರಲ್ಲಿ ಮೂವರು ಕವಿತೆ ಬರೆಯುವವರೆಂದು ತಿಳಿಯಿತು!
ಇವರುಗಳು ಕನ್ನಡಿಗರಲ್ಲವಾದ್ದರಿಂದ, ಅವರು ಹಿಂದಿ/ಇಂಗ್ಲಿಷ್/ತೆಲುಗು ಹೀಗೆ ಬೇರೆ ಭಾಷೆಗಳಲ್ಲಿ ಬರೆಯುತ್ತಿದ್ದರು...
ಕ್ಯಾಬ್‍ನಲ್ಲಿ/ಆಫೀಸಿನಲ್ಲಿ ಸಿಕ್ಕಾಗ ಈ ಕವಿತೆಗಳ ಬಗ್ಗೆ ವಿಚಾರವಿನಿಮಯಗಳೂ/ಚರ್ಚೆಗಳೂ ನಡೆಯುತ್ತಿತ್ತು...
ಇದೇ ಸಮಯದಲ್ಲಿ ನಾನು ಇಂಟರ‍್ನೆಟ್ಟಿನಲ್ಲಿ ತೇಲಾಡಿದ ಒಂದೆರಡು ಕನ್ನಡದ ಕವಿತೆಗಳನ್ನೂ ಓದಲಾರಂಭಿಸಿದ ನೆನಪು...
ನನ್ನ ತಂದೆಯವರು ಮನೆಯಲ್ಲಿ ತಮಾಷೆಗೆ ಹಾಡುತ್ತಿದ್ದ ಚುಟುಕಗಳೂ ನೆನಪಿಗೆ ಬಂದಿರಬಹುದು...
ನಾನೂ ಒಮ್ಮೆ ಕನ್ನಡದಲ್ಲಿ ಒಂದೆರಡು ಕವನಗಳನ್ನು ಬರೆಯಲು ಪ್ರಯತ್ನಿಸೋಣವೆನಿಸಿತು...
ಹೀಗೆ ಒಮ್ಮೆ ಈ ನಾಲ್ವರು ಗೆಳೆಯರೊಂದಿಗೆ ಆಫೀಸಿನಲ್ಲಿ ಕಾಫಿ ಕುಡಿಯುತ್ತಾ ನೋಡಿದ ಕಾಮನಬಿಲ್ಲು ಸ್ಫೂರ್ತಿಯಾಗಿ, ನನ್ನ ಮೊದಲ ಕವನ(?) ಮೂಡಿಬಂತು...
ಹೀಗೆ ಕವಿ/ಕವಯಿತ್ರಿಯರ ನಡುವಿನಲ್ಲಿ ನನ್ನದೊಂದು ಕೊಸರಿರಲಿ ಎಂದು ಮನಸ್ಸಿಗೆ ಬಂದದ್ದನ್ನು ಗೀಚಲಾರಂಭಿಸಿದೆ...
ಬರೆದದ್ದನ್ನು ಇವರುಗಳೊಡನೆ ಹಂಚಿಕೊಳ್ಳುವುದು, ಇವರುಗಳಿಗೆ ತಿಳಿಯುವಂತೆ ಇಂಗ್ಲಿಷ್‍ನಲ್ಲಿ ವಿವರಿಸುವುದು ಹೀಗೆ...
ಇವರುಗಳು ನನ್ನ ಬರಹಗಳನ್ನು ಬ್ಲಾಗ್‍ ನಲ್ಲಿ ಬರೆಯಬೇಕೆಂದೂ, ಕನ್ನಡದ ಬಳಗದಲ್ಲಿ ಹಂಚಿಕೊಳ್ಳಬೇಕೆಂದು ಒತ್ತಾಯಿಸಲಾರಂಭಿಸಿದರು...
ಸರಿ ಇವರ ಒತ್ತಾಯಕ್ಕೆ ಮಣಿದು ನಾನು ಬರೆದ ಕೆಲವು ಕವನ(?)ಗಳನ್ನು ಈ ಟೈಮ್‍ಪಾಸ್ ಕಡ್ಲೇಕಾಯಿಯಲ್ಲಿ ಸೇರಿಸಲು ಅರಂಭಿಸಿದ್ದು...
ಹೀಗೆ ಶುರುವಾದದ್ದು ಟೈಂಪಾಸ್ ಕಡ್ಲೇಕಾಯಿ!

ನನ್ನ ಬ್ಲಾಗಿಗೆ ’ಟೈಂಪಾಸ್ ಕಡ್ಲೇಕಾಯಿ’ಹೆಸರು ಬಂದದ್ದು ಹೇಗೆ ಎಂದು ಹಲವಾರು ಜನ ನನ್ನನ್ನು ಕೇಳಿದ್ದಾರೆ...
ಇದೇನು ದೊಡ್ಡ ಗುಟ್ಟಲ್ಲ ಬಿಡಿ...
ಹೆಸರೇನಿಡಬೇಕೆಂದು ತಲೆ ಹೆಚ್ಚಾಗಿ ಕೆಡಿಸಿಕೊಳ್ಳದೇ, ಬ್ಲಾಗ್ ಶುರು ಮಾಡುವ ಹಿಂದಿನ ದಿನ ತಿಂದಿದ್ದ ನನ್ನ ನೆಚ್ಚಿನ ’ಕಾಂಗ್ರೆಸ್ ಕಡ್ಲೇಕಾಯಿ’ ನೆನೆಯುತ್ತಾ ಕೊಟ್ಟ ಹೆಸರಿದು... :)

ಇದೇ ಸಮಯದಲ್ಲೇ ಸಂಪದ.ನೆಟ್ ಪರಿಚಯವಾದದ್ದು...
ಇದರಿಂದಲೇ ಅದೆಷ್ಟೋ ಹೊಸ ವಿಚಾರಗಳನ್ನು ತಿಳಿಯುತ್ತಾ, ಹೊಸ ಗೆಳೆಯರನ್ನು ಪಡೆಯುತ್ತಾ, ಹಲವಾರು ವಿಧದ ವಿಷಯಗಳ ಮೇಲೆ ನಾನು ಬರೆದದ್ದು!
ಹಲವಾರು ತರಹದ ವ್ಯಕ್ತಿತ್ವಗಳ-ಚಿಂತನೆಗಳ ಪರಿಚಯ...ಅಲ್ಲದೇ, ನಾನು ಬರೆದದಕ್ಕೆ ಮತ್ತೆ ಬರೆಯುವಂತೆ ಉತ್ತೇಜಿಸುವ, ಪ್ರೋತ್ಸಾಹಿಸುವ ವಾತಾವರಣವನ್ನು ಒದಗಿಸಿದ್ದು ಸಂಪದ!
ನಾನಿಂದು ಸಂಪದಕ್ಕೆಷ್ಟು ನಮನ ಸಲ್ಲಿಸಿದರೂ ಸಾಲದು...

ಇದಲ್ಲದೇ, ನನ್ನನ್ನು ಬರೆಯಲು ಪ್ರೋತ್ಸಾಹಿಸಿದ ಬಂಧುಗಳು-ಗೆಳೆಯರು, ಆಪ್ತರೂ ಹಲವಾರು...

ಈ ಬ್ಲಾಗ್ ಪುಟ ತೆರೆದಾಗ ನನಗೆ ’ನಾಲ್ಕು ತಿಂಗಳು ನಡೆಸಬಲ್ಲೆನೇ?’ ಎಂಬ ಅನುಮಾನವಿತ್ತು,
ಆದರೆ, ಹಾಗೂ-ಹೀಗೂ ಮನಕ್ಕೆ ಬಂದದ್ದನ್ನು ಗೀಚುತ್ತ ೪ ವರ್ಷಕ್ಕೂ ಹೆಚ್ಚು ದಿನ ಇದನ್ನು ಕಾಯ್ದುಕೊಂಡಿದ್ದೇನೆ ಎಂದರೆ ನನಗೇ ಅಚ್ಚರಿಯಾಗುತ್ತದೆ!
ಈ ತಾಣವನ್ನು ಒಂದೇ ಆಯಾಮಕ್ಕೆ ಸೀಮಿತಗೊಳಿಸದೆ, ನಾನು ತೆಗೆದ ಚಿತ್ರಗಳನ್ನು, ಪ್ರವಾಸ ಕಥನಗಳನ್ನು, ವ್ಯಂಗ್ಯ ಚಿತ್ರಗಳನ್ನು, ಒಂದೆರಡು ಸಣ್ಣಕಥೆಯನ್ನು ಸೇರಿಸಿದ್ದೀನಿ...
ಇದನ್ನೆಲ್ಲ ಇಷ್ಟು ದಿನ ಓದಿ-ಮೆಚ್ಚಿ-ಹರಸಿ-ಪ್ರೋತ್ಸಾಹಿಸಿದ ನಿಮಗೆಲ್ಲ ಒಂದು ಪುಟ್ಟ ಧನ್ಯವಾದ, ನಮನ, ಥ್ಯಾಂಕ್ಸ್!

--ಶ್ರೀ
(೨೮-ಜೂನ್-೨೦೧೧)

Friday, June 10, 2011

ಜ್ಞಾನೋದಯ

ಹೆತ್ತವರು
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!

--ಶ್ರೀ
(೧೦-ಜೂನ್-೨೦೧೧)

Wednesday, March 23, 2011

ಬಣ್ಣ ಅಳಿಸಿತು...




ಅಳಿಸಿದಳು ಬಣ್ಣವ
ಇಳಿದಿದ್ದ
ತಿಳಿಹಳದಿ
ಕಡುಗೆಂಪು
ಪಚ್ಚೆ-ನೀಲಿ
ಎಲ್ಲವನು ಅಳಿಸಿದಳು
ಬಣ್ಣಗಳ ಕಂಡೊಡನೆ
ಸಿಡುಕು-ಕಿಡಿ ನೋಟ
ಇಂತಿಷ್ಟು ಬಿಡದೆ
ಅಳಿಸಿದಳವಳು...
ಎಲ್ಲವೂ ಮಾಯವಾದಾಗ
ನೆಮ್ಮದಿಯ ನಿಟ್ಟುಸಿರು,
ರಸ್ತೆ ಗುಡಿಸುವಾಕೆಗೆ... :)

--ಶ್ರೀ
೨೩-ಮಾರ್ಚ್-೨೦೧೧

Wednesday, February 9, 2011

ಎಲ್ಲಮ್ಮನ ಜಾತ್ರೆ


ಇತ್ತೀಚಿನ ದಿನಗಳಲ್ಲಿ
ವೈದ್ಯ ಎಂಬುವನು
ರೋಗಿಯ
ಹೊಟ್ಟೆ ಕತ್ತರಿಸಿ
ಗುಣಪಡಿಸುವ ಬದಲಾಗಿ
ರೋಗಿಯ
ಜೇಬು ಕತ್ತರಿಸಿ
ತನ್ನ ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದಾನೆ...

--ಶ್ರೀ
(೧೦-ಫೆಬ್ರವರಿ-೨೦೧೧)
ಚಿತ್ರ ಕೃಪೆ: http://www.pointsincase.com/

Tuesday, February 8, 2011

ಯು.ಪಿ.ಎ. ಸಾಧನೆ ಅಂತರಿಕ್ಷಕ್ಕೇ ಮುಟ್ಟಿತಲ್ಲಯ್ಯ!




ಯು.ಪಿ.ಎ. ಸಾಧನೆ ಅಂತರಿಕ್ಷಕ್ಕೇ ಮುಟ್ಟಿತಲ್ಲಯ್ಯ! (8/Feb/2011)
UPA's achievement has reached 'starry heights'! (8/Feb/2011)

--ಶ್ರೀ

Monday, February 7, 2011

Sunday, February 6, 2011

ತರಚು ಗಾಯ

ಬೈಕ್‍ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್
ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್‍ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...

--ಶ್ರೀ
(೬-ಫೆಬ್ರವರಿ-೨೦೧೧)

some-ಮೇಳನ

ಅಚ್ಚಕನ್ನಡದಲ್ಲಿ ಮಾತಾಡ್ಬೇಕು
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,
ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"

***

ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು-ಧೂಳು!

***

ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!

--ಶ್ರೀ
(೬-ಫೆಬ್ರವರಿ-೨೦೧೧)

Wednesday, January 26, 2011

ದೂರು

ಇನಿಯ, ನೀ ಹೇಳು...

ನೀ ಕೊಡುವ ಮುತ್ತ-ಮಳೆಯಲಿ ತೋಯದೇ, ಹೇಗೆ ನಿದ್ರಿಸಲಿ?
ತಲೆಯಾನಿಸಿ ಮಲಗುವ ವಿಶಾಲ ಎದೆಯಿಲ್ಲದೆ, ಹೇಗೆ ನಿದ್ರಿಸಲಿ?
ನಿನ್ನ ತೋಳ್ಗಳ ಬಿಗಿ-ಬಿಸಿ ಅಪ್ಪುಗೆಯಿಲ್ಲದೆ, ಹೇಗೆ ನಿದ್ರಿಸಲಿ?
ನಿನ್ನ ತುಟಿಯ ರಸವನು ಸವಿಯದೇ, ಹೇಗೆ ನಿದ್ರಿಸಲಿ?
ಬೆಚ್ಚನೆ ಹೊದಿಕೆಯನು ಹೊದಿಸಿ ರಮಿಸುವ ನೀನಿಲ್ಲದೆ ಹೇಗೆ ನಿದ್ರಿಸಲಿ?
ಸವಿನಿದ್ದೆಯನು ಕದ್ದ ಮುದ್ದುಮೊಗದವನೇ,
ನೀನಿಲ್ಲದೇ ಸವಿಗನಸ ಹೇಗೆ ಕಾಣಲಿ ಇನಿಯ...ಹೇಳು...ಹೇಳು...

--ಶ್ರೀ