Monday, October 8, 2007

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ??
ಇಲ್ಲ, ಬಿಡಿ...

ದೇವರೇ ಇಲ್ಲವೇ??
ಇಲ್ಲ, ಬಿಡಿ...

ಆದರೆ...

ಜಲ ಪ್ರಳಯಕೆ
ಎಡೆ ಮಾಡಬೇಡಿ...

ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...

ಜನರ ಹಣವನು
ಪೋಲು ಮಾಡಬೇಡಿ...

ದೇಶದ ಭದ್ರತೆಗೆ
ಧಕ್ಕೆ ತರಬೇಡಿ...

ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...

ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...

ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...

ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...

(೮-ಅಕ್ಟೋಬರ್-೨೦೦೭)

Friday, October 5, 2007

ಮುಗಿಲು

ಮುಗಿಲು

ಬಾನು-ಆಗಸ-ಮುಗಿಲು
ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ...
ಯಾರು ಬಣ್ಣ ತುಂಬುವರೋ ನಿನಗೆ
ನಸು ಕೆಂಪು-ತುಸು ಹಳದಿ-ತಿಳಿ ನೀಲಿ
ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ...

ಕ್ಷಣ ಕ್ಷಣವು ಹೊಸ ರಂಗು
ಅದೇನು ಚತುರ ಕಲೆ! ಸದಾ ಮಾಡುವೆ ದಂಗು!

ದಿನ ದಿನವು ಬಗೆ ಬಗೆಯ ಚಿತ್ತಾರ
ಯಾರದಿದು ಅದ್ಭುತ ಚಮತ್ಕಾರ?

ಒಂದೆಡೆ ಮಳೆಯ ಸುರಿಸುತ ಪನ್ನೀರ ಸಿಂಚನ
ಮತ್ತೊಂದೆಡೆ ಎಳೆದಿದೆ ಬಣ್ಣದಾ ಬಿಲ್ಲು, ಒಹ್ ರೋಮಾಂಚನ!

ಖುಷಿ ಕೊಡಲೆಂದೋ ಏನೋ, ಬಿಲ್ಲ ಮೇಲೆ ಮಗದೊಂದು ಬಿಲ್ಲು
ಇದ ನೋಡಲು, ನನ್ನದೆಯು ಅನ್ನದೇನು ಝಲ್ಲು!

ನಿನ್ನಲ್ಲಿ ಅದೇನು ಮೋಡಿಯೋ ಕಾಣೆ
ಸಾವಿರ ಕಣ್ಣ ನವಿಲು ಗರಿ ಬಿಚ್ಚಿ ಕುಣಿಯುವುದು ಕೋಣೆ ಕೋಣೆ

ಈಗಿನದು ಮರು ಕ್ಷಣಕಿಲ್ಲ, ಮತ್ತೆ ಕಾಣುವುದಿಲ್ಲ.
ಬೆಳ್ಳಿ ಮೋಡ- ಕೋಲ್ಮಿಂಚು ನಿನ್ನ ಅಲಂಕರಿಸುವುದಲ್ಲ!

ಯಾರು ಹಿಡಿದಿರುವರೋ ಕುಂಚ
ಸೃಷ್ಟಿಯಾಗಿದೆ ವಿಸ್ಮಯ ಪ್ರಪಂಚ

ನಿರಂತರವಾಗಿ ಹರಿದಿದೆ ಕಲಾಪಾಕ
ನೋಡುತ್ತಲೇ ದಕ್ಕುವುದೆನಗೆ ನಿತ್ಯ ನಾಕ!!

-ಶ್ರೀನಿವಾಸ್, ೪-ಅಕ್ಟೋಬರ್-೨೦೦೭