Tuesday, December 30, 2008

ವಿಪರ್ಯಾಸ

’ಹಕ್ಕಿಯ ನೆಲೆ ನಾಶ’ ಎಂದು ಬೊಬ್ಬೆ ಹೊಡೆದ ಪರಿಸರ-ಪ್ರೇಮಿಯ ಮೆಚ್ಚಿ ಅವನ ಮನೆಗೆ ಹೋದೆನು...
ಬಾಗಿಲ ತೆಗೆದವನೆ ಕೆಳಗೆ ನೋಡಿ,
’ಒಳಗೆ ಕೂತುಕೋ...ಹಾಳು ಇರುವೆಗಳು...ಗೂಡು ಒಡೆದು ಬರುವೆ"!!!

~~~ * ~~~

’ನಗರ ಸ್ವಚ್ಛಗೊಳಿಸಿ’ ಕಾರ್ಯಕ್ರಮದ ರೂವಾರಿ ಗೆಳೆಯನ ಜೊತೆಗೆ ಹೊಸದಾಗಿ ಹಾಕಿದ ಕಾಂಕ್ರೀಟ್ ರಸ್ತೆಯ ಮೇಲೆ ಹರಟೆ ಹೊಡೆಯುತ್ತ ನಡೆದೆನು...
ಅಲ್ಲೇ ಸಿಕ್ಕ ಮೆಕ್ಕೆ ಜೋಳವ ತಿಂದು ತೇಗಿ ಅವ, ಎಸೆದ ಬರಡಾದ ಕಡ್ದಿಯ ರಸ್ತೆಯ ಮೇಲೆ...
"ಯಾಕೋ" ಎಂದೆ..."ಅಯ್ಯೋ ನಿನಗೆ ಗೊತ್ತಿಲ್ವಾ, ಅದು ಬಯೋ-ಡಿಗ್ರೇಡಬಲ್!"

~~~ * ~~~

ಕನ್ನಡ ನುಡಿಯ ಬಗ್ಗೆ ಉದ್ದುದ್ದ ಬರಹಗಳ ಬರೆದವನ ಮೆಚ್ಚಿ ಕರೆ ಮಾಡಿದೆ ನಾನು...
"ನಿಮ್ಮನ್ನು ಈ ವಾರ ಭೇಟಿ ಮಾಡಬಹುದೇ?"
ಆ ಕಡೆಯಿಂದ ಉತ್ತರ ಬಂತು -
"ಸಾರಿ ಮ್ಯಾನ್! ದಿಸ್ ವೀಕ್ ಐ ಆಮ್ ವೆರಿ ಬಿಝಿ..ನೆಕ್ಟ್ ವೀಕೆಂಡ್ ಸಿಗೋಣ" !!!
:)

ಭಗ್ನ ಪ್ರೇಮಿ...

ಒಲವಿನಲಿ
ಮಿಂದು-ಬೆಂದು
ಹೊರ ಬಂದ ಜೀವಕ್ಕೆ,
ಹೊಸತೊಂದು
ಜೀವ ಬಂದು
ಒಲವ ಹೊಳೆ
ಹರಿಸಿದರೂ,
ಆ ಜೀವ
ಹಳೆಯ ಕರುಕಲ
ನೆನೆದು ಬೆದೆರುವುದೇಕೆ?

--ಶ್ರೀ
(೨೬ ಡಿಸೆಂಬರ್ ೨೦೦೮)

Friday, December 26, 2008

ಅಟ್ಟವೆಂಬ ಭಂಡಾರ!

ನೆನ್ನೆ ನಮ್ಮ ಮನೆಯ ಅಟ್ಟವನ್ನು ಸ್ವಚ್ಛಗೊಳಿಸೋಣವೆಂದು ನಾವು ಅಲ್ಲಿರುವ ವಸ್ತುಗಳನ್ನೆಲ್ಲ ಇಳಿಸಿದೆವು...
ನಮ್ಮ ಅಟ್ಟದಲ್ಲಿರುವ ವಸ್ತುಗಳು, ನನ್ನ ಚಿಕ್ಕಂದಿನ ದಿನಗಳ ನೆನಪುಗಳನ್ನು ತಂದುಕೊಟ್ಟಿತು...

ಸಿಕ್ಕ ವಸ್ತುಗಳ ಪಟ್ಟಿ:

- ಕೂಡಿಸಿಟ್ಟ ಸುಮಾರು ೫೦೦ ರೀತಿಯ ನಾಣ್ಯಗಳು ಹಾಗೂ ನೋಟುಗಳು
- ವಿವಿಧ ತರಹದ ಬೆಂಕಿ ಪೊಟ್ಟಣಗಳು...
- ವಿವಿಧ ದೇಶದ ಅಂಚೆ ಚೀಟಿಗಳು
- ನಾನು ಚಿಕ್ಕಂದಿನಲ್ಲಿ ಬಿಡಿಸಿದ ಚಿತ್ರಗಳು, ಪೈಂಟಿಂಗ್‍ಗಳು
- ನಾನು ಆರನೇ ಕ್ಲಾಸಿನಲ್ಲಿ ಬರೆದ ಉತ್ತರ ಭಾರತದ ಪ್ರವಾಸ ಕಥನ
- ನಾನು-ನನ್ನ ಅಕ್ಕ, ಪಕ್ಕದ ಮನೆಯ ಮಕ್ಕಳು ಒಟ್ಟಿಗೆ ಆಡಿದಾಗ ಬರೆದ ಆಟದ ಬರಹಗಳು
- ಹಾವು-ಏಣಿ ಆಟದ ಬೊರ್ಡ್
- ಪಗಡೆ ಕಾಯಿಗಳು
- ಕವಡೆಗಳು, ಕಪ್ಪೆ ಚಿಪ್ಪುಗಳು
- ನನ್ನ ಅಕ್ಕನು ಅಂಟಿಸಿ ತಯಾರಿಸಿದ 'A for apple' ನಿಂದ 'z for zebra' ಎಂಬ ಪುಸ್ತಕ
- ಹುಟ್ಟು ಹಬ್ಬಕ್ಕೆ ಗೆಳೆಯರು ಕೊಟ್ಟ ಶುಭಾಶಯ ಪತ್ರಗಳು (ಗ್ರೀಟಿಂಗ್ ಕಾರ್ಡ್)
- ಲಿಟಲ್ ಜೈಂಟ್ಸ್ ಎಂಬ ಮ್ಯಾಗಝೀನ್ ನವರು ನಡೆಸಿದ್ದ ಬಣ್ಣ ಹಾಕುವ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ಕೊಟ್ಟ ಪ್ರಮಾಣ ಪತ್ರ
- ನಾನು ಬಟ್ಟೆಯ ಮೇಲೆ ಮಾಡಿದ ಚಿತ್ತಾರಗಳು, ಕೈ-ಕೆಲಸಗಳು
- ನ್ಯೂಸ್ ಪೇಪರ್ ನಲ್ಲಿ ಬರುತ್ತಿದ್ದ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಕತ್ತರಿಸಿ ಶೇಖರಿಸಿದ್ದ ಒಂದು ಫೈಲ್
- 'ಬಿಗ್ ಫನ್' ಬಬ್ಬಲ್ ಗಮ್ಮಿನ ಒಳಗೆ ಸಿಗುತ್ತಿದ್ದ ಕ್ರಿಕೆಟ್ ಪಟುಗಳ ಚಿತ್ರಗಳು
(ನನಗೆ ಬಬ್ಬಲ್ ಗಮ್ ಕೊಡಿಸುತ್ತಿಲ್ಲವಾದರೂ, ಆಗ ಗೆಳೆಯರನ್ನು ಕಾಡಿ ಬೇಡಿ ಶೇಖರಿಸುತ್ತಿದ್ದೆ!)
- ನನ್ನ, ಅಕ್ಕನ ಸ್ಕೂಲಿನ ಮಾರ್ಕ್ಸ್ ಕಾರ್ಡ್-ಗಳು
- ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಹಾಲ್‍ಟಿಕೆಟ್‍ಗಳು
- ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಬರೆದಿದ್ದ 'ಉಕ್ತಲೇಖನ'ದ ಪದಗಳ ಪಟ್ಟಿ
- ನನಗೆ ಬಹುಮಾನವಾಗಿ ಸಿಕ್ಕ ಹಲವು ಪುಸ್ತಕಗಳು
- ನನ್ನ ಚಿಕ್ಕಪ್ಪ ತಂದು ಕೊಟ್ಟ ರಷ್ಯನ್ ಜಾನಪದ ಕಥೆ ಪುಸ್ತಕಗಳು
- ಬೊಂಬೆ ಮನೆ, ಚಂದಮಾಮ ಪುಸ್ತಕಗಳು
- ನಾನು ಮತ್ತು ಅಕ್ಕ ಕೂಡಿ ಹಾಕುತ್ತಿದ್ದ 'ಸ್ಟಿಕರ್' ಗಳು...
- ಹಳೆಯ ಪುಸ್ತಕದಲ್ಲಿ ಇಟ್ಟ ಗಿಣಿಯ ಪುಕ್ಕ
- ನವಿಲುಗರಿ
- ಸ್ಕೂಲಿಗೆ ಕೊಂಡೊಯ್ಯುತ್ತಿದ್ದ ಅಲ್ಯೂಮಿನಿಯಂ ಸೂಟ್ ಕೇಸ್
- ಸಂಗೀತದ ಪುಸ್ತಕ
- ಇಂಜಿನೀರಿಂಗ್‍ನಲ್ಲಿ ಕ್ಲಾಸ್‍ಮೇಟ್‍ಗಳು ಅಂಗಿಯ ಮೇಲೆ ಬರೆದ ಹಸ್ತಾಕ್ಷರಗಳು
- ಇಂಟರ್‍ನೆಟ್ ಮಿತ್ರರು ಬರೆದ ಪತ್ರಗಳು
ಹೀಗೆ ಎನೇನೋ...

ಇವೆಲ್ಲ ಕೂತು ನೆನ್ನೆ ನೋಡುತ್ತಿದ್ದಾಗ ಮನದಲ್ಲಿ ಹಾದು ಹೋದ ಸುಂದರ ನೆನಪುಗಳ ಎಣಿಕೆ ಎಷ್ಟೋ!
ಈಗ ಮತ್ತೆ ಅಟ್ಟಕ್ಕೆ ಇವೆಲ್ಲವನ್ನೂ ಇಡಬೇಕು...ಮತ್ತೆ ಎಷ್ಟು ವರ್ಷಗಳಾದ ಮೇಲೆ ಇದನ್ನೆಲ್ಲ ತೆಗೆಯುವೆನೋ ತಿಳಿಯದು...
ಎಷ್ಟು ಕಸ ಕೂಡಿ ಹಾಕುವೆನೆಂದು ಅಮ್ಮ ಮತ್ತು ಅಕ್ಕನ ಹತ್ತಿರ ಬಯ್ಸಿಕೊಂಡರೂ ಸರಿಯೇ ನನಗೆ ಇವೆಲ್ಲ ಬೇಕು...ಮತ್ತೆ ಇಂದು ಅಟ್ಟ ಸೇರಲಿವೆ...
ಕೆಲವು ಬೊಂಬೆಮನೆ , ಚಂದಮಾಮ ಪುಸ್ತಕಗಳನ್ನು ಕೆಳಗೆ ಇಟ್ಟುಕೊಂಡಿರುವೆ ಓದಲಿಕ್ಕೆ ಅಂತಾ... Smiling
ನೀವು ಹೀಗೆ 'ಕಸ' ಕೂಡಿ ಹಾಕ್ತೀರಾ?

--ಶ್ರೀ

Tuesday, December 23, 2008

ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ಕನಸನು ಕಾಣಲು ಇಲ್ಲವು ವಯಸು!
ಪುಟ್ಟನಿಗೂ ಇದೆ ಮಿಠಾಯಿಯ ಕನಸು!!
ತಾತನಿಗೂ ಇದೆ ಬದರಿಯ ಕನಸು!!!
ಮನದಲಿ ಕಾಣಿರಿ ಎಲ್ಲರೂ ಕನಸು...
ಕನಸನು ಮಾಡಿರಿ ಬೇಗನೆ ನನಸು...
ಕನಸದು ನನಸಾಗಲು ಬಲು ಸೊಗಸು!
ಕಾಣಿರಿ ಎಲ್ಲರೂ ಚೆಂದದ ಕನಸು... :)

--ಶ್ರೀ
(೨೩ - ಡಿಸೆಂಬರ್ - ೨೦೦೮)

ಹಗಲುಗನಸು

ಹಗಲುಗನಸು
-----------

ತೋಟದಿ
ನಾವೀರ್ವರು ಇರಲು
ನಲ್ಲೆಯ ಮಡಿಲೊಳು
ತಲೆ ಇರಿಸಿರಲು
ನಲ್ಲೆಯ ಬೆರಳು
ಆಡುತಲಿರಲು
ನಲ್ಲೆಯ ಒಲವಲಿ
ನಾ ತೋಯ್ದಿರಲು
ಭುವಿಯೇ ಸ್ವರ್ಗವಲ್ಲವೇನು?

--ಶ್ರೀ
(೨೩ - ಡಿಸೆಂಬರ್ - ೨೦೦೮)

Monday, December 22, 2008

ಹಚ್ಚ ಹಸಿರ ಚೀಲ ಬಿಚ್ಚಿ...

ಹಚ್ಚ ಹಸಿರ ಚೀಲ
ಬಿಚ್ಚಿ, ಮಣಿಗಳಾ ಬಿಡಿಸಿ,
ತುರಿದು ಕಾಯ,
ತರಿದು ಎಲೆಯ,
ನೀರ ಹಾಕಿ,
ರವೆಯ ಜೊತೆ
ಬೆರೆಸಿ ಬಿಸಿ ಇಟ್ಟರೆ ...
ಸವಿಯಲು ಸಿದ್ಧವಾಯ್ತಲ್ಲ
ಅವರೇಕಾಳುಪ್ಪಿಟ್ಟು!!!

(ಅವರೇಕಾಯಿ ಸೀಸನ್ ನೆನೆಯುತ್ತಾ...)

--ಶ್ರೀ

Thursday, November 27, 2008

ಅರಿವು ಉಕ್ಕಿ ಹರಿದಾಗ...

ಹಿರಿಯರಾದ ಕೆಲವರಿಗೆ,
ಅರಿವು ತಲೆ ತುಂಬಿ,
ನೆರೆಯಂತೆ ಉಕ್ಕಿ
ಹರಿದು, ಕಣ್ಣ ಕವಿದು,
ಅರಿವ ಇರುವು ಅಳಿಸಿ,
ಕಿರಿಯರನ್ನಾಗಿಸುವುದಲ್ಲ!

--ಶ್ರೀ
(೨೭ - ನವಂಬರ್ - ೨೦೦೮)

ದ್ರೌಪದಿಯ ಸೀರೆ ಸೆಳೆವಾಗ...

ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)

~~~ * ~~~

ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)

--ಶ್ರೀ
(೨೭-ನವಂಬರ್-೨೦೦೮)

ಹೀಗೊಂದು ಚುಟುಕ!

ಬರೆಯಲೆಂದು ಕುಳಿತಾಗ,
ತಲೆಯಿಂದ ಇಳಿಯದು...
ಕೈಲಿ ಸಣ್ಣ ತುಂಡು ಇಲ್ಲದಿದ್ದಾಗ,
ತಲೆಯಲ್ಲಿ ಫಟ್ಟನೆ
ಹೊಳೆದು - ಹಾರಿಹೋಗುವುದಲ್ಲ,
ಹಾಳು ಚುಟುಕ!

--ಶ್ರೀ
(೨೫-ನವಂಬರ್-೨೦೦೮)

Friday, November 21, 2008

ಬಾ...ಬಿಳಿ-ಕುದುರೆಯ ಹತ್ತು...

ಬಂದಿಹೆನು ನಾನು
ನೆಚ್ಚಿನ ಬಿಳಿ ಕುದುರೆಯ ಮೇಲೆ...

ಏರು ಬಾ ಗೆಳತಿ,
ನಡೆ ಇನ್ನು ಹೊರಡುವ...
ಒಟ್ಟಾಗಿ ನೋಡುವ ಜೀವನದ ಲೀಲೆ...

--ಶ್ರೀ
(೨೧-ನವಂಬರ್-೨೦೦೮)

Thursday, November 6, 2008

ಗಣೇಶ ಬಂದ ಕಾಯಿ ಕಡುಬು ತಿಂದ...



ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...?
ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...!
ಗೂಳೂರಿನ ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಊರಿನ ಮಂದಿ ಹೇಳುತ್ತಾರೆ...
ನಮಗೆ ಇಲ್ಲಿನ ಅರ್ಚಕರು ತಿಳಿಸಿದ್ದನ್ನು ಹಾಗೆ ಕೆಳಗಿಳಿಸಿದ್ದೇನೆ...

"ಬಹಳ ಬಹಳ ಹಿಂದೆ...
ಒಮ್ಮೆ ಭೃಗು ಮಹರ್ಷಿಗಳು ಈ ದಾರಿಯಲ್ಲಿ ಸಾಗುತ್ತಿರಲು, ರಾತ್ರಿಯ ಹೊತ್ತಾಯಿತು ಹಾಗಾಗಿ ಅವರು ಇಲ್ಲಿಯೇ ತಂಗಲು ನಿರ್ಧರಿಸಿದರು...ಆದರೆ, ಇಲ್ಲಿ ಎಲ್ಲೂ ಪೂಜಾ ವಿಧಿಗಳಿಗೆ ದೇವಸ್ಥಾನಗಳು ಕಾಣ ಸಿಗಲಿಲ್ಲ. ಆದುದರಿಂದ, ಇಲ್ಲಿ ಒಂದು ಗಣೇಶನ ಪ್ರತಿಮೆಯನ್ನು ತಾವೇ ನಿರ್ಮಿಸಿ, ಪೂಜಾ ವಿಧಿಗಳನ್ನು ಮಾಡಿದರು. ಇವರು ಪೂಜೆ ಮಾಡುತ್ತಿದ್ದ ಜಾಗದ ಬಳಿ ಸಾಗುತ್ತಿದ್ದ ಕೆಲವು ಹಳ್ಳಿಗರು ಇದನ್ನು ನೋಡಿ, ’ಹೇಗೆ ಮಾಡಿದಿರಿ ನಮಗೂ ಇದನ್ನು ತಿಳಿಸಿ ಹೇಳಿ’ ಎಂದು ಕೇಳಿಕೊಂಡರು. ಆಗ ಭೃಗು ಮಹರ್ಷಿಗಳು, ಹಳ್ಳಿಯವರನ್ನು ಕರೆದು ಗಣೇಶನನ್ನು ಹೇಗೆ ಮಾಡಬೇಕು ಎಂದು ತಿಳಿಹೇಳಿ, ಪೂಜಾ ವಿಧಿಗಳನ್ನು ತಿಳಿಸಿದರಂತೆ. ಅಂದಿನಿಂದ ಇಂದಿನವರೆಗೂ ಗಣೇಶನ ಪೂಜೆ ಸತತವಾಗಿ ನೆರವೇರಿದೆ ಎಂದು ಹೇಳುತ್ತಾರೆ.

ಗಣೇಶನ ಹಬ್ಬದಂದು, ಕೆರೆಯ ಮಣ್ಣಿನಿಂದ ಪುಟ್ಟ ಗಣೇಶನನ್ನು ಮಾಡಿ, ಗುಡಿಗೆ ತರುತ್ತಾರೆ. ಪೂಜಾ ವಿಧಿಗಳನ್ನು ಮುಗಿಸಿ, ದೊಡ್ಡ ಗಣೇಶನನ್ನು ಕಟ್ಟಲು ಆರಂಭಿಸುತ್ತಾರೆ. ನವರಾತ್ರಿ ಹಬ್ಬದ ಹೊತ್ತಿಗೆ, ಗಣೇಶನ ಮುಕ್ಕಾಲು ಭಾಗ ಆಕಾರ ಪೂರ್ಣಗೊಳ್ಳುತ್ತದೆ. ವಿಜಯ ದಶಮಿ ದಿನದಂದು, ಪುಟ್ಟ ಗಣೇಶನನ್ನು ದೊಡ್ಡ ಗಣೇಶನ ಹೊಟ್ಟೆಯ ಒಳಗೆ ಇರಿಸಿ, ಕಡುಬುಗಳನ್ನು ಇಟ್ಟು ತುಂಬುತ್ತಾರೆ.
ದೀಪಾವಳಿ ಸಮಯಕ್ಕೆ ದೊಡ್ಡ ಗಣೇಶನ ಆಕಾರ ಪೂರ್ಣಗೊಳ್ಳುತ್ತದೆ. ದೀಪಾವಳಿ ದಿನದಿಂದ, ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೂ, ನಿತ್ಯ ಪೂಜೆಗಳು ನಡೆಯುತ್ತವೆ. ಕಾರ್ತಿಕ ಮಾಸ ಮುಕ್ತಾಯವಾದಾಗ, ಈ ದೊಡ್ಡ ಗಣೇಶನನ್ನು ವಿಸರ್ಜಿಸುತ್ತಾರೆ. ಈ ದೊಡ್ಡ ಗಣೇಶನನ್ನು ಮಾಡಲು ೧೯ ಹಳ್ಳಿಯ ಜನರಿಗೆ ವಿಧ ವಿಧವಾದ ಕೆಲಸಗಳನ್ನು ಹಂಚಿದ್ದಾರಂತೆ. ಆಯಾ ಕೆಲಸಗಳನ್ನು ಅವರೇ ಮಾಡಬೇಕೆಂದಿದೆ" ಎಂದು ತಿಳಿಸಿದರು.

ಗೂಳೂರು ಗಣಪನ ದರ್ಶನ ಪಡೆದ ನಾವು, ಹತ್ತಿರದಲ್ಲಿರುವ ಕೈದಾಳ ಎಂಬ ಸ್ಥಳಕ್ಕೆ ಭೇಟಿ ನೀಡಿದೆವು.
ಗೂಳೂರಿನಿಂದ ಸುಮಾರು ಒಂದು ಮೈಲಿ ದೂರದಲ್ಲಿ ಕೈದಾಳವಿದೆ.



ಇಲ್ಲಿ, ಹೊಯ್ಸಳರ ಕಾಲದಲ್ಲಿ ಕಟ್ಟಿಸಿದ ಚೆನ್ನಕೇಶವನ ಮತ್ತು ಶಿವನ ಗುಡಿಗಳಿವೆ.
ಈ ಚೆನ್ನಕೇಶವನ ಗುಡಿಯನ್ನು, ಅಮರಶಿಲ್ಪಿ ಜಕಣಾಚಾರಿ ಕಟ್ಟಿದುದಾಗಿಯೂ, ಇಲ್ಲಿಯೇ ಇವನಿಗೆ ಕೈ ಮರಳಿ ಬಂತೆಂದೂ, ಅದಕ್ಕಾಗಿಯೇ ಈ ಸ್ಥಳ ಕೈದಾಳವೆಂದು ಹೆಸರು ಪಡೆದುದಾಗಿಯೂ, ಐತಿಹ್ಯವಿದೆ.



ಇಲ್ಲಿನ ಚೆನ್ನಕೇಶವನ ವಿಗ್ರಹವು, ತ್ರಿಮೂರ್ತಿ ರೂಪವೆಂದೂ ಹೇಳುವರು. ಮೂಲ ವಿಗ್ರಹದ ಕೆಳ ಭಾಗವು ಲಿಂಗದಂತೆ ಕೆತ್ತಿದ್ದು, ಲಿಂಗದ ಮೇಲೆ, (ಬ್ರಹ್ಮ) ಕಮಲವನ್ನು ಬಿಡಿಸಲಾಗಿದೆ. ಇದರ ಮೇಲೆ ಚೆನ್ನಕೇಶವನ ವಿಗ್ರಹವನ್ನು ಕೆತ್ತಲಾಗಿದೆ. ಈ ವಿಗ್ರಹ ಸುಮಾರು ೮ ಅಡಿಗಳಷ್ಟು ಎತ್ತರವಿದೆ. ಹೊಯ್ಸಳರ ಕಲ್ಲ ಕುಸುರಿಯ ಬಗ್ಗೆ ಹೆಚ್ಚು ಹೇಳಬೇಕಿಲ್ಲವಷ್ಟೆ, ಮೂಲ ವಿಗ್ರಹವು ಅತ್ಯಂತ ಸುಂದರ ಹಾಗೂ ಅದ್ಭುತವಾಗಿದೆ. ಇಲ್ಲಿನ ಚೆನ್ನಕೇಶವನ ವಿಗ್ರಹದ ಸುತ್ತ ದಶಾವತಾರವನ್ನು ಚಿತ್ರಿಸಲಾಗಿದೆ. ಈ ಗುಡಿಯ ಮಂಟಪದ ಕಂಬಗಳು, ಸುತ್ತಲಿರುವ ಹೊರಗೋಡೆ ಹೊಯ್ಸಳರ ಶೈಲಿಯಲ್ಲಿ ಇಲ್ಲವಾದ್ದರಿಂದ, ಇದನ್ನು ಅನಂತರ ಕಟ್ಟಿರಬಹುದೆಂಬುದು ನನ್ನ ಊಹೆ.



ಗುಡಿಯ ಹೊರಗೋಡೆಯ ಮೇಲೆ ಒಂಟೆ, ಕುದುರೆಗಳ ಮೇಲೆ ಸೈನಿಕರು ಸಾಗುತ್ತಿರುವ ಚಿತ್ರಗಳು, ಆನೆಯ ಚಿತ್ರಗಳೂ ಕಾಣಸಿಗುತ್ತದೆ. ಒಂಟೆಯನ್ನು ಕಂಡು ಅಚ್ಚರಿಯಾಗಿದ್ದೂ ನಿಜ. ಹೊರಗೋಡೆಯ ಮೇಲೆ, ಎರಡು ಮೀನುಗಳು ಒಂದು ಮರಿ ಮೀನನ್ನು ಎತ್ತಿಹಿಡಿದದ್ದೂ ಆಕರ್ಷಿಸಿತು. ಈ ಗುಡಿಯ ಆವರಣದಲ್ಲಿ, ಒಂದು ವೀರ(ಮಾಸ್ತಿ?) ಕಲ್ಲು ಕೂಡ ಕಂಡು ಬಂತು.
ಚೆನ್ನಕೇಶವನ ಗುಡಿಯ ಪಕ್ಕದಲ್ಲೇ ಹೊಯ್ಸಳರೇ ಕಟ್ಟಿಸಿದ ಶಿವನ ಗುಡಿಯಿದೆ.
ಈ ಗುಡಿಗೆ ಬೀಗ ಜಡೆದದ್ದರಿಂದ, ಗುಡಿಯ ಒಳಹೋಗಲಿಲ್ಲವಾದ್ದರಿಂದ, ಕಿಟಕಿಯಿಂದಲೇ ಇಣುಕಿ ನೋಡಿ ತೃಪ್ತರಾಗಬೇಕಾಯಿತು. ಚೆನ್ನಕೇಶವನ ಗುಡಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆಯಾದರೂ, ಶಿವನ ಗುಡಿಯಲ್ಲಿ ನಿತ್ಯಪೂಜೆಗಳಿಲ್ಲ ಕೇವಲ ಸೋಮವಾರ ಪೂಜೆ ನಡೆಯುತ್ತಿದೆ ಎಂದು ತಿಳಿದು ತುಸು ಬೇಸರವಾಯಿತು. ಈ ಶಿವನ ಗುಡಿಯ ಮಂಟಪದ ಕಂಬಗಳಲ್ಲಿ ಹೊಯ್ಸಳರ ಶೈಲಿ ಕಂಡು ಬಂತು. ಒಳಗಿರುವ ಎರಡು ಹೞೆಗನ್ನಡದ ಶಾಸನಗಳೂ ಕಂಡು ಬಂದವು. ಒಂದು ಕಂಬವನ್ನು ಜಕಣನು ಕೆತ್ತದೇ ಹಾಗೇ ಉಳಿಸಿದ್ದು, ಮುಂದೆ ತನಗಿಂತ ಉತ್ತಮ ಶಿಲ್ಪಿ ಕೆತ್ತಲಿ ಎಂದು ಬಿಟ್ಟಿರುವನೆಂದು ಹೇಳಿದರಾದರೂ ನಮಗೆ ಯಾವುದದೆಂದು ಕಿಟಕಿಯಿಂದ ತಿಳಿದು ಬರಲಿಲ್ಲ. ಈ ಗುಡಿಯ ಮಂಟಪದ ಮೇಲೆ, ಆಕರ್ಷಕ ಚಂದ್ರಮೌಳೇಶ್ವರನ ವಿಗ್ರಹವೊಂದು ಕಾಣಸಿಗುತ್ತದೆ.



ಕೈದಾಳದ ಕೇಶವನ ದರ್ಶನ ಮಾಡಿ ಅಲ್ಲೇ ಬುತ್ತಿಯ ಊಟವ ಮಾಡಿ ಬೆಂಗಳೂರಿಗೆ ಹಿಂತಿರುಗಿದೆವು.

--ಶ್ರೀ

ಕೊ:
ಕೈದಾಳದಲ್ಲಿ ಗುಡಿಗೆ ಸರ್ಕಾರ ಬಣ್ಣ ಬಳಿಯುವ ಕೆಲಸವನ್ನು ಮಾಡುತ್ತಿದೆ ಎಂದು ಕಾಣುತ್ತದೆ, ಬಣ್ಣದ ಆಯ್ಕೆ ನನಗೆ ಸರಿ ಕಾಣಲಿಲ್ಲ.
ಹೊಸ ಬಣ್ಣದೊಂದಿಗೆ, ಹನ್ನೆರಡನೇ ಶತಮಾನದ ಗುಡಿ ಎಂದೆನಿಸುವುದೇ ಇಲ್ಲ...

ಕೈದಾಳದಲ್ಲಾಗಲಿ, ಗೂಳೂರಿನಲ್ಲಾಗಲಿ ಊಟ, ತಿಂಡಿಗಳ ವ್ಯವಸ್ಥೆಯಿಲ್ಲ, ಆದರೆ ಹತ್ತಿರದಲ್ಲೇ ತುಮಕೂರಿದೆಯಲ್ಲ! :)

Tuesday, November 4, 2008

ಜಿಂಕೆ ಕಣ್ಣು




ಹೀಗೆ ಮನೆಗೆ ಬಂದವಳು,
ಎನ್ನ ಮನವ ಗೆದ್ದಳಲ್ಲ...

ನಾಚಿಕೆಯು ಇನಿತು ಇಲ್ಲ,
ಕುಡಿನೋಟ ಇವಳದಲ್ಲ...

ಕಣ್ಣಲಿ ಕಣ್ಣ ನೆಟ್ಟು,
ಮನದಿ ಕಿಡಿಯ ಇಟ್ಟಳಲ್ಲ...

ಮಾತು ಹೆಚ್ಚು ಹೊರಡಲಿಲ್ಲ,
ಕಣ್ಣುಗಳೇ ಇದ್ದವಲ್ಲ...

ಮಾತಿಗೆಂದು ಕರೆದ ನಾನು,
ಮಾತೇ ಮರೆತು ಹೋದೆನಲ್ಲ...

ಕಣ್ಣ ಸನ್ನೆಯಲ್ಲೆ ಇವಳು
ಬಣ್ಣ ಬಳಿದು ನಡೆದಳಲ್ಲ...

ಕಣ್ಣ,ಬಣ್ಣ ನೆನೆದು ನಾನು,
ನಿಂತ ನೆಲವ ಮರೆತೆನಲ್ಲ...

ತಿರುಗಿ ಮತ್ತೆ ನೋಡಿ ಇವಳು,
ಒಲವ ಬಿತ್ತು ಹೊರಟಳಲ್ಲ...

ಜಿಂಕೆ ಕಣ್ಣ ಹುಡುಗಿ ಇಂದು,
ತನ್ನ ಕಡೆಗೆ ಸೆಳೆದಳಲ್ಲ...
ತನ್ನ ಕಡೆಗೆ ಸೆಳೆದಳಲ್ಲ...

--ಶ್ರೀ

Monday, November 3, 2008

ಮತಾಂತರವೇ??? ಹೌದಲ್ಲ!

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...

~~~*~~~

ಆರತಿಯ ಮಾಡಿದರು,
ರಾಜ-ಪೋಷಾಕ ಹಾಕಿ
ರಥವ ಎಳೆದರು...

’ಸತ್ಯ’ವನರುಹಲು,
ರಾಮಾಯಣ, ಭಾರತ
ಪುರಾಣ ಹೇಳಿದರು...

ಇಲ್ಲಿ ಮತಾಂತರವಾದವರು ಯಾರು?

--ಶ್ರೀ

ಝಾಡಿಸಿ ಒದ್ದರೂ ಹೋಗದಲ್ಲ ಈ ಭೂತ...

ಝಾಡಿಸಿ ಒದ್ದರೂ ಹೋಗದಲ್ಲ,
ಮತಾಂತರದ ಭೂತ!
'ನಿನ್ನ ಬಳಿ ಬಂದರೇನು ಮತಾಂತರಕೆ?'
ಉತ್ತರವು ಗೊತ್ತಿದೆ ಮನಕೆ...
'ಬಂದರೇನು ಮಾಡುವೆ?'
ಇದೂ ಗೊತ್ತಿದೆ...
ಆದರೂ ಬಿಡದಿದು...
ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ...

'ಯಾರೋ, ಎಲ್ಲೋ, ನಂಬಿಕೆಯ ನಿಯತ್ತನ್ನು ಬದಲಿಸಿದರೆ,
ನಿನಗೇನು ಕುತ್ತು?'
ಗೊತ್ತಿಲ್ಲ...
ಹಲವು ಬಾರಿ ನೆಮ್ಮದಿಯ ಕಲಕಿದ್ದಂತೂ ಹೌದು...ಯಾಕೆ?
ತಿಳಿಯದು...

'ನಿನ್ನ ಮತ ಮಾಡದ ಏಳಿಗೆ, ಇನ್ನೊಂದು ಮತ ಮಾಡಿತೇ?'
ಉತ್ತರ ಗೊತ್ತು...
'ಏಳಿಗೆ ಮಾಡಿದರೆ, ನಿನಗೇನು ಹೊಟ್ಟೆ ಉರಿ?'...
ಅದೇ ಹಾಳು ಮೌನ...
'ನಿನ್ನ ಧರ್ಮವೇಕೆ ಇಷ್ಟು ದಿನ ಮಲಗಿತ್ತು ಕುಂಭಕರ್ಣನಂತೆ?'
...
'ಕುಂಭಕರ್ಣ ಎದ್ದ...ಕೊನೆಗೇನಾಯಿತೆಂಬುದು ತಿಳಿದಿದೆ...'
!!!??!!!
'ತಲೆ ಕೆಡಿಸಿಕೊಂಡ ನೀನು, ಮಾಡಿದ್ದಾದರೂ ಏನು?'
ಉತ್ತರವಿಲ್ಲ...
'ಮತಾಂತರವು ದೇಶದ ಅಭದ್ರತೆಗೆ ದಾರಿ...'
ಪುರಾವೆ ಏನು?
ಇದೆಯೇನು ಉತ್ತರ?
ಗೊಡ್ಡು ವಾದವಷ್ಟೆ...
'ಮತಾಂತರವು ಹೊಸದೇ?'
ಗೊತ್ತಿದ್ದೂ ಇದರೆಡೆಗೆ ಯೋಚಿಸದ ಜಾಣ...

ಆದರೂ ಬಿಡದು ತಲೆಯಲ್ಲಿ ಹೊಕ್ಕಿರುವ ಈ ಭೂತ...
ಮತಾಂತರದ ಭೂತ...
ಯಾಕೆ? ಯಾಕೆ? ಯಾಕೆ????
...ಉತ್ತರವಿಲ್ಲ...

--ಶ್ರೀ

(೩ ನವಂಬರ್ ೨೦೦೮)

Saturday, November 1, 2008

ಹೀಗೊಂದು ರಾಜ್ಯೋತ್ಸವ!

ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...

ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!

:)
--ಶ್ರೀ

ರಾಜ್ಯೋತ್ಸವ!

ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...

ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!

:)
--ಶ್ರೀ
(೧ - ನವಂಬರ್ - ೨೦೦೮)

Thursday, October 30, 2008

ರಚ್ಚೆ ಏತಕೊ ನಿನದು ???



ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂದ...

ಅಳುವ ನಿಲಿಸಿ ನೀನು
ಬಳಸಿ ನಡುವ, ಜೇನು
ನಿದ್ದೆಗೆ ಜಾರೋ ನನ ಕಂದ
ನಿದ್ದೆಗೆ ಜಾರೋ ನನ ಕಂದ...

ಮೆಲ್ಲನೆ ಬೆನ್ನನು ತಟ್ಟಿ
ಗಲ್ಲಕೆ ಮುದ್ದನು ಇಟ್ಟು
ಜೋಗುಳ ಹಾಡುವೆ ನನ ಕಂದ
ಜೋಗುಳ ಹಾಡುವೆ ನನ ಕಂದ...

ಓಡೋಡಿ ಬಳಿ ಬಂದು
ಉಡಿಯ ನುಸುಳಿ ಇಂದು
ಹಾಯಾಗಿ ಮಲಗೋ ನನ ಕಂದ
ಹಾಯಾಗಿ ಮಲಗೋ ನನ ಕಂದ...

ರಂಪಾಟ ಸಾಕಿನ್ನು
ಜೊಂಪಾಟವ ಆಡಿನ್ನು
ಸೊಂಪಾಗಿ ಮಲಗೋ ನನ ಕಂದ
ಸೊಂಪಾಗಿ ಮಲಗೋ ನನ ಕಂದ...

ಹಾಯಾಗಿ ಮಲಗೋ ನನ ಕಂದ...
ನಿದ್ದೆಗೆ ಜಾರೋ ನನ ಕಂದ...
ಬೆಚ್ಚನೆ ಮಲಗೋ ನನ ಕಂದ...
ಹಚ್ಚಗೆ ಮಲಗೋ ನನ ಕಂದ...

~~~*~~~

ಇದನ್ನು ಜನಪದ ಶೈಲಿಯಲ್ಲಿ ಹಾಡುವ ಪ್ರಯತ್ನ ಮಾಡಿದ್ದೀನಿ.
ಕೇಳಲು ಕೆಳಗಿನ ಕೊಂಡಿ ಚಿಟಕಿಸಿ...
Boomp3.com


--ಶ್ರೀ

(೨೬-೨೭, ಅಕ್ಟೋಬರ್-೨೦೦೮)

ಕಿಲಾಡಿ ಜರಡಿ...!

ಬರಡೇ ಬುರುಡೆ,
ಬುರುಡೆಯ ಹರಡುವರ
ಕುರುಡಾಗಿ ನಂಬಲು?

ಬರಡಿಲ್ಲ-ಕುರುಡಿಲ್ಲ,
ಬೇಕಿದ್ದನ್ನು ಉಳಿಸಿ,
ಮಿಕ್ಕವನ್ನು ಅಳಿಸುವ
ಕಿಲಾಡಿ ಜರಡಿ!

--ಶ್ರೀ
(೩೦-ಅಕ್ಟೋಬರ್-೨೦೦೮)

Tuesday, October 28, 2008

ದಿಟಕೆ ದಿಟವೇ ಶತ್ರು!

ಕಣ್ಣ ಮುಂದೆ
ರಾಚಿದೆ ದಿಟವು...
ಪುರಾವೆಯಿಲ್ಲ
ಪ್ರಮಾಣಿಸಲು...

ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...

-- ಶ್ರೀ

ಪುಟಾಣಿಗೆ ಭೂಮಿ ಕಷ್ಟವಂತೆ...!

(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)

ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...
ಮತ್ತೆ ಮೆಲ್ಲಗೆ "...ಭೂಮಿ ಕಷ್ಟ ಆಗಿದೆ..." ಅಂದ..
’ಏನಪ್ಪ ಈ ಪಾಪು ಈ ವಯಸ್ಸಿಗೇ ಹಿಂಗೆಲ್ಲಾ ಮಾತಾಡ್ತಾನೆ’ ಅಂತ ಅಂದುಕೊಂಡೆ...
ತಕ್ಷಣ ಅಕ್ಕನ್ನ ಕರೆದೆ..."ಲೇ...ಏನೇ ನಿನ್ ಮಗ ಹೀಗೆಲ್ಲಾ ಮಾತಾಡ್ತಾನೇ???" ಅಂದೆ...
ಅವಳು "ಏನಂದಾ?" ಅಂದ್ಲು...ನಾನು "ಏನೇನೋ ಹೇಳ್ತಾ ಇದಾನೆ, ನೀನೇ ಕೇಳು" ಅಂದೆ...
ಅವನು ಅಕ್ಕನ ಮುಂದೆ ಕೂಡ ಮೆಲ್ಲಗೆ "ಭೂಮಿ ಕಷ್ಟ ಆಗಿದೆಯೋ..." ಅಂದ...
ಅದಕ್ಕೆ ಅಕ್ಕ, "ಅಯ್ಯೋ, ಇದು ’ಗಾಳಿಪಟ’ ಚಿತ್ರದ ಹಾಡು...ಚಿತ್ರದ ಹಾಡು ಹೀಗಿದೆ...’ಆಕಾಶ ಇಷ್ಟೇ ಯಾಕಿದೆಯೋ...ಈ ಭೂಮಿ ಕಷ್ಟ ಆಗಿದೆಯೋ...’...ಅದಕ್ಕೆ ನೀನು ಎಫ್.ಎಂ. ರೇಡಿಯೋ ಕೇಳಬೇಕು ಅಂತ ಯಾವಾಗ್ಲೂ ಹೇಳೋದು...ನೋಡು, ಈ ಪುಟಾಣಿನೇ ನಿನ್ನ ಮೀರಿಸ್ತಿದಾನೆ!" ಅಂದಾಗ ನಾನು ಸುಸ್ತು...ನನಗೆ ಎಫ್.ಎಂ. ರೇಡಿಯೋ ಕೇಳಬೇಕು ಅನಿಸಿದ್ದು ಆಗಲೇ!

--ಶ್ರೀ

Sunday, October 26, 2008

ಟೈಂಪಾಸ್ ಕಡ್ಲೇಕಾಯಿ ತಿನ್ನಕ್ಕೆ ಯಾರು ಬಂದಿದ್ರೂ ಗೊತ್ತಾ???

ನನ್ ಬರವಣಿಗೆನಾ ನಾನು ಎಂದೂ ಸೀರಿಯಸ್ ಆಗಿ ತೊಗೊಂಡಿದ್ದಿಲ್ಲ...ಗೆಳೆಯರ ಬಲವಂತಕ್ಕೆ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದು...
ಬ್ಲಾಗ್ ಶುರು ಮಾಡುವ ಹಿಂದಿನ ದಿನ, ಒಂದಿಷ್ಟು ಖಾರದ ಕಡ್ಲೇಕಾಯಿ (ಕಾಂಗ್ರೆಸ್ ಕಡ್ಲೇಕಾಯಿ) ತಿಂದಿದ್ದೇ, ನನ್ನ ಬ್ಲಾಗಿನ ಹೆಸರಿಗೆ ಸ್ಫೂರ್ತಿ!
ಈಗ ಇದನ್ನು ಮತ್ತೆ ನೋಡಿದಾಗ ನಾನು ನನ್ನ ಬರವಣಿಗೆಗೆ ಎಷ್ಟು ಬೆಲೆ ಕೊಟ್ಟಿದ್ದೇ ಅಂತಾ ಗೊತ್ತಾಗತ್ತೆ! ಬ್ಲಾಗ್ ಶುರುವಾದಾಗ ನನಗೆ ಸೀರಿಯಸ್‍ನೆಸ್ ಸ್ವಲ್ಪ ಕೂಡ ಇರಲಿಲ್ಲ...

ನನ್ನ ಬ್ಲಾಗ್ ಶುರು ಮಾಡಿ ಈಗ ಸುಮಾರು ಒಂದೂವರೆ ವರ್ಷ...! ಇಷ್ಟು ದಿನ ಈ ಬ್ಲಾಗ್ ನಡೆಯುತ್ತೆ ಅಂತ ಅಂದುಕೊಂಡೇ ಇರಲಿಲ್ಲ...ಈ ಸಮಯದಲ್ಲಿ, ನನಗೆ ತಿಳಿಯದೇ ಸುಮಾರು ಜನ ಈ ಬ್ಲಾಗ್ ಓದಿಕೊಂಡು ಬಂದಿದ್ದಾರಂತೆ...ಈ ಬ್ಲಾಗಿಗೆ ಹಲವಾರು ಬೀಸಣಿಗೆಗಳು ಇವೆ ಅಂತ ಸಮಯ ಕಳೀತಿದ್ದಂತೆ ತಿಳೀತಾ ಬಂತು...ಆದ್ರೆ ಇತ್ತೀಚಿಗೆ ಟೈಮ್ ಪಾಸ್ ಕಡ್ಲೇ ಕಾಯಿ ತಿನ್ನಕ್ಕೇ ಯಾರು ಬಂದಿದ್ರೂ ಅಂತ ನನ್ ಗೆಳೆಯರೊಬ್ಬರು ತೋರಿದಾಗಂತೂ ಆದ ಖುಶಿ ಅಷ್ಟಿಷ್ಟಲ್ಲ...ಕೆಳಗೆ ನೋಡಿ ಯಾರು ಬಂದಿದ್ರೂಂತ!





ಕನ್ನಡ ಪ್ರಭ ’ಬ್ಲಾಗಾಯಣ’ ಎಂಬ ಕಾಲಂ ನಲ್ಲಿ, ಈ ಲೇಖನ ಪ್ರಕಟಿಸಿದೆ!!!
ಇದರ ಮೂಲ ಬರಹ ಇಲ್ಲಿದೆ, ಕನ್ನಡ ಪ್ರಭದ ಕೊಂಡಿ ಇಲ್ಲಿದೆ.

--ಶ್ರೀ

Saturday, October 18, 2008

ಅಂಗೈಯಲ್ಲಿ ಅರಮನೆ

ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು.
ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ ತುಂಬಿದ್ದರಿಂದ, ನಾವು ಪ್ಯಾಕೆಟ್ ತೆರೆಯದೇ ಹಾಗೆ ಎತ್ತಿಟ್ಟೆವು.

ಅವರು ಹೊರಟು ಸ್ವಲ್ಪ ಹೊತ್ತಾದ ನಂತರ, ಪುಟಾಣಿ ಸ್ವೀಟ್ ಬೇಕೆಂದು ಕೇಳಿದ. ನಾವು ಪ್ಯಾಕೆಟ್ ತೆಗೆದು ನೋಡಿದಾಗ, ಅವರು ಇವನಿಗಾಗಿ ಕೇಕ್ ತಂದು ಕೊಟ್ಟಿದ್ದರು. ಆದರೆ ನಮ್ಮ ಪುಟಾಣಿ ಕೇಕ್ ತಿನ್ನುವುದಿಲ್ಲ. ಇದನ್ನು ನೋಡಿದ ನಾವು, ’ಅಯ್ಯೋ, ಇವರು ಮಗುವಿಗೆ ಕೇಕ್ ತಂದು ಕೊಟ್ಟಿದ್ದಾರಲ್ಲ, ಇವನು ತಿನ್ನಲ್ಲಾ’ ಎಂದು ಉದ್ಗರಿಸಿದೆವು ಹಾಗೂ ಎಂದಿನಂತೆ ಪುಟಾಣಿ ಕೇಕ್ ತಿನ್ನಲಿಲ್ಲ ಬಿಡಿ.

ಇದಾಗಿ ಕೆಲವು ದಿನಗಳಾಯಿತು. ಆ ನೆಂಟರು ಮತ್ತೆ ನಮ್ಮ ಮನೆಗೆ ಬಂದರು.
ಬಂದ ತಕ್ಷಣ, ನಮ್ಮ ಪುಟಾಣಿ, "ನೀವು ಅವತ್ತು ಕೇಕ್ ತಂದಿದ್ದಿರಿ, ಅದು ಸ್ವೀಟ್ ಅಲ್ಲ, ಕೇಕ್ ನಾನು ತಿನ್ನಲ್ಲ. ಮುಂದಿನ ಸರತಿ ಬಂದಾಗ ಸ್ವೀಟ್ ತನ್ನಿ" ಎಂದು ಆದೇಶ ನೀಡಬೇಕೆ!
ಇದನ್ನು ಕೇಳಿದ ನಮಗೆ ನೆಂಟರ ಮುಂದೆ ಆದ ಸಂಕೋಚ ಅಷ್ಟಿಷ್ಟಲ್ಲ...

--ಶ್ರೀ

Thursday, October 16, 2008

ಹರಿಯ ಭಜನೆ ಮಾಡೋ...


ಪವಡಿಸಹನೂ ಹರಿಯು
ಪಾಲ್ಕಡಲ ಕೆನೆ ಮೇಲೆ,
ಪನ್ನಗಶಾಯಿಗೆ ನಮಿಸಬನ್ನಿ...

ಪವಡಿಸಹನೂ ಹರಿಯು
ಆದಿಶೇಷನ ಮೇಲೆ,
ಆದಿನಾರಾಯಣಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಶಂಕು-ಚಕ್ರವ ಹಿಡಿದು,
ಸಂಕಟಹರನಿಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಅಗಣಿತಗುಣನೂ
ಜಗವ ಸಲಹುವ ಇವಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ತ್ರಿವಿಕ್ರಮನೂ
ತ್ರಿಜಗವಂದಿತಗೇ ನಮಿಸಬನ್ನಿ...

--------------*--------------

ಈ ಹಾಡು ಕಲ್ಯಾಣಿ ಧಾಟಿಯಲ್ಲಿದೆ. ಕೇಳಲು ಕೆಳಗಿನ ಕೊಂಡಿ ಚಿಟಕಿಸಿರಿ.
Boomp3.com

--ಶ್ರೀ

Tuesday, October 14, 2008

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??


ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ.
ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.
ಅಷ್ಟು ಅಗಲದ ಜಾಗದಲ್ಲಿ ನಡೆಯುತ್ತಿದ್ದವರು ತೀರ ಕಡಿಮೆ ಎನ್ನಬಹುದು.
ಹಾಗಾಗಿ, ಈ ಜಾಗವನ್ನು ಉಪಯೋಗಿಸಿಕೊಳ್ಳುತ್ತಿರುವುದು, ಇಲ್ಲಿ ರಸ್ತೆ ಅಗಲಿಸುವ ಕೆಲಸವನ್ನು ಕೈಗೊಂಡಿರುವುದು ಒಳ್ಳೆಯದೇ ಎನಿಸುತ್ತದೆ.
ಈ ರಸ್ತೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯ ಕೂಡು ರಸ್ತೆ ಆಗಿರುವುದರಿಂದ, ವಾಹನ ದಟ್ಟಣೆ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಆಗಿದೆ ಅನ್ನಬಹುದು.
ಹೆಚ್ಚು ಕಡಿಮೆ, ದಿನ-ನಿತ್ಯ ಇಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಿಂದ, ಈ ರಸ್ತೆಯನ್ನು ಅಗಲಿಸುವ ಕೆಲಸದಿಂದ, ಜನರಿಗೆ ಅನುಕೂಲವಾಗಲಿದೆ.

ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ, ಈ ರಸ್ತೆಯಲ್ಲೂ ಹಲವಾರು ದೊಡ್ಡ ಮರಗಳಿವೆ.
ಈ ರಸ್ತೆಯಲ್ಲಿ, ದೊಡ್ಡ ಮರಗಳ ಪಕ್ಕ ಸಾಕಷ್ಟು ಜಾಗವಿರುವುದರಿಂದ, ದೊಡ್ಡ ಮರಗಳನ್ನು ಕಡಿಯದೇ ಹಾಗೇ ಉಳಿಸಿ, ಅದನ್ನು ಸಣ್ಣ ವಾಹನಗಳಿಗೆ,ದ್ವಿಚಕ್ರದವರಿಗೆ ಮಾತ್ರ ಉಪಯೋಗಿಸುವಂತೆ ಮಾಡಬಹುದು. ಈ ಜಾಗದಲ್ಲಿ ಒಂದು ಕಾರು ಸುಲಭವಾಗಿ ಹೋಗುವಷ್ಟು ಜಾಗವಿದೆ. ದೊಡ್ಡದಾದ ವಾಹನಗಳ ಬಳಕೆಗೆ, ಈಗ ಇರುವ ರಸ್ತೆಯನ್ನು ಹಾಗೆ ಬಳಸಬಹುದು ಎಂಬುದು ನನ್ನ ಅನಿಸಿಕೆ.

ಸಮೂಹ ಮಾಧ್ಯಮದವರು, ಎಂದಿನಂತೆ ಈ ಕೆಲಸಕ್ಕೂ, ಸಕಾರಾತ್ಮಕವಾದ ಸಲಹೆಗಳನ್ನು ಈವರೆಗೆ ನೀಡಿರುವುದಿಲ್ಲ.
ಟಿ.ವಿ.ಯಲ್ಲಾಗಲೀ, ಪತ್ರಿಕೆಗಳಲ್ಲಾಗಲಿ, ಇದರ ಬಗ್ಗೆ ಸುದ್ದಿ ಪ್ರಕಟಗೊಂಡದ್ದು ನನಗೆ ತಿಳಿದು ಬಂದಿಲ್ಲ.
ಇತ್ತೀಚಿಗೆ ಡೆಕ್ಕನ್ ಹೆರಾಳ್ಡ್ ನಲ್ಲಿ, ಬೆಂಗಳೂರ ವಾತಾವರಣ ಎಷ್ಟು ಬದಲಾವಣೆ ಆಗಿದೆ, ಬೆಂಗಳೂರಲ್ಲಿ ಮರಗಳನ್ನು ಎಷ್ಟು ಹೆಚ್ಚು ಕಡಿದಿದ್ದಾರೆ ಎಂಬ ಒಂದು ಸಣ್ಣ ಲೇಖನ ಬಂದಿತ್ತು.
ಉದ್ಯಾನ ನಗರಿ ಹೋಗಿ, ಧೂಳಿನ ನಗರಿಯಾಗಿದೆ ಎಂಬುದು ಆ ಬರಹದ ಸಾರಾಂಶ.
ಈ ರೀತಿಯ ಬರಹಗಳ ಬದಲಾಗಿ, ಹೇಗೆ ನಮ್ಮಲ್ಲಿರುವ ಹಸಿರನ್ನು ಉಳಿಸಬಹುದು, ಹಾಗೂ ಇಂತಹ ರಸ್ತೆ ಅಗಲಿಸುವ, ಮೇಲ್ಸೇತುವೆಗಳ, ಅಂಡರ್ ಪಾಸ್ ಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ಸರ್ಕಾರ ಯಾವ ಯಾವ ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡಬಹುದು ಎಂಬುದಾಗಿ ಬರೆದರೆ, ನಮ್ಮ ಊರನ್ನು-ನಾಡನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ನಾನು ಇಲ್ಲಿ ಕೊಡುತ್ತಿರುವುದು ಡೆಕ್ಕನ್ ಹೆರಾಳ್ಡ್ ಬರಹ ಉದಾಹರಣೆಯಷ್ಟೆ.
ಹೆಚ್ಚು ಕಡಿಮೆ ಎಲ್ಲ ಮಾಧ್ಯಮದವರೂ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ.
ಮರಗಳು ಕಡಿದ ಮೇಲೆ, ನಾಡು ಬರಡಾದ ಮೇಲೆ, ಎಷ್ಟು ಬೊಬ್ಬೆ ಹೊಡೆದರೆ ಏನು ಪ್ರಯೋಜನ?

ಈ ಮೇಖ್ರಿ ವೃತ್ತದ ಬಳಿಯ ರಸ್ತೆಯನ್ನು ಅಗಲಿಸುವಾಗಾದರೂ, ನಮ್ಮ ಪಾಲಿಕೆ, ಮಾಧ್ಯಮ, ಜನ ಪರಿಸರದ ಬಗ್ಗೆ ಗಮನ ಕೊಡುವರೇನೋ ಎಂಬ ದೂರದ ಆಸೆ ನನಗೆ.
ಮರಗಳು ಧರೆಗೆ ಉರುಳುವುದೋ, ಹಸಿರು ಕಂಗಳಿಸುವುದೋ, ಇದನ್ನು ಸಮಯವೇ ಹೇಳಬೇಕು...

--ಶ್ರೀ

Monday, October 13, 2008

ಕಲೆಗುಂಟೇ ನೆಲೆಯ ಬಲೆ?

ಇಲ್ಲ ಕಲೆಗೆ ನೆಲೆಯ ಬಲೆ.
ಕಲ್ಲ ಕುಸುರಿ ಕನ್ನಡಿಗನಿಗೇ ಎನ್ನಲು,
ಬಲ್ಲಿದ ಬೇಲೂರ ಚೆನ್ನಿಗ ಮೆಚ್ಚುವನೇ?

--ಶ್ರೀ

Thursday, October 9, 2008

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಹಿಂದಿನ ದಿನವೇ ಮೈಸೂರಿನಲ್ಲಿ ಬಿಡಾರ ಹೂಡಿ, ಬೆಳಗ್ಗೆ ಬೇಗ ಏಳುತ್ತಲೆ, ನಾವು ಬಾಡಿಗೆಗೆ ಪಡೆದ ಸುಮೋದಲ್ಲಿ ಸುಮಾರು ೬.೨೦ಕ್ಕೆ ಹೊರಟೆವು. ಈ ಹಿಮವದ್-ಗೋಪಾಲಸ್ವಾಮಿ ಬೆಟ್ಟ, ಮೈಸೂರಿನಿಂದ ಗುಂಡ್ಲುಪೇಟೆಯ ಬಳಿ ಬಂಡೀಪುರ(ಊಟಿ) ಮಾರ್ಗದಲ್ಲಿ ಇದೆ. ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು, ಗುಂಡ್ಲುಪೇಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಹಂಗಳ ಎಂಬ ಸಣ್ಣ ಊರಿನ ಬಳಿ ಬಲಕ್ಕೆ ತಿರುಗಿ, ಸುಮಾರು ೧೧ ಕಿ.ಮೀ ದೂರ ಕ್ರಮಿಸಬೇಕು. ಗುಂಡ್ಲುಪೇಟೆಯ ನಂತರದ ರಸ್ತೆ ಸುಮಾರಾಗಿದ್ದು ನಮ್ಮ ಪ್ರಯಾಣದ ವೇಗ ಕಡಿಮೆಯಾಗಿತ್ತು. ಹಂಗಳದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿ ಅತ್ಯಂತ ರಮ್ಯವಾಗಿದ್ದು, ಪ್ರಕೃತಿಯ ಮಾತೆಯ ಸೌಂದರ್ಯಕ್ಕೆ ನಮ್ಮ ಮನ ಸೋತಿತು. ಗೋಪಾಲಸ್ವಾಮಿ ಬೆಟ್ಟ ಪ್ರದೇಶ ಬಂಡೀಪುರ ಅಭಯಾರಣ್ಯಕ್ಕೆ ಸೇರಿರುವುದರಿಂದ, ಬೆಳಗ್ಗೆ ೭.೩೦ಕ್ಕೆ ಮುಂಚೆ, ಈ ಪ್ರದೇಶವನ್ನು ಪ್ರವೇಶಿಸುವ ಅನುಮತಿ ಇಲ್ಲ ಎಂದು ನಮಗೆ ಮೊದಲೇ ತಿಳಿಸಲಾಗಿತ್ತು. ಮುಂಜಾನೆ ಹಾಗೂ ರಾತ್ರಿಯ ಹೊತ್ತಲ್ಲಿ ಆನೆ, ಜಿಂಕೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಈ ಜಾಗದಲ್ಲಿ ಓಡಾಡುವುದರಿಂದ ಜನರನ್ನು ಬಿಡುವುದಿಲ್ಲ ಎಂದು ನಮಗೆ ಬಲ್ಲವರು ಮುಂಚೆಯೇ ತಿಳಿಸಿದ್ದರು. ಹಂಗಳದಿಂದ ಮುಂದಕ್ಕೆ, ಈ ಸುರಕ್ಷಿತ ವನ್ಯ ಪ್ರದೇಶವನ್ನು ಪ್ರವೇಶಿಸಲು ಅರಣ್ಯ ಇಲಾಖೆಯ ಚೆಕ್-ಪೋಸ್ಟ್ ನಲ್ಲಿ ಪ್ರವೇಶ ಶುಲ್ಕವನ್ನು ಕೊಟ್ಟು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.ದಾರಿಯಲ್ಲಿ ಹೋಗುವಾಗ ಮಂಜು ಕವಿದ ವಾತಾವರಣ, ತಂಪಾದ ಗಾಳಿ, ಸುತ್ತಲೂ ಹಸಿರ ಹೊದ್ದ, ಮೋಡ ಹೊದ್ದ, ಮಂಜ ಹೊದ್ದ ಬೆಟ್ಟಗಳು ತುಂಬಾ ಸುಂದರವಾಗಿ ಕಾಣುತ್ತಿದ್ದವು. ಸಣ್ಣನೆ ಸುರಿಯುತ್ತಿದ್ದ ಜಿಟಿ-ಜಿಟಿ ಮಳೆ, ವಾತಾವರಣವನ್ನು ಇನ್ನಷ್ಟು ಮೋಹಕಗೊಳಿಸಿತ್ತು.


ನಾವು ಗೋಪಾಲಸ್ವಾಮಿ ದೇಗುಲದ ಬಳಿ ತಲುಪಿದಾಗ ಸುಮಾರು ೮.೨೦. ಮಳೆಯನ್ನು ನಿರೀಕ್ಷಿಸದ ನಾವು, ಮಳೆಯಿಂದ ರಕ್ಷಣೆಗಾಗಿ ಏನನ್ನು ಕೊಂಡೊಯ್ದಿರಲಿಲ್ಲ, ದಾಪುಗಾಲು ಹಾಕಿ ದೇಗುಲದ ಮಂಟಪದಲ್ಲಿ ಮಳೆಯಿಂದ ರಕ್ಷಣೆ ಪಡೆದೆವು. ಸದ್ಯ, ನಮಗೆ ಹೆಚ್ಚು ತೊಂದರೆ ನೀಡದೆ ಮಳೆ ಸ್ವಲ್ಪ ಸಮಯದ ನಂತರ ತಗ್ಗಿತು.ಸುತ್ತಲೂ ಮಂಜು, ಮೋಡ ಮುಸುಕಿದ ಹವೆ. ದೇವಸ್ಥಾನದ ಸುತ್ತಲೂ ಬೆಟ್ಟಗಳು...ಪಕ್ಕದಲ್ಲೇ ಒಂದು ಪುಟ್ಟ ಕೊಳ...ಆಹ್! ಆ ನೀಲಿ-ಬಿಳಿ-ಹಸಿರು ಮಿಶ್ರಿತ ನಿಸರ್ಗದ ರಂಗಿನಾಟ ನಿಜಕ್ಕೂ ಅದ್ಭುತವೇ! ಮಂಜಿನ ಭರಾಟೆ ಎಷ್ಟಿತ್ತೆಂದರೆ, ನಮಗೆ ೩೦ ಅಡಿ ದೂರದಲ್ಲಿರುವುದೂ ಕಾಣುತ್ತಿರಲಿಲ್ಲ! ಹೀಗೆ ನೋಡು-ನೋಡುತ್ತಲೇ ಮಂಜು ಮಾಯ! ಇದೇ ರೀತಿ ಮಂಜಿನ ಕಣ್ಣ-ಮುಚ್ಚಾಲೆ ಆಟ ನಡೆದಿತ್ತು ನಮ್ಮ ಮುಂದೆ. ನಾವು ತಲುಪಿದಾಗ ದೇವಸ್ಥಾನದ ಬಾಗಿಲನ್ನು ಇನ್ನೂ ತೆರೆದಿರಲಿಲ್ಲ. ಹಾಗೇ ಸುಮ್ಮನೆ, ಪ್ರಕೃತಿಯನ್ನು ಸವಿದು ಬರೋಣವೆಂದು ನಾವು ಹೊರೆಟೆವು.




ದೇವಸ್ಥಾನದ ಹಿಂದೆ, ಚಾರಣಿಗರಿಗಾಗಿ ಹಲವಾರು ಕಾಲುದಾರಿಗಳಿವೆ. ಅವುಗಳಲ್ಲಿ ಒಂದು ಜಾಡನ್ನು ಹಿಡಿದು ಹೊರೆಟೆವು. ಸ್ವಲ್ಪ ಸಮಯದ ನಂತರ, ಮಂಜು, ಮೋಡ ಸರಿದಾಗಲೇ ನಮಗೆ ತಿಳಿದಿದ್ದು, ಅಲ್ಲಿ ಬೆಟ್ಟಗಳ ಸಾಲಿನ ಹಲವಾರು ನೆರಿಗೆಗಳಿವೆ ಎಂದು! ಹೀಗೆ, ಮೆಲ್ಲನೆ ಹುಲ್ಲ ಹಾಸಿನ ಮೇಲೆ ನೋಡುತ್ತ ಪ್ರಕೃತಿಯನ್ನು ಸವಿಯುತ್ತಾ ನಡೆಯುತ್ತಿರುವಾಗ ನಮಗೆ ಕಂಡದ್ದು ನಂಬಲಾಗಲಿಲ್ಲ! ಪಕ್ಕದ ಬೆಟ್ಟದಲ್ಲಿ, ಕಪ್ಪನೆ ಕರಿ ಗುಡ್ಡೆಗಳು ಚಲಿಸಿದಂತಿತ್ತು...ನಾವು ಸರಿಯಾಗಿ ಗಮನಿಸಿದಾಗ ತಿಳಿದಿದ್ದು, ಅದು ಒಂದು ಆನೆಯ ಹಿಂಡೆಂದು! ಇದನ್ನು ನೋಡಿದ ನಾವು, ಆನೆಯನ್ನು ಹಿಂದೆಂದೂ ಕಾಣದ ಪುಟ್ಟ ಮಕ್ಕಳಂತೆ ಕುಣಿದಾಡಿದೆವು! ಹೀಗೆ ಬೆಟ್ಟಗಳ ನಡುವೆ ನಡೆಯುತ್ತಾ, ದಾರಿಯಲ್ಲಿ ಪಾಳು ಬಿದ್ದ ಕೋಟೆಯಂತಿರುವ ಸಣ್ಣ ಗೋಡೆಗಳನ್ನೂ ಕಂಡೆವು. ನಾವು ಮೈಸೂರಿಗೆ ಬೇಗನೆ ವಾಪಸ್ ಹೋಗಬೇಕಾದ್ದರಿಂದ, ಹೆಚ್ಚು ದೂರ ಕ್ರಮಿಸದೇ ದೇಗುಲದ ಕಡೆಗೆ ನಡೆದೆವು. ನಮಗಿಂತ ತುಸು ಹೆಚ್ಚು ದೂರ ಬೆಟ್ಟಗಳ ಹಾದಿಯಲ್ಲಿ ಹೋಗಿದ್ದ ನನ್ನ ಅತ್ತೆಯ ಮಗ, ತಾನು ಎರಡು ಜಿಂಕೆಗಳನ್ನೂ ಕಂಡನೆಂದು ನಮಗೆ ತಿಳಿಸಿದನು. ಈ ಭಾಗ್ಯ ನಮಗೆ ದೊರಕದಾಯಿತಲ್ಲ ಎಂಬ ಪೇಚು ಮಿಕ್ಕವರಿಗೆ.







ವಾಪಸ್ ಬಂದಾಗ ವೇಣುಗೋಪಾಲನ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತೆರೆದಿತ್ತು. ಈ ದೇವಸ್ಥಾನದ ಆವರಣವು ಹೆಚ್ಚು ದೊಡ್ಡದೇನಿಲ್ಲ.
ಇಲ್ಲಿ ವೇಣುಗೋಪಾಲನ ಏಕ ಶಿಲಾಶಿಲ್ಪವಿದೆ. ಈ ಏಕ ಶಿಲಾಶಿಲ್ಪದಲ್ಲಿ, ಕೃಷ್ಣ ತ್ರಿಭಂಗಿಯಲ್ಲಿ ನಿಂತಿದ್ದು, ಸುರಹೊನ್ನೆ ವೃಕ್ಷದ ಕೆಳಗೆ ವೇಣು ವಾದವನ್ನು ಮಾಡುತ್ತಿರುವನು.ಕೃಷ್ಣನ ಸುತ್ತ ಗೋವುಗಳು, ರುಕ್ಮಿಣಿ, ಸತ್ಯಭಾಮ, ಗೋಪಿಕೆಯರು ಹಾಗೂ ಕೃಷ್ಣನ ಗೆಳೆಯ ಮಕರಂದನ್ನು ಕೆತ್ತಲಾಗಿದೆ. ಈ ವೇಣುಗೋಪಾಲ ಮೂರ್ತಿಯ ವಿಗ್ರಹವು ಮನಮೋಹಕವಾಗಿದೆ.ವೇಣುಗೋಪಾಲ ಮೂರ್ತಿಯ ಶಿರದ ಮೇಲೆ ಹಾಗೂ ದೇವಸ್ಥಾನದ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುವುದರಿಂದ, ಈ ಗೋಪಾಲನನ್ನು, ’ಹಿಮವದ್-ಗೋಪಾಲಸ್ವಾಮಿ’ ಎಂದು ಕರೆಯುವರು.
ಇಲ್ಲಿ ಭೇಟಿ ಮಾಡುವವರು, ಗರ್ಭಗುಡಿಯ ದ್ವಾರದ ಮೇಲಿನ ಹಿಮವನ್ನು ಮುಟ್ಟಿ ಅನುಭವಿಸಬಹುದು.

ದೇವಸ್ಥಾನದ ಅರ್ಚಕರು ಈ ದೇಗುಲದ ಐತಿಹ್ಯವನ್ನು ಹೀಗೆ ತಿಳಿಸಿದರು:
"ಸುಮಾರು ಕ್ರಿ.ಶ.೧೨೫೦-೧೩೦೦ ಆಸುಪಾಸಿನಲ್ಲಿ, ಈ ಪ್ರದೇಶವನ್ನು ಮಾಧವ ಢಣನಾಯಕ (ದಂಡನಾಯಕ) ಎಂಬ ಹೊಯ್ಸಳರ ಪಾಳೆಗಾರನೊಬ್ಬ ಆಳುತ್ತಿದ್ದನು. ಈ ಕೃಷ್ಣ ಭಕ್ತನಿಗೆ ಮಕ್ಕಳಿರಲಿಲ್ಲವಾಗಿ ದುಃಖತಪ್ತನಾಗಿದ್ದನು. ಒಮ್ಮೆ ಶ್ರೀಕೃಷ್ಣ ಪರಮಾತ್ಮನು ಕನಸಲ್ಲಿ ಬಂದು, ನೀನು ದುಷ್ಟತನವನ್ನು ತ್ಯಜಿಸಿ, ನನ್ನನ್ನು ಭಜಿಸಿದರೆ, ನಿನಗೆ ಸಂತಾನ ಪ್ರಾಪ್ತಿಯಾಗುವುದೆಂದು ತಿಳಿಸಿದನು. ಕೃಷ್ಣನನ್ನು ಭಕ್ತಿಯಿಂದ ಪೂಜಿಸಿದ ಇವನಿಗೆ ಗಂಡು ಸಂತಾನ ಪ್ರಾಪ್ತಿಯಾಗಲು, ಇಲ್ಲಿ ದೇವಸ್ಥಾನವನ್ನು ಕಟ್ಟಿದನು. ಈ ಪಾಳೆಗಾರನ ಮಗ, ಪೆರುಮಾಳ್ ಢಣನಾಯಕ(ದಂಡನಾಯಕ)ನು, ತಂದೆಯ ಹರಕೆಯಂತೆ ೪-ಸುತ್ತಿನ ಕೋಟೆಯನ್ನು ದೇಗುಲದ ಸುತ್ತ ಕಟ್ಟಿದನು. ಈ ದೇಗುಲದ ಸುತ್ತ ೮ ಕೊಳಗಳಿದ್ದು ಇವಕ್ಕೆ ಹಂಸತೀರ್ಥ, ಶಂಖತೀರ್ಥ, ಚಕ್ರತೀರ್ಥ, ಗಧಾತೀರ್ಥ, ಪದ್ಮತೀರ್ಥ, ಶಾಙ್ಗತೀರ್ಥ, ವನಮೂಲಕ ತೀರ್ಥ ಎಂಬ ಹೆಸರುಗಳಿವೆ. ಇಲ್ಲಿನ ಹಂಸತೀರ್ಥದಲ್ಲಿ ಮುಳುಗಿದ ಕಾಗೆಗಳು, ಹಂಸಗಳಾಗಿ ಹೊರಬಂದುದರಿಂದ ಈ ಜಾಗದಲ್ಲಿ ಕಾಗೆಗಳು ಕಾಣುವುದಿಲ್ಲ."



ಈ ವೇಣುಗೋಪಾಲ ದೇವಸ್ಥಾನದಲ್ಲಿ ಸಂತಾನ ಭಾಗ್ಯವಿಲ್ಲದವರು, ಹರಕೆ ಮಾಡಿಕೊಳ್ಳುವುದು ವಾಡಿಕೆ. ಆದ್ದರಿಂದ ಈ ದೇವರಿಗೆ, ಸಂತಾನ ಗೋಪಾಲ ಕೃಷ್ಣ ಎಂದೂ ಕರೆಯುವರು. ದೇವರ ಪೂಜೆಯಾದ ಮೇಲೆ, ನಮ್ಮಗಳ ಹೊಟ್ಟೆ-ಪೂಜೆಯನ್ನು ನಡೆಸಿ, ಮುಂದೆ, ’ಹುಲುಗಿನ ಮುರುಡಿ’ ಎಂಬ ಸ್ಥಳಕ್ಕೆ ಭೇಟಿ ನೀಡಲು ಹೊರಟೆವು.
ಈ ಸ್ಥಳವನ್ನು ತಲುಪಲು, ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಬೇಕು; ಇದು ಸುಮಾರು ೮ ಕಿ.ಮೀ ದೂರದಲ್ಲಿದೆ. ತೆರಕಣಾಂಬಿಯಿಂದ ಬಲಕ್ಕೆ ತಿರುಗಿ, ಸುಮಾರು ೧೨ ಕಿ.ಮೀ, ದೂರ ಕ್ರಮಿಸಿದರೆ ’ಹುಲುಗಿನ ಮುರುಡಿ’ ಎಂಬ ಸ್ಥಳವಿದೆ. ಇಲ್ಲಿ ಬೆಟ್ಟದ ಮೇಲೆ, ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು, ಇಲ್ಲಿ ರಾಮ-ಲಕ್ಷ್ಮಣರು ಬಂದಿದ್ದರೆಂದು ಪ್ರತೀತಿ. ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಣದಿಂದ ನೀರನ್ನು ತರಿಸಿದ್ದಾಗಿ ಹೇಳುವರು. ಈ ಸ್ಠಳದಿಂದ ರಾಮ-ಲಕ್ಷ್ಮಣರು ಹೊರಡುವಾಗ, ಬಿಲ್ಲನ್ನು ಇಲ್ಲೇ ಮರೆತು ಹೋದರೆಂದು ಅರ್ಚಕರು ಒಂದು ಬಿಲ್ಲನ್ನು ತೋರಿದರು. ಇಲ್ಲಿನ ಬಿಲ್ಲು ರಾಮ-ಲಕ್ಷ್ಮಣರ ಕಾಲದ್ದೇ, ಎಂಬುದನ್ನು ಇತಿಹಾಸಕಾರರೇ ಹೇಳಬೇಕು. ಈ ದೇಗುಲದ ವೆಂಕಟರಮಣನ ದರ್ಶನವನ್ನು ಪಡೆದು ನಾವು ಮೈಸೂರಿಗೆ ಹಿಂತಿರುಗಿದೆವು.

--ಶ್ರೀ

ಕೊ.ಕೊ: ಹಿಮವದ್-ಗೋಪಾಲಸ್ವಾಮಿ ಬೆಟ್ಟದಲ್ಲಿ ಹಾಗೂ ಹುಲುಗಿನ ಮುರುಡಿಯಲ್ಲಿ, ಯಾವುದೇ ರೀತಿಯ ಊಟ/ತಿಂಡಿಯ ವ್ಯವಸ್ಥೆ ಇಲ್ಲ. ನಾವುಗಳು ಬುತ್ತಿಯನ್ನು ಕಟ್ಟಿಕೊಂಡು ಹೋದದ್ದರಿಂದ ತೊಂದರೆಯಾಗಲಿಲ್ಲ. ಹತ್ತಿರದ ಗುಂಡ್ಲುಪೇಟೆಯಲ್ಲಿ ಸುಮಾರಾದ ಹೋಟೆಲ್’ಗಳು ಇವೆ.

Thursday, October 2, 2008

ಮೆಟ್ಟಿಲ ಮಾಡಿ, ಪುಟ್ಟ ಬೊಂಬೆಗಳಿಟ್ಟು - ಆರತಿ ಹಾಡು

ಈ ಬಾರಿಯ ನವರಾತ್ರಿ ಹಬ್ಬಕ್ಕೊಂದು ಆರತಿಯ ಹಾಡಿನ ಪ್ರಯತ್ನ...


ಮೆಟ್ಟಿಲ ಮಾಡಿ
ಪುಟ್ಟ-ಬೊಂಬೆಗಳಿಟ್ಟು
ಬೆಳಗಿರರಾರತಿಯ ನಾರಿಯರೇ...

ಕಲಶವನು ಮಾಡಿ
ತಿಲಕವನು ಇಟ್ಟು
ಬೆಳಗಿರರಾರತಿಯ ನಾರಿಯರೇ...

ಹೊತ್ತಿಗೆಯನಿಟ್ಟು
ಬತ್ತಿ-ದೀಪವನಿಟ್ಟು
ಬೆಳಗಿರಾರತಿಯ ನಾರಿಯರೇ...

ಆಯುಧವನಿಟ್ಟು
ಪಾಯಸವ ಕೊಟ್ಟು
ಬೆಳಗಿರಾರತಿಯ ನಾರಿಯರೇ...

ಅಕ್ಕ-ಪಕ್ಕದ ಮನೆಯ
ಚಿಕ್ಕ ಮಕ್ಕಳ ಕರೆದು
ಬೆಳಗಿರಾರತಿಯ ನಾರಿಯರೇ...

ಮಕ್ಕಳಾ ಬಾಯಿಗೆ
ಚಿಕ್ಕ-ಚಕ್ಕುಲಿಯಿಟ್ಟು
ಬೆಳಗಿರಾರತಿಯ ನಾರಿಯರೇ...

ಕಹಿ ನೆನಪುಗಳ ಸರಿಸಿ
ಸಿಹಿ ಹೂರಣವಿಟ್ಟು
ಬೆಳಗಿರಾರತಿಯ ನಾರಿಯರೇ...

ಶಕ್ತಿ ದೇವತೆಯರನು
ಭಕ್ತಿಯಿಂದಲಿ ಭಜಿಸಿ
ಬೆಳಗಿರಾರತಿಯ ನಾರಿಯರೇ...

ನವ ರಾತ್ರಿ ಹಬ್ಬಕ್ಕೆ
ನವ ದೇವಿಯರ ನೆನೆದು
ಬೆಳಗಿರಾರತಿಯ ನಾರಿಯರೇ...

Tuesday, September 30, 2008

ಮರಳಿ ಬಾ ಶಾಲೆಗೆ...ಬೀದಿ ನಾಟಕ ಪ್ರಯೋಗ

ನಮ್ಮೂರಲ್ಲಿ (ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕು) ನಾವು ಜನ ಜಾಗೃತಿಗಾಗಿ ೭-ಸೆಪ್ಟೆಂಬರ್-೦೮ ರಂದು ಒಂದು ಸಣ್ಣ ಬೀದಿ ನಾಟಕವನ್ನು ಮಾಡಿದೆವು.
ಈ ನಾಟಕದಲ್ಲಿ, ಹಳ್ಳಿಯ ಜನರಿಗೆ ವಿದ್ಯಾಭ್ಯಾಸದ ಮಹತ್ವ, ಸರ್ಕಾರ ಮಕ್ಕಳಿಗೆ ಕೊಡುತ್ತಿರುವ ಸವಲತ್ತು,
ನೀರಿನ ಬಳಕೆ, ಕೆರೆಗಳ ಉಳಿಕೆ ಮುಂತಾದ ವಿಷಯಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದೆವು.





ಇಡೀ ನಾಟಕವನ್ನು ನಮ್ಮ ಕುಟುಂಬದವರೇ ಬರೆದು, ನಡೆಸಿಕೊಟ್ಟದ್ದು ವಿಶೇಷವಾಗಿತ್ತು.
ಪಾತ್ರಧಾರಿಗಳಾಗಿ - ನಾನು, ನನ್ನ ಅಕ್ಕ - ರೋಹಿಣಿ, ನನ್ನ ಮಾವನ ಮಗ ಆನಂದ್, ನಮ್ಮ ಮಾವ ಕುಮಾರ್, ಕು.ಇಂದು ಮತ್ತು ಕು.ಸೌಮ್ಯ ಭಾಗವಹಿಸಿದ್ದೆವು.
(ಸೂ:
ನಾಟಕದಲ್ಲಿ ಎರಡು ಹಾಡುಗಳೂ ಒಳಗೊಂಡಿದ್ದು, ಇದರ ಚಿತ್ರಣ ಇಲ್ಲಿಲ್ಲ.
ನಾಟಕವನ್ನು ಬರೆದವರು ನನ್ನ ಮಾವಂದಿರ ಮನೆಯವರಾದ ಪುಷ್ಪಾ ಹಾಗೂ ಕುಮಾರ್.
ಈ ಹಾಡುಗಳಿಗೆ ರಾಗ ಸಂಯೋಜನೆಯನ್ನು ಹಾಕಿ ಕೊಟ್ಟವರು ವೆಂಕಟೇಶ್(ಮನು).
ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಅಷ್ಟು ಚೆನ್ನಿಲ್ಲದಕ್ಕೆ ಕ್ಷಮೆಯಿರಲಿ.)

ಇದೇ ರೀತಿಯ ಬೀದಿನಾಟಕವನ್ನು ನಮ್ಮೂರ ಪಕ್ಕದ ಹಳ್ಳಿಯಾದ ತಿಪ್ಪಾಪುರದಲ್ಲೂ ನಡೆಸಿದೆವು.

ಈ ನಾಟಕವಲ್ಲದೆ, ಎರಡೂ ಹಳ್ಳಿಯ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿದೆವು.
ಹಾಗೂ ಪುಸ್ತಕಗಳು, ಆಟದ ಸಾಮಾನುಗಳು, ಬಿಸಿಯೂಟ ಕಾರ್ಯಕ್ರಮಕ್ಕೆ ಅನುವಾಗಲು ಒಂದು ಕುಕ್ಕರ್ ವಿತರಿಸಿದೆವು.

ಇದಲ್ಲದೆ, ತಿಪ್ಪಾಪುರ ಮತ್ತು ಅಡವಿ ನಾಗೇನಹಳ್ಳಿ ಮಕ್ಕಳ ನಡುವೆ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದೆವು.
ಈ ರಸಪ್ರಶ್ನೆ ಕಾರ್ಯಕ್ರಮವು ಎರಡು ವಿಭಾಗಗಳಲ್ಲಿ ನಡೆಯಿತು.
ಮೊದಲ ವಿಭಾಗದಲ್ಲಿ ೪ ಮತ್ತು ೫ ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು
ಎರಡನೇ ವಿಭಾಗದಲ್ಲಿ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದೆವು.
ಎರಡೂ ವಿಭಾಗಗಳಲ್ಲಿ ಅಡವಿ ನಾಗೇನಹಳ್ಳಿಯ ಮಕ್ಕಳು ಗೆಲುವನ್ನು ಸಾಧಿಸಿ ಬಹುಮಾನಗಳನ್ನು ಪಡೆದರು.

ಈ ಕಾರ್ಯಕ್ರಮ ಎಲ್.ಐ.ಸಿ ಮತ್ತು ಸಿ.ಒ.ಸಿ.ಬಿ. ಬ್ಯಾಂಕ್ ಸಹಕಾರದೊಂದಿಗೆ ನಡೆಯಿತು.

--ಶ್ರೀ

ಮತದ ಪಥ

ಮತದ
ಪಥ ಹಿಡಿಯಿರೆಂಬುದು
ಸಂತರ ತುಡಿತ
ಮತದ ಪಥ
ತಮದ ಪಥವೆಂಬುದು
ಬರೀ ಕುಹಕ...
ಮತದ ಪಥದಿ
ಇರಲು ಸತತ
ಗೆಲವು ಎಂದೂ ಖಚಿತ...

--ಶ್ರೀ

ನಿಂದಕರೆಂದಿಗೂ ಸಂತರೇ ಅಲ್ಲ

ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...

--ಶ್ರೀ

*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...





ಇದೇ ರೀತಿ ನಮ್ಮ ಪುರಂದರ ದಾಸರು ಈ ರೀತಿ ಅರಿಕೆ ಮಾಡಿಕೊಂಡಿದ್ದಾರೆ...

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||

ಇದೇ ರೀತಿ, ಎಲ್ಲರೂ ಒಗ್ಗೂಡಿ ಬೆಳೆಯೋಣ, ನಲಿಯೋಣ , ಏನಂತೀರಿ? :)


--ಶ್ರೀ

ಮತಾಂತರವನ್ನು ಏಕೆ ತಡೆಯಬೇಕು?

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?

ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...

:)

Tuesday, September 23, 2008

ಮತಾಂತರ ಏಕೆ ಬೇಕು?

ಪತ್ರಕರ್ತ: ಈ ಮತಾಂತರ ಏಕೆ ಬೇಕು?

ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು...

Monday, September 22, 2008

ಮಣ್ಣನು ತಿನ್ನಲು ಬೇಡವೋ



ಮಣ್ಣನು ತಿನ್ನಲು ಬೇಡವೋ ಎಂದೆ
'ಬಾಯಲ್ಲಿ ಮಣ್ಣನು ನೋಡಿಲ್ಲಿ' ಅಂದೆ
ಕೋಪದಿ ಕಿವಿಯನ್ನು ಹಿಂಡಲು ನಾನು
ಜಗವನ್ನೇ ಕಂಡೆ ಜಗವನ್ನೇ ಕಂಡೆ...



ನದಿಯ ನೀರಾಟ ಬೇಡವೊ ಎಂದೆ
'ನೀರಲ್ಲಿ ಹಾರುವೆ ನೋಡಿಲ್ಲಿ' ಅಂದೆ
ಕೋಪದಿ ಬೆತ್ತವ ತರಲು ನಾನು
ಕಾಳಿಂಗನ ಆಟ ನಾನಂದು ಕಂಡೆ...




ಮಳೆಯಲ್ಲಿ ನೆನೆವುದು ಬೇಡವೋ ಎಂದೆ
'ಮಳೆಯಲ್ಲಿ ನೆಂದಿಹೆ ನೋಡಿಲ್ಲಿ' ಅಂದೆ
ಕೊಡೆಯನ್ನು ಹಿಡಿದು ನಾನೋಡಿ ಬರಲು
ಬೆರಳ ಮೇಲೆ ಅಂದು ಗಿರಿಯನ್ನು ಕಂಡೆ...



ಬಲುತುಂಟನಿವನೆಂದು ಸಿಡಿಮಿಡಿಗೊಂಡೆ
ಲೀಲೆಯ ನೋಡಿ, ನನ್ನ ತಪ್ಪ ಕಂಡೆ
ಮಗನಲ್ಲವೆಂದು ನಾ ಅರಿತುಕೊಂಡೆ
ಜಗದೀಶನ ನಾನು ಕಣ್ಮುಂದೆ ಕಂಡೆ
ಜಗವನ್ನು ತೋರಿದ ದೇವನ ಕಂಡೆ...
ಜಗವನ್ನು ತೋರಿದ ದೇವನ ಕಂಡೆ...

--ಶ್ರೀ

(೨೧ ಸೆಪ್ಟೆಂಬರ್ ೨೦೦೮)

Sunday, September 21, 2008

ಪುಟ್ಟನ ದಿನಚರಿ


ಬೇಗನೆ ಎದ್ದು,
ಹಲ್ಲನು ಉಜ್ಜಿ,
ಜಳಕವ ಮಾಡಿದ
ನಮ್ಮಯ ಪುಟ್ಟ

ಬಟ್ಟೆಯ ತೊಟ್ಟು,
ತಲೆಯನು ಬಾಚಿ,
ಬೂಟನು ಹಾಕಿದ
ನಮ್ಮಯ ಪುಟ್ಟ

ಬಾಟಲು,ಪುಸ್ತಕ
ಚೀಲದಿ ತುಂಬಿ
ಹೊರಟನು ಶಾಲೆಗೆ
ನಮ್ಮಯ ಪುಟ್ಟ

ಶಾಲೆಲಿ ಕೇಳಿದ
ಹಾಡನು ಕಲಿತು
ಮನೆ-ಕಡೆ ಓಡಿದ
ನಮ್ಮಯ ಪುಟ್ಟ

ಬರುತಲೆ ಅಮ್ಮನ
ಮುದ್ದನು ಪಡೆದು
ಖುಶಿಯಲಿ ಹಾಡಿದ
ನಮ್ಮಯ ಪುಟ್ಟ

ಅಮ್ಮನ ಕೈಯಲಿ
ಊಟವ ಉಂಡು
ಮಡಿಲಲಿ ಮಲಗಿದ
ನಮ್ಮಯ ಪುಟ್ಟ

ಸಂಜೆಗೆ ಎದ್ದು
ಅಳುತಿರುವಾಗ
ಆಟಿಕೆ ನೋಡಿದ
ನಮ್ಮಯ ಪುಟ್ಟ

ಮಾಮನು ತಂದ
ಆಟಿಕೆ ಹಿಡಿದು
ಆಟವನಾಡಿದ
ನಮ್ಮಯ ಪುಟ್ಟ

ರಾತ್ರಿಗೆ ಚಪಾತಿ
ಬೇಕು ಎಂದು
ಹಟವನು ಹಿಡಿದ
ನಮ್ಮಯ ಪುಟ್ಟ

ಕೂಡಲೆ ಅಮ್ಮನು
ಚಪಾತಿ ಮಾಡಲು
ಚಪ್ಪರಿಸಿದನು
ನಮ್ಮಯ ಪುಟ್ಟ

ಹಾಲನು ಕುಡಿದು
ಹಾಸಿಗೆ ಮೇಲೆ
ಕುಣಿದಾಡಿದನು
ನಮ್ಮಯ ಪುಟ್ಟ

ಅಮ್ಮನ ಮಡಿಲಲಿ
ಲಾಲಿಯ ಕೇಳಿ
ನಿದ್ದೆಗೆ ಜಾರಿದ
ನಮ್ಮಯ ಪುಟ್ಟ

Friday, September 19, 2008

'ಟಾಟಾ' ಹೋದ 'ಟಾಟಾ'!

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.

ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.

ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.

ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.

'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.

--ಶ್ರೀ

ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.

Wednesday, September 10, 2008

Quote hanger

"Expectation is the root cause for disappointment"

- Srinivas
(2nd July 2008)

Tuesday, September 9, 2008

ತಣ್ಣಗಾದ ಕುನ್ನಕ್ಕುಡಿ ವಯೊಲಿನ್...

ನಾನು ಚಿಕ್ಕವನಿದ್ದಾಗ, ಬೇಸಿಗೆ ರಜ ಬಂತೆಂದರೆ ಸಾಕು, ತಂದೆ-ತಾಯಿಯರು, ನಮ್ಮನ್ನು ರಾಮ ನವಮಿ ಪ್ರಯುಕ್ತ ನಡೆಯುತ್ತಿದ್ದ ಶೇಷಾದ್ರಿಪುರಂ ಸಂಗೀತೋತ್ಸವಕ್ಕೆ ಕರೆದೊಯ್ಯುತ್ತ್ತಿದ್ದರು.
ಸಂಗೀತೋತ್ಸವಕ್ಕೆ ಕರೆದೊಯ್ದಾಗ ಏನೋ ಒಂದು ರೀತಿ ಖುಷಿ...ಶೇಷಾದ್ರಿಪುರಂ ಶಾಲೆಯ ಪಕ್ಕದಲ್ಲಿನ ಪಾರ್ಕ್'ನಲ್ಲಿ ಕುಳಿತು ಕಡಲೇ ಕಾಯಿ ತಿನ್ನುತ್ತಾ,
ಅಕ್ಕನೊಡನೆ ಆಟವಾಡುತ್ತಾ ಸಂಗೀತ ಕೇಳುವುದು ಒಂದು ಮೋಜು ನಮಗೆ...
ಅಕ್ಕ-ಪಕ್ಕದ ಮನೆಯವರು, ಮಾವ,ಚಿಕ್ಕಪ್ಪಂದಿರ ಮಕ್ಕಳು ಎಲ್ಲರೂ ಸಂಗೀತ ಕೇಳಲು ಬರುತ್ತಿದ್ದರಿಂದ ಅದೊಂದು ಸುಗ್ಗಿ!
ಎಲ್ಲ ಸಂಗೀತ ಮಹೋತ್ಸವದಂತೆ ಇಲ್ಲೂ, ಒಂದೊಂದು ದಿನವೂ, ಬೇರೆ-ಬೇರೆ ವಿದ್ವಾಂಸರಿಂದ ಖಚೇರಿಗಳು...
ಇವೆಲ್ಲವುಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ನಮ್ಮಂತ ಚಿಕ್ಕವರಿಗೆ ಮನವನ್ನು ಮುಟ್ಟಿದವರಲ್ಲಿ ಕೆಲವರೆಂದರೆ - ಕುನ್ನಕ್ಕುಡಿ ವೈದ್ಯನಾಥನ್, ಯು ಶ್ರೀನಿವಾಸ್,
ರವಿ ಕಿರಣ್, ಟಿ.ವಿ. ಶಂಕರ ನಾರಾಯಣ (ಇಲ್ಲಿ ನಾನು ಹಲವಾರು ಹೆಸರುಗಳನ್ನು ಮರೆತಿರಬಹುದು)...
ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ತಿಳಿವಿಲ್ಲದ ನನಗೆ, ಆಗ ಇವರೆಲ್ಲರಲ್ಲೂ ಕಂಡದ್ದು ಅವರದೇ ಆದ ಶೈಲಿ ಅಥವಾ ಬೇರೆ ತೆರನಾದ ವಾದ್ಯ!

ಕುನ್ನಕ್ಕುಡಿಯವರ ವಯೊಲಿನ್ ವಾದನ - ಬೇರೆಯವರಿಗಿಂತ ಭಿನ್ನ ಮತ್ತು ವಾದನದ ವೇಗಕ್ಕೆ ಹೆಸರುವಾಸಿ (Fast paced)...
ತಮ್ಮ ವಿಶಿಷ್ಟ ರೀತಿಯ ವಯೊಲಿನ್ ವಾದನದಿಂದ ಕರ್ನಾಟಕ ಸಂಗೀತವನ್ನು ಹೆಚ್ಚು ಜನಕ್ಕೆ ಮುಟ್ಟುವಂತೆ ಮಾಡಿದವರು ...
ಕುನ್ನಕ್ಕುಡಿಯವರು ಇಡುತ್ತಿದ್ದ ದೊಡ್ಡದಾದ ವಿಭೂತಿ, ಕುಂಕುಮ ಕೂಡ ತಮ್ಮ ಭಿನ್ನತನವನ್ನು ತೋರುತ್ತಿತ್ತು...
ಅವರು ವಯೊಲಿನ್ ನುಡಿಸುವಾಗ ಮಾಡುತ್ತಿದ್ದ ವಿಚಿತ್ರ ಹಾವ-ಭಾವಗಳು, ಚಿಕ್ಕವರಾದ ನಮಗೆ ನಗುವನ್ನು ತಂದಿದ್ದೂ ಹೌದು.
ಸಾಮಾನ್ಯವಾಗಿ ಸಂಜೆಗೆ ಪ್ರಾರಂಭವಾಗುತ್ತಿದ್ದ ಶೇಷಾದ್ರಿಪುರಂ ಸಂಗೀತ ಮಹೋತ್ಸವದಲ್ಲಿ,
ಇವರ ಖಚೇರಿಗಳು ಹಲವಾರು ಬಾರಿ ವಿಳಂಬವಾಗೇ ಪ್ರಾರಂಭವಾದರೂ, ಮಧ್ಯರಾತ್ರಿ ೧-೨ ರವರೆಗೆ ನಿರಂತರವಾಗಿ ಹರಿದು ಬರುತ್ತಿತ್ತು...
ಜನರನ್ನು ಮಂತ್ರ-ಮುಗ್ಧಗೊಳಿಸಿ, ನಡುರಾತ್ರಿಯಾದರೂ ಮನೆಗೆ ಹೋಗದಂತೆ ಕಟ್ಟಿಹಾಕುತ್ತಿತ್ತು!
ಇದಲ್ಲದೆ, ತಮ್ಮ ಹಲವಾರು ಖಚೇರಿಗಳಲ್ಲಿ, ಆಯಾ ರಾಗಕ್ಕೆ ಅನುಗುಣವಾಗಿ, ರಾಗಕ್ಕೆ ಹೊಂದುವ ಚಲನ ಚಿತ್ರದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ಹಾಡುಗಳ
ನಡುವೆ ಸೇರಿಸಿ ವಯೊಲಿನ್ ವಾದನ ಮಾಡುತ್ತಿದ್ದರು. ಖಚೇರಿಯ ಮಧ್ಯೆ, ಮುಂಜಾನೆ ಆಕಾಶವಾಣಿಯಲ್ಲಿ ಬರುತ್ತಿದ್ದ ಇಂಪನ್ನು ಜನರಿಗೆ ಉಣಬಡಿಸಿದವರಿವರು...
ಹೀಗೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಖಚೇರಿಗಳನ್ನು ಕೊಡುತ್ತಿದ್ದರಿಂದ, ಮಡಿವಂತರಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೆ...
ನನಗನಿಸಿದಂತೆ, ಇವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ದೊರಕದೇ ಹೋದದ್ದು ಇದೇ ಕಾರಣಕ್ಕಿರಬಹುದು...
ಇವರು ವಾತಾವರಣಕ್ಕೆ ತಕ್ಕಂತೆ ವಯೊಲಿನ್ ನಾದವು ಬದಲಾಗುವುದರ ಬಗ್ಗೆ ಅಧ್ಯಯನವನ್ನು ನಡೆಸಿದ್ದರು ಮತ್ತು ಗೌರವ ಡಾಕ್ಟೊರೇಟ್ ಪಡೆದಿದ್ದರು.

ನೆನ್ನೆ (೮-ಸೆಪ್ಟೆಂಬರ್-೨೦೦೮), ಕುನ್ನಕ್ಕುಡಿ ವೈದ್ಯನಾಥನ್ ರವರು ಪಂಚಭೂತಗಳಲ್ಲಿ ಲೀನರಾದರು.
ಅದ್ಭುತ ವಯೊಲಿನ್ ರಸವನ್ನು ಉಣಿಸಿದ ಇವರಿಗೆ ಅನಂತ ನಮನಗಳು.
ಕರ್ನಾಟಕ ಸಂಗೀತ ಲೋಕ ಇಂಥಾ ಒಬ್ಬ ಮೇರು ಕಲಾವಿದರನ್ನು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ ...

ಕುನ್ನಕ್ಕುಡಿ ವೈದ್ಯನಾಥನ್ ರವರ ವಯೊಲಿನ್ ವಾದನವನ್ನು ಕೇಳಲು ಇಲ್ಲಿ ಚಿಟಿಕಿಸಿ.




--ಶ್ರೀ

Sunday, August 31, 2008

ಕಳವು

"ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ...
ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ...
ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ!

ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ ದುಡ್ಡು ಕಾಣೆಯಾಗಿತ್ತು...
ಮೊದ ಮೊದಲು ರಾಜ ಇದರ ಬಗ್ಗೆ ಹೆಚ್ಚು ಗಮನಿಸಿರಲಿಲ್ಲ...
ಒಮ್ಮೆ ಕಳೆದಿದ್ದೆ ಎಂದುಕೊಂಡ ದುಡ್ಡು, ಕಳೆದಿದ್ದಲ್ಲ, ಗೆಳೆಯ ನಾಣಿಗೆ ಕೊಟ್ಟಿದ್ದು ಎಂದು ತಿಳಿದಾಗ ಸುಮ್ಮನಾಗಿದ್ದ...
ಮತ್ತೊಮ್ಮೆ ಕಳೆದೆ ಎಂದುಕೊಂಡ ದುಡ್ಡು ತಾನಗಾಗಿಯೇ ಖರ್ಚು ಮಾಡಿದ್ದು ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದ...
ಆದರೂ ಕಳವು ನಡೆಯುತ್ತಿದೆ ಎಂಬ ಗುಮಾನಿ ...
ಸಮಯ ಕಳೆದಂತೆ, ರಾಜ ತನ್ನ ವೆಚ್ಚವನ್ನೆಲ್ಲ ಗಮನಿಸತೊಡಗಿದ್ದ...
ಇತ್ತೀಚಿಗಷ್ಟೆ ತಿಳಿದಿದೆ, ತನ್ನ ಸಂಶಯ ಸರಿ ಎಂದು...!
ಹಲವು ಬಾರಿ ಮುಂಚೆಯೂ ಕಳುವಾಗಿದೆ ಎಂದು! ಇತ್ತೀಚಿಗೆ ಕಳವು ಹೆಚ್ಚಾಗಿದೆ...!

ರಾಜ ಅವಲೋಕಿಸ ತೊಡಗಿದ...’ಯಾರು ಕಳ್ಳತನ ಮಾಡುತ್ತಿರಬಹುದು???’...
ರಾಜನ ಮನೆಗೆ ಬರುವವರೇ ಕೆಲವೇ ಕೆಲವರು...
ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಜನ ಮನೆಗೆ ಬರುತ್ತಿದ್ದ ಗೆಳೆಯರಿಬ್ಬರೇ - ಸೀನ, ನಾಣಿ...
ಇಬ್ಬರೂ ನೆಚ್ಚಿನವರ್‍ಏ! ತಾನು ಕಷ್ಟದಲ್ಲಿದ್ದಾಗ ಸಹಾಯಕ್ಕೆ ನಿಂತವರು...
ಇದು ಬಿಟ್ಟರೆ, ಮನೆ ಮಾಲೀಕರ ಮನೆ ಕೆಲಸದ ಹುಡುಗಿ...
ಅವಳು ಬರುವುದೂ ವಾರಕ್ಕೆ ಒಮ್ಮೆ!
ರಾಜ ಟೈಫಾಯಿಡ್ ಜ್ವರದಿಂದ ನರಳಿದಾಗ ಅವಳೇ ಅಡುಗೆ ಮಾಡಿದ್ದು...
ಬಹಳ ಮೃದು ಸ್ವಭಾವ ಮತ್ತು ಒಳ್ಳೆಯ ನಡತೆ...
ಇವರುಗಳು ಯಾರನ್ನೂ ಶಂಕಿಸಲೂ ಮನಸ್ಸು ಒಪ್ಪಲಿಲ್ಲ...

ಎರಡು ದಿನಗಳ ಬಳಿಕ ಪರ್ಸ್’ನಿಂದ ಮತ್ತೆ ಕಳುವಾಯಿತು!
ರಾಜನಿಗೆ ತಲೆ ಚಿಟ್ಟು ಹಿಡಿದಂತಾಯಿತು...
ಒಲ್ಲದ ಮನದಲ್ಲಿ, ಇವರೆಲ್ಲರ ಮೇಲೆ ಕಣ್ಣಿಡಲಾರಂಭಿಸಿದ...
ಇವರೆಲ್ಲ ಬಂದಾಗ ಅವರ ಪ್ರತಿ ಚಲನ-ವಲನಗಳನ್ನು ಗಮನಿಸಿದ...
ಆದರೆ, ಆ ರೀತಿ ಗಮನಿಸುತ್ತಿದ್ದಾಗಲೆಲ್ಲ ಕಳುವಾಗಲೇ ಇಲ್ಲ...

ಸೀನ-ನಾಣಿ ಈ ಕಳವು ಮಾಡಿಲ್ಲವೆಂದು ಧೃಡ ಪಟ್ಟಾಗ,
ತನ್ನ ಕಳುವಿನ ಕಥೆಯನ್ನು ಅವರ ಬಳಿ ಹೇಳಿದ...
"ರಾಜ, ನಮ್ ಮನೆ ಹತ್ರ ಒಬ್ಬ ಕವಡೆ ಹಾಕಿ ಶಾಸ್ತ್ರ ಹೇಳ್ತಾನೆ...
ಅವನನ್ನ ಕೇಳೋಣ ಬಾ, ಅವನು ನನ್ನ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸರಿಯಾಗಿ ಹೇಳಿದಾನೆ..."
ಸೀನನಿಗೆ ಸ್ವಲ್ಪ ದೈವ/ದೆವ್ವಗಳ ಬಗ್ಗೆ ಕೊಂಚ ನಂಬಿಕೆ ಹೆಚ್ಚು...
ಇದನ್ನೆಲ್ಲ ನಂಬದ ನಾಣಿ ಹೇಳಿದ..."ಲೋ ರಾಜ, ಕಳ್ಳತನ ಆದ್ರೆ, ಪೋಲೀಸ್ ಹತ್ರ ಹೋಗ್ತಾರೋ?
ಬುರುಡೆ ದಾಸಯ್ಯನ ಹತ್ತಿರ ಹೋಗ್ತಾರೋ? ಬಾ ನಾವು ಪೋಲೀಸ್ ಕಂಪ್ಲೈಂಟ್ ಕೊಡೋಣ..."

ರಾಜನಿಗೆ ಎರಡಕ್ಕೂ ಮನಸಿಲ್ಲ...
ಪೋಲೀಸ್ ಬಳಿ ಹೋದರೆ ಕಳ್ಳನ್ನ ಹಿಡಿಯೋದು ಬಿಟ್ಟು ಸುಮ್ಮನೆ ಸ್ಟೇಷನ್ ಗೆ ಅಲೆದಾಡಿಸ್ತಾರೆ,
ಲಂಚದ ಗೋಳು ಬೇರೆ...
ಸೀನ ಹೇಳಿದ ಕವಡೆ ಶಾಸ್ತ್ರದ ಬಗ್ಗೆನೂ ನಂಬಿಕೆ ಇಲ್ಲ...
ಆದರೆ ರಾಜ ಸಾಮಾನ್ಯವಾಗಿ ಸೀನನ ಮಾತು ತಳ್ಳಿ ಹಾಕಲಾರ...
ಹಾಗಾಗಿ, ಸೀನನೊಡನೆ ಶಾಸ್ತ್ರ ಕೇಳೋಕ್ಕೆ ಹೋದ...
ಶಾಸ್ತ್ರಿಗಳು ಎರಡು ಮೂರು ಬಾರಿ ಕವಡೆ ಹಾಕಿ, ಒಂದೆರಡು ಪ್ರಶ್ನೆ ಹಾಕಿ...
"ಕಳುವೇ ಆಗಿಲ್ಲ ಹೋಗಿ, ನಿಮ್ ಹಣ ಭದ್ರವಾಗಿದೆ" ಅಂದ್ಬಿಟ್ಟ್ರು!

ರಾಜನಿಗೋ ಮೊದಲೇ ಇದರ ಬಗ್ಗೆ ಹೆಚ್ಚು ನಂಬಿಕೆ ಇರಲಿಲ್ಲ...
"ಥೂ ನಿನ್ನ! ನಾನು ಅಲ್ಲಿ ದುಡ್ಡು ಕಳ್ಕೊಂಡಿದ್ರೆ, ನಿಮ್ ಶಾಸ್ತ್ರಿ ಎಂಥಾ ಬುರುಡೇ ಬಿಡ್ತಾನೋ?!!!
ಇಂಥಾವರೆಲ್ಲ ನಮ್ ಥರದವರಿಂದ ಜೀವನ ಮಾಡ್ತಾರೆ ಅಷ್ಟೆ!"
"ಹೋಗಲೀ, ನಾನು ಊರಿಗೆ ಇಪ್ಪತೈದು ಸಾವಿರ ಕಳಿಸ್ಬೇಕು, ಉಳಿಸಿದ ದುಡ್ಡೆಲ್ಲ ಕಳುವಾಗಿದೆ, ಈವತ್ತು ಅಮ್ಮ ಬರುತ್ತಾರೆ ಊರಿಂದ.
ಅವರಿಗೆ ಇದೆಲ್ಲ ಗೊತ್ತಾಗೋದು ಬೇಡ, ನೀನು ಸಂಜೆ ದುಡ್ಡು ಅಡ್ಜಸ್ಟ್ ಮಾಡಿಕೊಂಡು ಬಂದು ಕೊಡು,
ನಾನು ಅಮ್ಮ ಬಂದ ತಕ್ಷಣ ಅವರಿಗೆ ಕೊಟ್ಟು ಬಿಡ್ತೀನಿ, ಕಳ್ಳನ್ನ ಆಮೇಲೆ ಹಿಡಿಯೋಣ...
ನಿನ್ನ ದುಡ್ಡು ಪ್ರತಿ ತಿಂಗಳು ಕೊಂಚ ಕೊಂಚ ವಾಪಸ್ ಕೊಡ್ತೀನಿ"

ಸೀನ ಮಾತು ಕೊಟ್ಟಂತೆ, ಸಂಜೆ ಬಂದು ದುಡ್ಡನ್ನು ಕೊಟ್ಟು ಹೋದ...
ರಾಜ ದುಡ್ಡು ಭದ್ರವಾಗಿಟ್ಟು, ಅಮ್ಮನ ಹಾದಿಗೆ ಕಾದ...
ಸಂಜೆಯೇ ಬರಬೇಕಾಗಿದ್ದ ಅಮ್ಮ, ಊರಿಂದ ಬರುವ ಹೊತ್ತಿಗೆ ರಾತ್ರಿಯಾಗಿತ್ತು...
ಊಟ ಮಾಡುತ್ತ ಅಣ್ಣನ ಆರೋಗ್ಯ, ಸೋರುತ್ತಿರುವ ಅಡಿಗೆ ಮನೆ ಸೂರು, ಊರಿನ ಕಥೆ ಎಲ್ಲ ಮಗನಿಗೆ ಹೇಳಿದ್ದಾದ ಮೇಲೆ...
"ರಾಜೂ...ಕೊಂಚ ಹಾಸಿಗೆ ಹಾಸಪ್ಪ, ತುಂಬಾ ಸುಸ್ತಾಗಿದೆ...ಬೆಳಗ್ಗೆ ಬೇಗ ಎದ್ದೇಳು, ಗುಂಡು ಮಾಮ ಮನೆಗೆ ಹೋಗಿಬರೋಣ, ಅವಳ ಮಗಳು ಸುಮಾ ಇದೇ ಊರಲ್ಲಿ ಕೆಲಸ ಮಾಡ್ತಿದ್ದಾಳಂತೆ, ಸುಮ್ಮನೆ ಹಾಗೆ ಗಮನಿಸು, ಮನಸ್ಸಿಗೆ ಹಿಡುಸಿದರೆ ಮದುವೆ ಬಗ್ಗೆ ಮಾತಾಡೋಣ..."
"ಅಮ್ಮ...ದುಡ್ಡು ಬೇಕೂ ಅಂದಿದ್ಯಲ್ಲ..."...
"ನಾಳೆ ಸಂಜೆ ಊರಿಗೆ ಹೋಗಬೇಕಾದ್ರೆ ಕೊಡೋ...ಈ ಸರಿ ಹೊತ್ತಲ್ಲಿ ಯಾಕೆ?"
ರಾಜನಿಗೆ ಕಳುವಿನ ಬಗ್ಗೆ ಅಮ್ಮನಿಗೆ ಹೇಳಬೇಕೂ ಎಂದು ನಾಲಿಗೆ ತುದಿಗೆ ಬಂದರೂ,
ಅಮ್ಮ ಸುಮ್ಮನೆ ಆತಂಕ ಪಡುತ್ತಾರೆ, ಊರಿನಿಂದ ಬಂದು ಸುಸ್ತಾಗಿದೆ, ಇದರ ಬಗ್ಗೆ ತಿಳಿಸಿದರೆ ರಾತ್ರಿಯೆಲ್ಲ ನಿದ್ದೆ ಮಾಡುವುದಿಲ್ಲವೆಂದು ಸುಮ್ಮನಾದ...
ಸೀನ ಕೊಟ್ಟ ಹಣ ಭದ್ರವಾಗಿದೆಯೆಂದು ಮತ್ತೊಮ್ಮೆ ಕಪಾಟು ನೋಡಿ, ಅಮ್ಮನ ಪಕ್ಕದಲ್ಲಿ ಮಲಗಿದ ರಾಜ...

***

ಅಮ್ಮ ರಾಜನನ್ನು ಎಬ್ಬಿಸಿದರು...
"ರಾಜೂ...ಎದ್ದು ಬೇಗ ರೆಡಿ ಆಗು, ಗುಂಡು ಮಾಮ ಮನೆಗೆ ಹೋಗೋಣ...ಬೇಗನೆ ಬರುತ್ತೀವಿ ಎಂದು ನಾನು ಮುಂಚೆಯೇ ತಿಳಿಸಿದ್ದೀನಿ.."...
ಏಳುತ್ತಿದ್ದಂತೆ ಮುಖ ತೊಳೆದ ರಾಜ ಹಣ ಭದ್ರವಾಗಿದೆಯೋ ನೋಡೋಣ ಎಂದು ಪರೀಕ್ಷಿಸಿದ...
ಇಟ್ಟಿದ್ದ ಜಾಗ ಖಾಲಿ ಇರುವುದನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು...!
ತಕ್ಷಣವೇ ಕೂಗಿದ..."ಅಮ್ಮಾ! ಅಮ್ಮಾ! ನಾನು ನೆನ್ನೆ ಇಟ್ಟ ಹಣ ಕಳುವಾಗಿದೆ ಅಮ್ಮಾ...ಈ ಮನೆಯಲ್ಲಿ ಯಾಕೋ ಕಳವು ತೀರ ಹೆಚ್ಚಿದೆ!
ನೆನ್ನೆ ನೀನು ದಣಿದಿದ್ದರಿಂದ ಹೇಳಲಿಲ್ಲ...ಈಗ ಅಣ್ಣನ ಆಪೊರೇಷನ್’ಗೆ ಬೇಕಾದ ದುಡ್ಡು ಎಲ್ಲಿ ಹೊಂದಿಸಲಿ!?"
ಎಂದು ದುಃಖದಿಂದ ಹಾಸಿಗೆ ಮೇಲೆ ರಾಜ ಕುಸಿದ...
"ಕಳುವೆಲ್ಲಾಯ್ತೋ??? ಅಲ್ಲೇ ಅಟ್ಟದ ಮೇಲೆ ಪೆಟ್ಟಿಗೆನಲ್ಲಿ ನಡುರಾತ್ರಿ ಇಟ್ಟೆಯಲ್ಲ, ಆಗಲೇ ಮರೆತು ಹೋಯ್ತಾ?"
"ಇಲ್ಲಮ್ಮ...ನಾನು ಅಟ್ಟದ ಮೇಲಲ್ಲ ಇಟ್ಟಿದ್ದು, ಕಪಾಟಿನಲ್ಲಿ! ಚೆನ್ನಾಗಿ ಜ್ಞಾಪಕವಿದೆ!"
"ಒಮ್ಮೆ ತೆಗೀ ನೋಡೋಣ ಅಟ್ಟದ ಮೇಲಿನ ಪೆಟ್ಟಿಗೆ..."
ರಾಜ ಅಟ್ಟದ ಮೇಲಿನ ಪೆಟ್ಟಿಗೆ ತೆಗೆದ...
"ಎಲ್ಲಿಂದಾ ಬಂತೋ ಇಷ್ಟೊಂದು ದುಡ್ಡೂ???"
"ನಂಗೇನೂ ಗೊತ್ತಿಲ್ಲಮ್ಮ, ಪೆಟ್ಟಿಗೆ ತೆಗೆದೇ ತಿಂಗಳುಗಳಾಯಿತು"
"ಅಯ್ಯೋ ಶಿವನೇ...ಚಿಕ್ಕವನಾದಾಗ ಬರೀ ನಿದ್ದೇಲಿ ಮಾತಾಡ್ತಿದ್ದಿ...ಈಗ ನಿದ್ದೇಲಿ ಓಡಾಡಕ್ಕೆ ಶುರು ಮಾಡಿದೀಯೇನೋ??!!!
ನಡೀ ಗುಂಡು ಮಾಮ ಮನೆಗೆ ಹೋಗೋ ಹೊತ್ತಾಯ್ತು...ಮದುವೆ ಆದ ಮೇಲೆ ಮಂಚಕ್ಕೆ ಕಟ್ಟಿ ಹಾಕ್ತಾಳೆ ನಿನ್ನ ಹೆಂಡತಿ"
ಎಂದು ನಕ್ಕು, ರಾಜನ ತಲೆ ಮಟುಕಿದ ಅಮ್ಮ ಎದ್ದು ಹೋದರು...
ಪೆಟ್ಟಿಗೆಯಲ್ಲಿದ್ದ ರಾಶಿ ಹಣವನ್ನು ನೋಡುತ್ತಾ ಪೆಚ್ಚಾಗಿ ಕುಳಿತ ರಾಜ!


--ಶ್ರೀ
(೩೦-ಆಗಸ್ಟ್-೨೦೦೮)

Friday, August 29, 2008

ಕುಹೂ ದನಿಯು ಕಿವಿ ತೂತ ಕೊರೆದಿತ್ತು!

ಕೋಗಿಲೆಯ ಕುಹೂ ದನಿಯು
ಕಿವಿ ತೂತ ಕೊರೆದಿತ್ತು!
ಚಿಟ ಪಟನೆ ಮಳೆ ಹನಿಯು
ಕಾದೆಣ್ಣೆಯಂತಿತ್ತು!
ಇವನ್ಯಾವ ಅರಸಿಕನೆಂದು
ಹಳಿಯಬೇಡಿರಿ ಎನ್ನ...

ಮೆತ್ತನೆಯ ಹಾಸಿರಲು
ಬೆಚ್ಚನೆ ನಾ ಹೊದ್ದಿರಲು
ತಿಳಿ ನಿದ್ದೆ ಹತ್ತಿರಲು...
ನಾ ಹೀಗೆ ಬಗೆದದ್ದು
ಸುಳ್ಳೇನೋ ಅಣ್ಣ???

--ಶ್ರೀ
(ಆಟೋದಲ್ಲಿ ಗೀಚಿದ್ದು!!! ೨೮/೦೮/೦೮ )

Thursday, August 7, 2008

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"
ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ...

ಅಮ್ಮನ ಮೂಡ್ ಯಾಕೊ ಸರಿ ಇರಲಿಲ್ಲ...ಎಷ್ಟೊ ಸರತಿ ಪುಟ್ಟಿ ಮಧ್ಯ ರಾತ್ರಿ ಬಂದದ್ದುಂಟು...
ಆದರೂ ಅಮ್ಮನಿಗೆ ಯಾಕೋ ಆತಂಕವಾಗಿತ್ತು ಇಂದು...

ಮನಸ್ಸಲ್ಲೇ ಕೊರಗಿದರು ಅಮ್ಮ
"ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???"

***

"ಛೆ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು...
ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು...ಇಲ್ಲ ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು!
ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"...ಸುತ್ತ ಕಣ್ಣು ಹಾಯಿಸಿದಳು ಪುಟ್ಟಿ...
ಹತ್ತಿರ ಯಾರು ಕಣ್ಣಿಗೆ ಬೀಳಲಿಲ್ಲ...

ನಡು ರಾತ್ರಿ ಆಫೀಸಿಂದ ಹೊರಟಿದ್ದಳು ಪುಟ್ಟಿ...
ಸಮಯ ೨.೩೦ ಆಗಿತ್ತು...ಎಂದೂ ಇಲ್ಲದ್ದು ಇಂದು ಕೆಂಪೇಗೌಡ ರಸ್ತೆಯಲ್ಲೂ ಇಂದು ಯಾರೂ ಕಾಣುತ್ತಿಲ್ಲ..!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಮನಸಲ್ಲೇ ಶಪಿಸಿದಳು ಪುಟ್ಟಿ...
ಪುಟ್ಟಿ ಆ ರೀತಿ ಶಪಿಸಲು ಕಾರಣವಿತ್ತು...
ಹೇಳಿ ಕೇಳಿ ಅದು ಕಾರ್ಪೊರೇಶನ್ ಜಾಗ! ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ...
ಆದ್ರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ!

ಇನ್ನು ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ!
ಇನ್ನೆರಡು ಫ಼ರ್ಲಾಂಗ್ ಆ ಕಡೆ ಮೈಸೂರು ಬ್ಯಾಂಕ್! ಅಲ್ಲಿ ಹತ್ತಿರ ಹೆಚ್ಚು ಜನರಿರುತ್ತಾರೆ...
ಎರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿತ್ತು!

ಪುಟ್ಟಿ ಅಂದಿನ ದಿನದ ಬಗ್ಗೆ ಮೆಲಕು ಹಾಕಿದಳು...

ಪುಟ್ಟಿಗೆ ಅಂದಿನ ದಿನವೇ ಕೆಟ್ಟದಾಗಿತ್ತು...
ಬೆಳಗ್ಗೆಯಿಂದ ಮಾಡಿದ ಕೆಲಸವೆಲ್ಲ ತಪ್ಪಾಗಿತ್ತು...ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ...
ಮಾರನೇಯ ದಿನವೇ ಮಾನೇಜರ್ ಕ್ಲೈಂಟ್'ಗೆ ಡೆಮೋ ತೋರಿಸಬೇಕು ಅಂತ ಪುಟ್ಟಿಯ ತಲೆ ಮೇಲೆ ಕೂತಿದ್ದ!
ಪಾಪ ಪುಟ್ಟಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲೆ ರಾತ್ರಿಯೇ ಕೂತಿದ್ದಳು!
ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ
"ಬನ್ನಿ ಮೇಡಮ್!" ಅಂತ ಎಂದಿಗಿಂತ ಹೆಚ್ಚಿಗೆ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್!
ಆ ಕ್ಯಾಬ್ ಡ್ರೈವರ್ ಕರಿಯನನ್ನು ಕಂಡರೆ ಪುಟ್ಟಿಗೆ ಆಗದು ...
ಅವನ ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ...
"ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ಪುಟ್ಟಿ...
ದಾರಿಯಲ್ಲಿ ಬರುವಾಗ ಕಾರ್ಪೊರ್‍ಏಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ...

"ಮೇಡಮ್! ನನ್ ಕಂಪನೀದೇ ಇನ್ನೊಂದ್ ಕ್ಯಾಬಿದೇ ಈ ಕಡೇನೇ ಹೋಗ್ತಾ ಇದ್ಯಂತೆ...
ಒಂದ್ ಐದು ನಿಮಿಷ ಅಷ್ಟೇ ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ"

ಹಾಗೆ ಆ ಕರಿಯ ಹೇಳಿ ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು...
ಅಮ್ಮನ ಬೈಗುಳ ಮತ್ತೆ ಜ್ಞಾಪಕಕ್ಕೆ ಬಂತು...

ಕರಿಯ ಫೋನ್ ಮಾಡುವಾಗ ಗಮನಿಸಿದ್ದಳು ಪುಟ್ಟಿ...
ಅವನು ಮಾತಾಡುವುದು ಏನೂ ಅರ್ಥ ಆಗಲಿಲ್ಲ...ತುಳುವೋ ಕೊಂಕಣಿಯೋ ಇರಬೇಕು...
ನಗ್ತಾ ನಗ್ತಾ ಮಾತಾಡುತ್ತಿದ್ದ ಆ ಕಡೆಯವನ ಜೊತೆ...

"ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ???"
ಮನಸ್ಸಲ್ಲೇ ರೇಗಿದಳು ಪುಟ್ಟಿ...

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಪ್ರಕರಣ ನಡೆದಿತ್ತು...!
ಎಂದೂ ಭಯಪಡದ ಪುಟ್ಟಿಯ ಮನಸಲ್ಲೂ ಈ ಯೋಚನೆ ಹಾಯದಿರಲಿಲ್ಲ...
ಮತ್ತೊಮ್ಮೆ ನೋಡಿದಳು ಡ್ರೈವರ್ ಕಡೆಗೆ...ಅವನು ನಸು ನಕ್ಕ "ಇನ್ನೇನ್ ಬರತ್ತೆ ಮೇಡಮ್!"...
ಅವನ ಆ ನಗೆ ಪುಟ್ಟಿಗೆ ಹಿಡಿಸದು...
"ಕಾರಿನಲ್ಲಿ ಇನ್ನೋಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ?"
"ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್'ದ! ಈಡಿಯಟ್!"

ಪ್ರತಿಭಾ ಬಗ್ಗೆ ಯೋಚಿಸುತ್ತ ಪುಟ್ಟಿಗೆ ಸ್ವಲ್ಪ ದಿಗಿಲೇ ಆಯಿತು...
ತಮ್ಮ ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ...ಖಾರದ ಪುಡಿ ಪರ್ಸ್'ನಲ್ಲಿ ಇಟ್ಟುಕೋ ಎಂದು...
ಇಟ್ಟುಕೊಂಡಿಲ್ಲ!.."ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು..."
ಕರ್ಮಕ್ಕೆ ಮೊಬೈಲ್ ಬ್ಯಾಟರೀ ಬೇರೆ ಮುಗಿದಿತ್ತು, ತಮ್ಮನನ್ನು ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ!
ಪುಟ್ಟಿ ಸಮಯಕ್ಕೆ ಚಾರ್ಜ್ ಮಾಡುವುದಿಲ್ಲವೆಂದು ಯಾವಾಗಲೂ ಬಯ್ಸಿಕೊಳ್ಳುವವಳೇ!
ಇಂದು ಈ ರೀತಿ ಕೈ ಕೊಟ್ಟಿತ್ತು...!
ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಕಾಣಲಿಲ್ಲ...!

ಮತ್ತೊಮ್ಮೆ ಸುತ್ತ ನೋಡಿದಳು ಪುಟ್ಟಿ...ಸುಮಾರು ದೂರದಲ್ಲಿ ಯಾರೋ ಮುಸುಕು ಹೊದ್ದಂತೆ ಕಂಡಿತು...
ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವನನ್ನ ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ಪುಟ್ಟಿಯ ಮನಸಲ್ಲಿ ಹರಿಯಿತು...
ಅಷ್ಟರಲ್ಲೆ ಪಕ್ಕದ ಮೈದಾನದ ಕಾಂಪೌಂಡ್ ಮೇಲಿಂದ ಒಂದು ನಾಯಿ ಎಗರಿತು...
ಇದನ್ನು ನಿರೀಕ್ಷಿಸದ ಪುಟ್ಟಿ ಥರಗುಟ್ಟಿದಳು!

ಕೊನೆಗೂ ಇನ್ನೊಂದು ಕ್ಯಾಬ್ ಬಂತು...ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರೆ!
ಇಬ್ಬರೂ ನಗುತ್ತಿದ್ದಾರೆ...! ಸಿಲಿಂಡರ್ ಅಳವಡಿಸಿದ್ದಾಯಿತು...
"ಬನ್ನಿ ಮೇಡಮ್ ಆಗ್ಲೆ ತುಂಬಾ ಲೇಟ್ ಆಗಿದೆ" ಅಂತ ಕರೆದ...
ನಮ್ಮ ಕ್ಯಾಬ್ ಹೊರಟಿತು...ಇನ್ನು ಹೊರಟು ಸ್ವಲ್ಪ ದೂರವೂ ಹೊಗಿರಲಿಲ್ಲ!
ಮತ್ತೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಕರಿಯ!
"ಮತ್ತೆ ಏನಾಯ್ತು???" "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ - ಯಾಕೊ ಟೈಮ್ ಸರಿ ಇಲ್ಲ"
ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ!
ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡು ನಿಮಿಷದಲ್ಲೇ ಬಂದ...
"ಮೇಡಮ್! ಒಂದು ಕೆಲಸ ಮಾಡೋಣ...ನಾವು ನನ್ ಫ್ರೆಂಡ್ ಕಾರಲ್ಲೇ ನಿಮ್ಮನ್ನ ಡ್ರಾಪ್ ಮಾಡಿ ಮತ್ತೆ ಬಂದು ರಿಪೇರಿ ಮಾಡ್ತೀವಿ"
ಇದನ್ನು ಕೇಳುತ್ತಿದ್ದಂತೆ ಪುಟ್ಟಿಯ ಮೈ ತುಸು ಕಂಪಿಸಿತು!

ಏನು ಮಾಡುವುದು ಎಂದು ತಿಳಿಯಲಿಲ್ಲ...ಬೇರೆ ದಾರಿ ತೋಚಲಿಲ್ಲ...
ಒಂದು ಕಡೆ ಭಯ...ಇನ್ನೊಂದು ಕಡೆ ಮೊಂಡು ಧೈರ್ಯ ಏನು ಆಗುವುದಿಲ್ಲ ಎಂದು...
"ಆಗಲಿ ಏನಾಗುವುದೋ ನೋಡೇ ಬಿಡೋಣ! ಕೃಷ್ಣ ಎಂದೂ ಕೈ ಬಿಡುವಿದಿಲ್ಲ ನನ್ನನ್ನು ಕಾಯುತ್ತಾನೆ" ಎಂದು ಹೊರಟಳು...

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ಪುಟ್ಟಿ...ಏನಾಗುವುದೋ ಎಂಬ ಹಿಂಜರಿಕೆಯಲ್ಲೆ ಹಿಂದೆ ಕುಳಿತಳು ಪುಟ್ಟಿ!
ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ...
ಹಿಂದೆ ಕುಳಿತು ಕಾರು ಹೊರಟ ಮೇಲೆ ಪುಟ್ಟಿಯ ಗಮನಕ್ಕೆ ಬಂದದ್ದು...
ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ! ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ...

"ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ...ಸಿಲಿಂಡರ್ ಇದ್ದಂತಿತ್ತು...ಆಮೇಲೆ ಅವನು ಬಂದಮೇಲೆ ಕ್ಲಚ್ ನಾಟಕ!" ಎದೆ ಢವಗುಟ್ಟಿತು!

"ಮೆಲ್ಲನೆ ಕಾರಿನಿಂದ ಜಿಗಿಯಲೇ?" ನಡು ರಾತ್ರಿಯಲ್ಲಿ ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ಪುಟ್ಟಿ...
ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೋಣ ಎಂದೆನಿಸಿ ಪ್ರಯತ್ನಿಸಿದಾಗ ತಿಳಿಯಿತು ಇದಕ್ಕೆ ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು!
ತನ್ನ ಸ್ಥಿತಿ-ಅಸಹಾಯಕತೆ ತಿಳಿದ ಪುಟ್ಟಿಯ ಕಣ್ಣುಗಳು ನೀರೂರಿದವು...

ಕಾರ್ ರೊಯ್ಯನೆ ಹೋಗುತ್ತಿತ್ತು...ಅವರಿಬ್ಬರು ಅವರ ಪಾಟಿಗೆ ಮಾತನಾಡುತ್ತಿದ್ದರು...
ಜೋರಾಗಿ ನಗುತ್ತಿದ್ದರು...
ಪುಟ್ಟಿ ಊರಗಲ ಕಣ್ಣ ಬಿಟ್ಟು ಗಮನಿಸುತ್ತಿದ್ದಳು ಎಲ್ಲಿ ಬೇರೆ ಕಡೆಗೆ ಕರೆದೊಯ್ಯುವರೋ!
ಮನಸಿನಲ್ಲಿ ನೂರಾರು ಯೋಚನೆಗಳು...
"ಇವರಿಬ್ಬರೂ ಎನಾದರೂ ಮಾಡಿದರೆ ಏನು ಮಾಡುವುದು?ಕಿರುಚಬೇಕೆ? ನನ್ನ ಬಳಿ ಚಾಕು ಅಥವಾ ಯಾವುದೇ ಆಯುಧ ಇಲ್ಲ? ಎನು ಮಾಡುವುದು?
ಪರ್ಸ್ ಬಿಟ್ಟರೆ ಏನು ಇಲ್ಲ...ಇವರಿಬ್ಬರೂ ಧಾಂಡಿಗರಂತಿದ್ದಾರೆ!"

ಅಷ್ಟರಲ್ಲೆ ಕಾರು ಗಕ್ಕನೆ ನಿಂತಿತು...
ಯೋಚನೆಗಳಲ್ಲಿ ಮುಳುಗಿದ್ದ ಪುಟ್ಟಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ
"ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು"
ಪುಟ್ಟಿ ಕಿಟಕಿ ಆಚೆ ನೋಡಿದಳು...ಅರೆ! ಮನೆ ಬಂದಿದೆ!
ಅಷ್ಟರಲ್ಲೆ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಹೊರಬಂದರು!
ಡ್ರೈವರ್ ಹೇಳುತ್ತಿದ್ದ..."ಇಷ್ಟು ಕಷ್ಟ ಆದ್ರು ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್!
ನೋಡಿ...ಇವನು ನನ್ ಚಡ್ಡಿ ದೋಸ್ತ್! ಇದೇ ಊರಲ್ಲಿದ್ರೂ ಇಬ್ರೂ ಡ್ರೈವಿಂಗ್ ಕೆಲಸದಲ್ಲಿದ್ರೂ ೫ ವರ್ಷದಿಂದ ಸಿಕ್ಕಿರಲಿಲ್ಲ!
ನಿಮ್ಮಿಂದ ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗೂಡ್ ನೈಟ್!"

ಇಳಿದ ಪುಟ್ಟಿ ಮನೆ ಒಳಗೆ ಓಡಿದಳು...
"ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು, ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತ ಇರಲಿಲ್ವ? ಅಮ್ಮ ಪಾಪ ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ತಮ್ಮ ಹೇಳಿದಾಗಲೆ ಪುಟ್ಟಿಗೆ ಹೊಳೆದಿದ್ದು ಹಾಗೆ ಕರೆ ಮಾಡಬಹುದಿತ್ತೆಂದು...!!
"ಅಮ್ಮ ಎಷ್ಟೆ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಲು ಪುಟ್ಟಿ...

--ಶ್ರೀನಿವಾಸ ಪ. ಶೇ.
(ಬರೆದದ್ದು ೬-೭ ಆಗಸ್ಟ್ ೨೦೦೮ ನಡು ರಾತ್ರಿ...)

Wednesday, August 6, 2008

ಮಳ್ಳಿ ಮಳ್ಳಿ ಮಿಂಚುಳ್ಳಿ ....!

ಅದು ಶನಿವಾರ ಸಂಜೆ...


"ಏನು ಕರ್ಮಾನೋ!!! ಸಾಫ್ಟ್ ವೇರ್ ಇಂಜಿನೀರ್ ಬಾಳೇ ಗೋಳು" ಅಂತ ಎಂದಿನಂತೆ ಬಯ್ದುಕೊಂಡು ಆಫೀಸ್ ನಲ್ಲಿ ಕೋಡ್ ಕುಟ್'ತಾ ಕೂತಿದ್ದೆ... 'ಲೇಯ್, ಕಿತ್ತು ಹಾಕಿದ್ದು ಸಾಕು...ಪ್ರಾಜೆಕ್ಟ್ ಮಾಡಿಲ್ಲ ಅಂದ್ರೆ ಪ್ರಾಣ ಏನು ಹೋಗಲ್ಲ, ಇಲ್ಲಿ ಬಾರೋ...' ಅಂತ ನನ್ ಕೊಲೀಗ್ ಕರೆದ...ಏನಪ್ಪಾ ಅಂಥ ನೋಡಿದ್ರೆ, ಆಫೀಸ್ ಕಿಟಕಿ ಪಕ್ಕ ನಿಂತುಕೊಂಡು ಕರೀತಾ ಇದ್ದ ..ಇವನಿಗೋ ಸ್ವಲ್ಪ ಬರ್ಡ್ ವಾಚಿಂಗ್ ಹುಚ್ಚು ...

ಓಹ್! ಬರ್ಡ್ ವಾಚಿಂಗ್ ಅಂದ್ರೆ ಹುಡುಗೀರ್ ನ ನೋಡೋದು ಅಂದ್ಕೊಂಡ್ರಾ??

ಅದು ಹಾಗಲ್ಲ...ಅದು ನಿಜವಾಗಲೂ ಬರ್ಡ್ ವಾಚಿಂಗೇ!! ಅಂದ್ರೆ ಹಕ್ಕಿಗಳನ್ನ ನೋಡೋ ಹುಚ್ಚು ಸ್ವಲ್ಪ...

ಇವನ ಜೊತೆ ಸೇರಿ ನಂಗೂ ಸ್ವಲ್ಪ ಗೀಳು ಹತ್ತಿದೆ...

ಅಂದ್ ಹಾಗೆ ನಂ ಆಫೀಸ್ ಪಕ್ಕದಲ್ಲೇ ಕೆರೆ ಇದೆ...ಬೇಕಾದಷ್ಟು ತರದ ಹಕ್ಕಿಗಳು ಬರತ್ತೆ ಇಲ್ಲಿಗೆ...

ಇವನು ತೋರಿಸಿದ್ಮೇಲೆ ನಂಗೆ ಗೊತ್ತಾಗಿದ್ದು ನಂ ಸುತ್ತ ಎಷ್ಟೊಂದ್ ತರಹದ ಹಕ್ಕಿಗಳು ಹಾರಾಡ್ತವೆ ಅಂಥ..!

ನಂ ಬೆಂಗಳೂರಿನಲ್ಲಿ ಏನಿದ್ರು ಬರೀ ಕಾಗೆ, ಗುಬ್ಬಿ, ಹದ್ದು, ಪಾರಿವಾಳ...ಅಪರೂಪಕ್ಕೆ ಗರುಡ, ಮೈನಾ ಇಸ್ಟೇ ಕಾಣೋದು ಅಂತ ತಿಳ್ಕೊಂಡಿದ್ದೆ! ಅದರಲ್ಲೂ ಗರುಡ ಹಕ್ಕೀನ ಅಮ್ಮ ನನಗೆ ಚಿಕ್ಕಂದಿನಲ್ಲಿ ತೋರಿಸಿ ಕೊಟ್ಟಿದ್ದರಿಂದ ಸುಲುಭವಾಗಿ ಕಂಡು ಹಿಡಿಯುತ್ತೇನೆ...ಹೆಚ್ಚು ಜನಗಳಿಗೆ ಅದು ನಂ ಸುತ್ತಾನೆ ಹಲವು ಬಾರಿ ಕಾಣತ್ತೆ ಅನ್ನೋದರ ಬಗ್ಗೆ ಅರಿವು ಇರಲ್ಲ...ನಾವುಗಳು ಹಾಗೆ ಆಲ್ವಾ? ನಮಗೆ ಇಷ್ಟ ಇದ್ರೆ ಮಾತ್ರನೇ ಯಾವುದೇ ವಿಷಯದ ಬಗ್ಗೆ ಗಮನ...ಇಲ್ಲ ಅಂದ್ರೆ ನಂ ಕಣ್ ಎದುರಗಡೆನೇ ಇದ್ದರೂ ನಮಗೆ ಬೇಕಾಗಿಲ್ಲ ಅದು...! ವಸ್ತುಗಳು ಇದ್ದೂ ಇಲ್ಲದ ಹಾಗೆ ಇರತ್ವೆ ! ಜೋತೆಗಿರೋ ಮನುಷ್ಯರೂ ಅಷ್ಟೆ....!

ಈಗೀಗ ನನಗೆ ಹಕ್ಕಿ ನೋಡೋ ಹುಚ್ಚು ಹಿಡಿದಿದ್ರಿಂದ, ಕಿಟಕಿ ಬಳಿ ಹೋದೆ...

ಗೆಳೆಯ ನನಗೆ ತೋರಿಸಿದ ..."ಅಲ್ಲಿ ನೋಡು...'White breasted KingFisher' ಕೂತಿದೆ"...


ಹಲವಾರು ಬಾರಿ ನೋಡಿದೀನಿ ಈ King Fisher'ನ ...ನಾನಂದೆ ..."ಏನಕ್ಕಾದ್ರು King Fisher ಅಂತಾರೋ ಇದನ್ನ!!! ಯಾವಾಗ್ಲೂ ತಂತಿ ಮೇಲೆ ಸೋಮಾರಿ ತರ ಕೂತಿರತ್ತೆ...! ಒಂದ್ ಸರ್ತಿನೂ ಮೀನು ಹಿಡಿದಿದ್ದು ನೋಡೇ ಇಲ್ಲ !"...ಹೌದು... ನಾನು ಮೀನು ಹಿಡಿಯೋದನ್ನ ನೋಡೋಕ್ಕೆ ಎಷ್ಟೋ ನಿಮಿಷಗಳು ಕಾದದ್ದುಂಟು...ಆದ್ರೆ ಎಂದೂ ಮೀನು ಹಿಡಿದ್ದಿದ್ದನ್ನ ನೋಡಿಲ್ಲ...ಇಂದು ಕೂಡ ಎಂದಿನಂತೆ ಸುಮ್ಮನೆ ತಂತಿ ಮೇಲೆ ಕೂತಿತ್ತು...ನಾನಂದೆ "ಇದನ್ನ ಮಿಂಚುಳ್ಳಿ ಅಂತಾರೆ ಕನ್ನಡದಲ್ಲಿ" ...

ಅವನಿಗೆ ಕನ್ನಡ ಹೆಚ್ಚು ಬರಲ್ಲ..." 'ಮಿಂಚುಳ್ಳಿ ' ನಾ??? ಇದೇನು noun'ಆ??? (ನಾಮಪದಾನ) ಆಥವಾ ಸಂಧಿ ಸಮಾಸ ಇದ್ಯಾ?"...ನಂಗೆ ಉತ್ತರ ಗೊತ್ತಿಲ್ಲ! ನನಗೆ ತಿಳಿದ ಮಟ್ಟಿಗೆ ಇದು ನಾಮ ಪದ ಅಷ್ಟೆ! ತಲೆಗೆ ಹೊಳೆದಿದ್ದು ಬರೀ 'ಈರುಳ್ಳಿ , ಬೆಳ್ಳುಳ್ಳಿ ' ಮಾತ್ರ! ಊಹೂಂ! ಅದಕ್ಕೂ ಮಿಂಚುಳ್ಳಿಗೂ ಯಾವ ಸಂಬಂಧನೂ ಸಿಗಲಿಲ್ಲ..."Nounಏ ಇರಬೇಕು"...

ಅಷ್ಟರಲ್ಲೇ ಮಿಂಚುಳ್ಳಿ ಹಾರಿತು...ಇಬ್ರೂ ನೋಡ್ತಾ ಇದ್ವಿ ಕಿಟಕಿಯಿಂದ....

ಮಿಂಚುಳ್ಳಿ ಕೆಳಕ್ಕೆ ಹಾರಿ ಸರಿ ಸುಮಾರು ನೀರಿನ ಮಟ್ಟದಲ್ಲೇ ಹಾರುತ್ತಾ ಮುಂದೆ ಹೋಯಿತು......

ಮನಸ್ಸು ಈ ಕಡೆ ವೇಗವಾಗಿ ಓಡ್ತಾ ಇತ್ತು ...ಇವತ್ತಾದ್ರೂ ಮೀನು ಹಿಡಿಯೋದು ನೋಡ್ತೀನಾ ಅಂಥ...ಅಷ್ಟರಲ್ಲೇ ನೀರಿನ ಒಳಗೆ ಒಂದು ನೀರು ಕಾಗೆ ಕಾಣಿಸ್ತು !!! (Little Cormorant ಅಂತಾರೆ ಇಂಗ್ಲಿಷ್ ನಲ್ಲಿ )

ಅರೆ! ನಂ ಮಿಂಚುಳ್ಳಿ ಯಾಕೆ ನೀರು ಕಾಗೆ ಹತ್ತಿರ ಹೋಗ್ತಾ ಇದೆ??? ಮಿಂಚುಳ್ಳಿ ನೀರು ಕಾಗೆ ತೀರಾ ಹತ್ತಿರ ಹೋಗಿ ಅದರ ಬಾಯಲ್ಲಿ ಇರೋ ಮೀನನ್ನ ಲಪಕ್ ಅಂಥ ಕಿತ್ಕೊಂಡು ಹಾಗೆ ಇನ್ನೊಂದು ದಡಕ್ಕೆ ಹಾರಿ ಹೋಯ್ತು! ನಾವಿಬ್ಬರೂ ಹಾಗೆ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡ್ತಾ ಇದ್ವಿ....!

ಇಬ್ಬರೂ ಒಟ್ಟಿಗೆ ಕಿರುಚಿದ್ವೀ "ನೋಡಿದ್ಯಾ???!!!!"...ಅರೆ! ಮಿಂಚುಳ್ಳಿನಾ ನಾನು ಸೋಮಾರಿ ಅಂಥಾ ಬಯ್ಯುತ್ತ ಇದ್ದೆ, ಇಲ್ಲಿ ನೋಡಿದ್ರೆ ಇದರ ನಿಜ ಬಣ್ಣ ಬಯಲಾಗಿತ್ತು...


ಏನು ಕಿಲಾಡಿನಪ್ಪ ಈ ಹಕ್ಕಿ! ಪಾಪ ನೀರು ಕಾಗೆ! ಅದು ಪೆಚ್ಚಾಗಿ ಮತ್ತೆ ಮತ್ತೊಂದು ಮೀನು ಹಿಡಿಯಲು ಮತ್ತೊಮ್ಮೆ ಮುಳುಗು ಹಾಕಿತು...

ಮನದಲ್ಲಿ ತಕ್ಷಣವೇ ಹಾಡು ನಲಿಯಿತು....' ಮಳ್ಳಿ ಮಳ್ಳಿ ಮಿಂಚುಳ್ಳಿ ....! ಜಾಣ ಜಾಣ ಕಾಜಾಣ...!'

ಈ ಹಾಡನ್ನು ಬರೆದವರು ಯಾರೋ ಗೊತ್ತಿಲ್ಲ ನಂಗೆ ಯಾವ ಫಿಲಂ ಅಂತಾನು ಗೊತ್ತಿಲ್ಲ ...ಆದ್ರೆ ನಿಜವಾದ ಮಳ್ಳಿನೇ ಅದು!

'ಕೈಗೆ ಬಂದ ತುತ್ತು ಬಾಯಿಗಿಲ್ಲ' ಅಂತ ಗಾದೆ ಇದೆ...ಬಾಯಿಗೆ ಬಂದ್ರು ಹೊಟ್ಟೆಗಿಲ್ದೆ ಇರಬಹುದು ಅಂತ ಕಲಿಸಿತ್ತು ಈ ಅನುಭವ!


--ಶ್ರೀ

Monday, August 4, 2008

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನ್ನ ಮರದಡಿ ಬೇರೆಯವರಿದ್ದಲ್ಲಿ ಏನೋ ಕಸಿವಿಸಿ!
ಹಲವು ಬಾರಿ ಅವರನ್ನು 'ತಳ್ಳಿದ್ದೂ' ಉಂಟು...
ಒಂದು ದಿನವೂ ನೀರುಣಿಸಿದ್ದಿಲ್ಲ ಅದಕೆ...
ಆದರೂ ಅದೇನೋ ನಂಟು....ಏಕೆಂದರೆ
ಅದು ನನ್ನ ಮರ...ನನ್ನ ಹೊಂಗೇ ಮರ...!

ಬಿಸಿಲಲ್ಲಿ ಬವಳಿದ್ದನ್ನು ಕಂಡಿದ್ದೇನೆ...
ಮಳೆಯಲ್ಲಿ ಮಿಂದಿದ್ದನ್ನೂ ನೋಡಿದ್ದೇನೆ...
ಮಿಂದ ಮರದ ಹಚ್ಚ ಹಸಿರೇ ಮೆಚ್ಚೆನಗೆ
ಗಾಳಿಗೆ ತೂಗುವುದ ನೋಡುವ ಹುಚ್ಚೆನಗೆ!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನಗಾಗಿ ಅದು ಹೂವ ಹಾಸಿದ್ದುಂಟು...
ಹೊಂಗೆ ಹಾಸ ಮೇಲೆ ನಿಲ್ಲಲೆನಗೆ ಏನೋ ಅಳುಕು...
ಅಳುಕಿನ ಉಳುಕಿನೊಂದಿಗೆ ಅಲ್ಲಿ ನಿಂತು ನಲಿದದ್ದುಂಟು...
ಅದು ನನ್ನ ಮರ...ನನ್ನ ಹೊಂಗೇ ಮರ...!

ಹಲವು ಹಕ್ಕಿಗಳಿಗೆ ನೆಲೆ ನೀಡಿದ್ದನ್ನು ನೋಡಿರುವೆ
ನನ್ನ ಕಣ್ಣೆದುರೇ ರೆಕ್ಕೆ ಜೀವಿಗಳು ಗೂಡ ಕಟ್ಟಿವೆ!
ಕಾವು ಕೊಟ್ಟು ಮರಿ ಮಾಡುವುದ ನೋಡಿರುವೆ!
ಸಾವಿರಾರು ಇರುವೆಗಳ ಮನೆ ಕೂಡ ಇದುವೆ!
ಅದು ನನ್ನ ಮರ...ನನ್ನ ಹೊಂಗೇ ಮರ...!
ಅದು ನನ್ನ ಮರ...ನನ್ನ ಹೊಂಗೇ ಮರ...!

:
:
[ಗಂಭೀರ, ವಿಷಾದದ ಛಾಯೆಯಲ್ಲಿ]

ನನ್ನ ಮರ ಇಲ್ಲದಾಗುವ ಕಾಲ ಬರುತಿದೆ...
ಇನ್ನೆಷ್ಟು ದಿನವಿರುದೋ ಕಾಣೆ...
ಇರಬಹುದು ಹಲವು ದಿನ/ವಾರ...ಹೆಚ್ಚೆಂದರೆ ಮಾಸ!
ಅದಕ್ಕೆ ತಿಳಿಯದು ಕಾಲ ಬರಲಿಹನೆಂದು...
ಇದು ತಿಳಿದ ಎನಗೆ ವಿಚಿತ್ರ ಹಿಂಸೆ!
ದಿನವೂ ನೋಡುತ್ತೇನೆ....
ಎಂದಿನಂತೆ ಹಾಗೇ ತೂಗುತ್ತದೆ, ನಗುತ್ತದೆ!
ಅದು ನನ್ನ ಮರ...ನನ್ನ ಹೊಂಗೇ ಮರ...

ಇನ್ನೇನು ಬರಲಿರುವ ಮರಕಟುಕ...
ಹೌದು! ಮರ ಕಟುಕನೇ!
ಇನ್ನೇನು ಮರಕಟುಕ ಬರಲಿರುವ...
ನನ್ನ ಮರವ ನನ್ನಿಂದ ಕಸಿಯಲು...
ಇಲ್ಲದಾಗಿಸಲು...

ನನ್ನ ಮರವಾದರೂ ನನಗೆ ಯಾವ ಹಕ್ಕೂ ಇಲ್ಲ
ನನ್ನದಲ್ಲದ ನನ್ನ ಮರದ ಮೇಲೆ...
ನೆರಳಲ್ಲಿ ನಿಲ್ಲುವ ನಲಿವೂ ಅಳಿದಿದೆ ಈಗ....
ಕಾಲನಿಗೆ ಕಾಯುವ ಕಾಟ!
ಬರೀ ಎದೆಯೊಳಗಿನ ಅಳು!
ಅದು ನನ್ನದೇ...ಅದು ನನ್ನದೇ...
ಅದು ನನ್ನದೇ ಮರ...ನನ್ನ ಮೆಚ್ಚಿನ ಹೊಂಗೇ ಮರ...

--ಶ್ರೀ

(೩೧ ಜುಲೈ ೨೦೦೮)
-----------------------------

ನಾನು ನನ್ನ ಮರದ ಬಗ್ಗೆ ಬರೆದಿದ್ದೆ ತಪ್ಪಾಯಿತೇನೋ :(
ಬರೆದಾದ ಮೇಲೆ, ಒಂದು ವಾರ ಕೂಡ ಉಳಿಸಲಿಲ್ಲ ಪಾಪಿಗಳು...
ಗೆಳೆಯರ ದಿನದಂದೇ ನನ್ನ ಮತ್ತು ನನ್ನ ಮರದ ಸ್ನೇಹಕ್ಕೆ ಅಂತ್ಯ !!!
ಕೊಡಲಿಯಿಂದ ಮರಣ ಮೃದಂಗ ಬಾರಿಸುವಾಟ :( :(

ಗೂಡು...

ನಕಲಿ ಹಕ್ಕಿಗಳ
ಗೂಡು ಬದಲಾಗಲು
ಅಸಲಿ ಹಕ್ಕಿಗಳಿಗೆ
ಗೂಡೇ ಇಲ್ಲದಾಯಿತು...!

(೨೪ ಜುಲೈ ೨೦೦೮)

ನವಿಲಂತೆ...

ನಾ ನವಿಲಂತೆ
ಗರಿಗೆದರಿ ನಿಂತಿರಲು ...
ಎಗರಿ ಬಾರೆ
ಛಂಗನೆ, ಓ ಅಂಗನೆ...!

--ಶ್ರೀ
(೧೭ ಜುಲೈ ೨೦೦೮)