Sunday, August 31, 2008

ಕಳವು

"ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ...
ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ...
ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ!

ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ ದುಡ್ಡು ಕಾಣೆಯಾಗಿತ್ತು...
ಮೊದ ಮೊದಲು ರಾಜ ಇದರ ಬಗ್ಗೆ ಹೆಚ್ಚು ಗಮನಿಸಿರಲಿಲ್ಲ...
ಒಮ್ಮೆ ಕಳೆದಿದ್ದೆ ಎಂದುಕೊಂಡ ದುಡ್ಡು, ಕಳೆದಿದ್ದಲ್ಲ, ಗೆಳೆಯ ನಾಣಿಗೆ ಕೊಟ್ಟಿದ್ದು ಎಂದು ತಿಳಿದಾಗ ಸುಮ್ಮನಾಗಿದ್ದ...
ಮತ್ತೊಮ್ಮೆ ಕಳೆದೆ ಎಂದುಕೊಂಡ ದುಡ್ಡು ತಾನಗಾಗಿಯೇ ಖರ್ಚು ಮಾಡಿದ್ದು ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದ...
ಆದರೂ ಕಳವು ನಡೆಯುತ್ತಿದೆ ಎಂಬ ಗುಮಾನಿ ...
ಸಮಯ ಕಳೆದಂತೆ, ರಾಜ ತನ್ನ ವೆಚ್ಚವನ್ನೆಲ್ಲ ಗಮನಿಸತೊಡಗಿದ್ದ...
ಇತ್ತೀಚಿಗಷ್ಟೆ ತಿಳಿದಿದೆ, ತನ್ನ ಸಂಶಯ ಸರಿ ಎಂದು...!
ಹಲವು ಬಾರಿ ಮುಂಚೆಯೂ ಕಳುವಾಗಿದೆ ಎಂದು! ಇತ್ತೀಚಿಗೆ ಕಳವು ಹೆಚ್ಚಾಗಿದೆ...!

ರಾಜ ಅವಲೋಕಿಸ ತೊಡಗಿದ...’ಯಾರು ಕಳ್ಳತನ ಮಾಡುತ್ತಿರಬಹುದು???’...
ರಾಜನ ಮನೆಗೆ ಬರುವವರೇ ಕೆಲವೇ ಕೆಲವರು...
ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಜನ ಮನೆಗೆ ಬರುತ್ತಿದ್ದ ಗೆಳೆಯರಿಬ್ಬರೇ - ಸೀನ, ನಾಣಿ...
ಇಬ್ಬರೂ ನೆಚ್ಚಿನವರ್‍ಏ! ತಾನು ಕಷ್ಟದಲ್ಲಿದ್ದಾಗ ಸಹಾಯಕ್ಕೆ ನಿಂತವರು...
ಇದು ಬಿಟ್ಟರೆ, ಮನೆ ಮಾಲೀಕರ ಮನೆ ಕೆಲಸದ ಹುಡುಗಿ...
ಅವಳು ಬರುವುದೂ ವಾರಕ್ಕೆ ಒಮ್ಮೆ!
ರಾಜ ಟೈಫಾಯಿಡ್ ಜ್ವರದಿಂದ ನರಳಿದಾಗ ಅವಳೇ ಅಡುಗೆ ಮಾಡಿದ್ದು...
ಬಹಳ ಮೃದು ಸ್ವಭಾವ ಮತ್ತು ಒಳ್ಳೆಯ ನಡತೆ...
ಇವರುಗಳು ಯಾರನ್ನೂ ಶಂಕಿಸಲೂ ಮನಸ್ಸು ಒಪ್ಪಲಿಲ್ಲ...

ಎರಡು ದಿನಗಳ ಬಳಿಕ ಪರ್ಸ್’ನಿಂದ ಮತ್ತೆ ಕಳುವಾಯಿತು!
ರಾಜನಿಗೆ ತಲೆ ಚಿಟ್ಟು ಹಿಡಿದಂತಾಯಿತು...
ಒಲ್ಲದ ಮನದಲ್ಲಿ, ಇವರೆಲ್ಲರ ಮೇಲೆ ಕಣ್ಣಿಡಲಾರಂಭಿಸಿದ...
ಇವರೆಲ್ಲ ಬಂದಾಗ ಅವರ ಪ್ರತಿ ಚಲನ-ವಲನಗಳನ್ನು ಗಮನಿಸಿದ...
ಆದರೆ, ಆ ರೀತಿ ಗಮನಿಸುತ್ತಿದ್ದಾಗಲೆಲ್ಲ ಕಳುವಾಗಲೇ ಇಲ್ಲ...

ಸೀನ-ನಾಣಿ ಈ ಕಳವು ಮಾಡಿಲ್ಲವೆಂದು ಧೃಡ ಪಟ್ಟಾಗ,
ತನ್ನ ಕಳುವಿನ ಕಥೆಯನ್ನು ಅವರ ಬಳಿ ಹೇಳಿದ...
"ರಾಜ, ನಮ್ ಮನೆ ಹತ್ರ ಒಬ್ಬ ಕವಡೆ ಹಾಕಿ ಶಾಸ್ತ್ರ ಹೇಳ್ತಾನೆ...
ಅವನನ್ನ ಕೇಳೋಣ ಬಾ, ಅವನು ನನ್ನ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸರಿಯಾಗಿ ಹೇಳಿದಾನೆ..."
ಸೀನನಿಗೆ ಸ್ವಲ್ಪ ದೈವ/ದೆವ್ವಗಳ ಬಗ್ಗೆ ಕೊಂಚ ನಂಬಿಕೆ ಹೆಚ್ಚು...
ಇದನ್ನೆಲ್ಲ ನಂಬದ ನಾಣಿ ಹೇಳಿದ..."ಲೋ ರಾಜ, ಕಳ್ಳತನ ಆದ್ರೆ, ಪೋಲೀಸ್ ಹತ್ರ ಹೋಗ್ತಾರೋ?
ಬುರುಡೆ ದಾಸಯ್ಯನ ಹತ್ತಿರ ಹೋಗ್ತಾರೋ? ಬಾ ನಾವು ಪೋಲೀಸ್ ಕಂಪ್ಲೈಂಟ್ ಕೊಡೋಣ..."

ರಾಜನಿಗೆ ಎರಡಕ್ಕೂ ಮನಸಿಲ್ಲ...
ಪೋಲೀಸ್ ಬಳಿ ಹೋದರೆ ಕಳ್ಳನ್ನ ಹಿಡಿಯೋದು ಬಿಟ್ಟು ಸುಮ್ಮನೆ ಸ್ಟೇಷನ್ ಗೆ ಅಲೆದಾಡಿಸ್ತಾರೆ,
ಲಂಚದ ಗೋಳು ಬೇರೆ...
ಸೀನ ಹೇಳಿದ ಕವಡೆ ಶಾಸ್ತ್ರದ ಬಗ್ಗೆನೂ ನಂಬಿಕೆ ಇಲ್ಲ...
ಆದರೆ ರಾಜ ಸಾಮಾನ್ಯವಾಗಿ ಸೀನನ ಮಾತು ತಳ್ಳಿ ಹಾಕಲಾರ...
ಹಾಗಾಗಿ, ಸೀನನೊಡನೆ ಶಾಸ್ತ್ರ ಕೇಳೋಕ್ಕೆ ಹೋದ...
ಶಾಸ್ತ್ರಿಗಳು ಎರಡು ಮೂರು ಬಾರಿ ಕವಡೆ ಹಾಕಿ, ಒಂದೆರಡು ಪ್ರಶ್ನೆ ಹಾಕಿ...
"ಕಳುವೇ ಆಗಿಲ್ಲ ಹೋಗಿ, ನಿಮ್ ಹಣ ಭದ್ರವಾಗಿದೆ" ಅಂದ್ಬಿಟ್ಟ್ರು!

ರಾಜನಿಗೋ ಮೊದಲೇ ಇದರ ಬಗ್ಗೆ ಹೆಚ್ಚು ನಂಬಿಕೆ ಇರಲಿಲ್ಲ...
"ಥೂ ನಿನ್ನ! ನಾನು ಅಲ್ಲಿ ದುಡ್ಡು ಕಳ್ಕೊಂಡಿದ್ರೆ, ನಿಮ್ ಶಾಸ್ತ್ರಿ ಎಂಥಾ ಬುರುಡೇ ಬಿಡ್ತಾನೋ?!!!
ಇಂಥಾವರೆಲ್ಲ ನಮ್ ಥರದವರಿಂದ ಜೀವನ ಮಾಡ್ತಾರೆ ಅಷ್ಟೆ!"
"ಹೋಗಲೀ, ನಾನು ಊರಿಗೆ ಇಪ್ಪತೈದು ಸಾವಿರ ಕಳಿಸ್ಬೇಕು, ಉಳಿಸಿದ ದುಡ್ಡೆಲ್ಲ ಕಳುವಾಗಿದೆ, ಈವತ್ತು ಅಮ್ಮ ಬರುತ್ತಾರೆ ಊರಿಂದ.
ಅವರಿಗೆ ಇದೆಲ್ಲ ಗೊತ್ತಾಗೋದು ಬೇಡ, ನೀನು ಸಂಜೆ ದುಡ್ಡು ಅಡ್ಜಸ್ಟ್ ಮಾಡಿಕೊಂಡು ಬಂದು ಕೊಡು,
ನಾನು ಅಮ್ಮ ಬಂದ ತಕ್ಷಣ ಅವರಿಗೆ ಕೊಟ್ಟು ಬಿಡ್ತೀನಿ, ಕಳ್ಳನ್ನ ಆಮೇಲೆ ಹಿಡಿಯೋಣ...
ನಿನ್ನ ದುಡ್ಡು ಪ್ರತಿ ತಿಂಗಳು ಕೊಂಚ ಕೊಂಚ ವಾಪಸ್ ಕೊಡ್ತೀನಿ"

ಸೀನ ಮಾತು ಕೊಟ್ಟಂತೆ, ಸಂಜೆ ಬಂದು ದುಡ್ಡನ್ನು ಕೊಟ್ಟು ಹೋದ...
ರಾಜ ದುಡ್ಡು ಭದ್ರವಾಗಿಟ್ಟು, ಅಮ್ಮನ ಹಾದಿಗೆ ಕಾದ...
ಸಂಜೆಯೇ ಬರಬೇಕಾಗಿದ್ದ ಅಮ್ಮ, ಊರಿಂದ ಬರುವ ಹೊತ್ತಿಗೆ ರಾತ್ರಿಯಾಗಿತ್ತು...
ಊಟ ಮಾಡುತ್ತ ಅಣ್ಣನ ಆರೋಗ್ಯ, ಸೋರುತ್ತಿರುವ ಅಡಿಗೆ ಮನೆ ಸೂರು, ಊರಿನ ಕಥೆ ಎಲ್ಲ ಮಗನಿಗೆ ಹೇಳಿದ್ದಾದ ಮೇಲೆ...
"ರಾಜೂ...ಕೊಂಚ ಹಾಸಿಗೆ ಹಾಸಪ್ಪ, ತುಂಬಾ ಸುಸ್ತಾಗಿದೆ...ಬೆಳಗ್ಗೆ ಬೇಗ ಎದ್ದೇಳು, ಗುಂಡು ಮಾಮ ಮನೆಗೆ ಹೋಗಿಬರೋಣ, ಅವಳ ಮಗಳು ಸುಮಾ ಇದೇ ಊರಲ್ಲಿ ಕೆಲಸ ಮಾಡ್ತಿದ್ದಾಳಂತೆ, ಸುಮ್ಮನೆ ಹಾಗೆ ಗಮನಿಸು, ಮನಸ್ಸಿಗೆ ಹಿಡುಸಿದರೆ ಮದುವೆ ಬಗ್ಗೆ ಮಾತಾಡೋಣ..."
"ಅಮ್ಮ...ದುಡ್ಡು ಬೇಕೂ ಅಂದಿದ್ಯಲ್ಲ..."...
"ನಾಳೆ ಸಂಜೆ ಊರಿಗೆ ಹೋಗಬೇಕಾದ್ರೆ ಕೊಡೋ...ಈ ಸರಿ ಹೊತ್ತಲ್ಲಿ ಯಾಕೆ?"
ರಾಜನಿಗೆ ಕಳುವಿನ ಬಗ್ಗೆ ಅಮ್ಮನಿಗೆ ಹೇಳಬೇಕೂ ಎಂದು ನಾಲಿಗೆ ತುದಿಗೆ ಬಂದರೂ,
ಅಮ್ಮ ಸುಮ್ಮನೆ ಆತಂಕ ಪಡುತ್ತಾರೆ, ಊರಿನಿಂದ ಬಂದು ಸುಸ್ತಾಗಿದೆ, ಇದರ ಬಗ್ಗೆ ತಿಳಿಸಿದರೆ ರಾತ್ರಿಯೆಲ್ಲ ನಿದ್ದೆ ಮಾಡುವುದಿಲ್ಲವೆಂದು ಸುಮ್ಮನಾದ...
ಸೀನ ಕೊಟ್ಟ ಹಣ ಭದ್ರವಾಗಿದೆಯೆಂದು ಮತ್ತೊಮ್ಮೆ ಕಪಾಟು ನೋಡಿ, ಅಮ್ಮನ ಪಕ್ಕದಲ್ಲಿ ಮಲಗಿದ ರಾಜ...

***

ಅಮ್ಮ ರಾಜನನ್ನು ಎಬ್ಬಿಸಿದರು...
"ರಾಜೂ...ಎದ್ದು ಬೇಗ ರೆಡಿ ಆಗು, ಗುಂಡು ಮಾಮ ಮನೆಗೆ ಹೋಗೋಣ...ಬೇಗನೆ ಬರುತ್ತೀವಿ ಎಂದು ನಾನು ಮುಂಚೆಯೇ ತಿಳಿಸಿದ್ದೀನಿ.."...
ಏಳುತ್ತಿದ್ದಂತೆ ಮುಖ ತೊಳೆದ ರಾಜ ಹಣ ಭದ್ರವಾಗಿದೆಯೋ ನೋಡೋಣ ಎಂದು ಪರೀಕ್ಷಿಸಿದ...
ಇಟ್ಟಿದ್ದ ಜಾಗ ಖಾಲಿ ಇರುವುದನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು...!
ತಕ್ಷಣವೇ ಕೂಗಿದ..."ಅಮ್ಮಾ! ಅಮ್ಮಾ! ನಾನು ನೆನ್ನೆ ಇಟ್ಟ ಹಣ ಕಳುವಾಗಿದೆ ಅಮ್ಮಾ...ಈ ಮನೆಯಲ್ಲಿ ಯಾಕೋ ಕಳವು ತೀರ ಹೆಚ್ಚಿದೆ!
ನೆನ್ನೆ ನೀನು ದಣಿದಿದ್ದರಿಂದ ಹೇಳಲಿಲ್ಲ...ಈಗ ಅಣ್ಣನ ಆಪೊರೇಷನ್’ಗೆ ಬೇಕಾದ ದುಡ್ಡು ಎಲ್ಲಿ ಹೊಂದಿಸಲಿ!?"
ಎಂದು ದುಃಖದಿಂದ ಹಾಸಿಗೆ ಮೇಲೆ ರಾಜ ಕುಸಿದ...
"ಕಳುವೆಲ್ಲಾಯ್ತೋ??? ಅಲ್ಲೇ ಅಟ್ಟದ ಮೇಲೆ ಪೆಟ್ಟಿಗೆನಲ್ಲಿ ನಡುರಾತ್ರಿ ಇಟ್ಟೆಯಲ್ಲ, ಆಗಲೇ ಮರೆತು ಹೋಯ್ತಾ?"
"ಇಲ್ಲಮ್ಮ...ನಾನು ಅಟ್ಟದ ಮೇಲಲ್ಲ ಇಟ್ಟಿದ್ದು, ಕಪಾಟಿನಲ್ಲಿ! ಚೆನ್ನಾಗಿ ಜ್ಞಾಪಕವಿದೆ!"
"ಒಮ್ಮೆ ತೆಗೀ ನೋಡೋಣ ಅಟ್ಟದ ಮೇಲಿನ ಪೆಟ್ಟಿಗೆ..."
ರಾಜ ಅಟ್ಟದ ಮೇಲಿನ ಪೆಟ್ಟಿಗೆ ತೆಗೆದ...
"ಎಲ್ಲಿಂದಾ ಬಂತೋ ಇಷ್ಟೊಂದು ದುಡ್ಡೂ???"
"ನಂಗೇನೂ ಗೊತ್ತಿಲ್ಲಮ್ಮ, ಪೆಟ್ಟಿಗೆ ತೆಗೆದೇ ತಿಂಗಳುಗಳಾಯಿತು"
"ಅಯ್ಯೋ ಶಿವನೇ...ಚಿಕ್ಕವನಾದಾಗ ಬರೀ ನಿದ್ದೇಲಿ ಮಾತಾಡ್ತಿದ್ದಿ...ಈಗ ನಿದ್ದೇಲಿ ಓಡಾಡಕ್ಕೆ ಶುರು ಮಾಡಿದೀಯೇನೋ??!!!
ನಡೀ ಗುಂಡು ಮಾಮ ಮನೆಗೆ ಹೋಗೋ ಹೊತ್ತಾಯ್ತು...ಮದುವೆ ಆದ ಮೇಲೆ ಮಂಚಕ್ಕೆ ಕಟ್ಟಿ ಹಾಕ್ತಾಳೆ ನಿನ್ನ ಹೆಂಡತಿ"
ಎಂದು ನಕ್ಕು, ರಾಜನ ತಲೆ ಮಟುಕಿದ ಅಮ್ಮ ಎದ್ದು ಹೋದರು...
ಪೆಟ್ಟಿಗೆಯಲ್ಲಿದ್ದ ರಾಶಿ ಹಣವನ್ನು ನೋಡುತ್ತಾ ಪೆಚ್ಚಾಗಿ ಕುಳಿತ ರಾಜ!


--ಶ್ರೀ
(೩೦-ಆಗಸ್ಟ್-೨೦೦೮)

Friday, August 29, 2008

ಕುಹೂ ದನಿಯು ಕಿವಿ ತೂತ ಕೊರೆದಿತ್ತು!

ಕೋಗಿಲೆಯ ಕುಹೂ ದನಿಯು
ಕಿವಿ ತೂತ ಕೊರೆದಿತ್ತು!
ಚಿಟ ಪಟನೆ ಮಳೆ ಹನಿಯು
ಕಾದೆಣ್ಣೆಯಂತಿತ್ತು!
ಇವನ್ಯಾವ ಅರಸಿಕನೆಂದು
ಹಳಿಯಬೇಡಿರಿ ಎನ್ನ...

ಮೆತ್ತನೆಯ ಹಾಸಿರಲು
ಬೆಚ್ಚನೆ ನಾ ಹೊದ್ದಿರಲು
ತಿಳಿ ನಿದ್ದೆ ಹತ್ತಿರಲು...
ನಾ ಹೀಗೆ ಬಗೆದದ್ದು
ಸುಳ್ಳೇನೋ ಅಣ್ಣ???

--ಶ್ರೀ
(ಆಟೋದಲ್ಲಿ ಗೀಚಿದ್ದು!!! ೨೮/೦೮/೦೮ )

Thursday, August 7, 2008

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"
ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ...

ಅಮ್ಮನ ಮೂಡ್ ಯಾಕೊ ಸರಿ ಇರಲಿಲ್ಲ...ಎಷ್ಟೊ ಸರತಿ ಪುಟ್ಟಿ ಮಧ್ಯ ರಾತ್ರಿ ಬಂದದ್ದುಂಟು...
ಆದರೂ ಅಮ್ಮನಿಗೆ ಯಾಕೋ ಆತಂಕವಾಗಿತ್ತು ಇಂದು...

ಮನಸ್ಸಲ್ಲೇ ಕೊರಗಿದರು ಅಮ್ಮ
"ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???"

***

"ಛೆ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು...
ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು...ಇಲ್ಲ ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು!
ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"...ಸುತ್ತ ಕಣ್ಣು ಹಾಯಿಸಿದಳು ಪುಟ್ಟಿ...
ಹತ್ತಿರ ಯಾರು ಕಣ್ಣಿಗೆ ಬೀಳಲಿಲ್ಲ...

ನಡು ರಾತ್ರಿ ಆಫೀಸಿಂದ ಹೊರಟಿದ್ದಳು ಪುಟ್ಟಿ...
ಸಮಯ ೨.೩೦ ಆಗಿತ್ತು...ಎಂದೂ ಇಲ್ಲದ್ದು ಇಂದು ಕೆಂಪೇಗೌಡ ರಸ್ತೆಯಲ್ಲೂ ಇಂದು ಯಾರೂ ಕಾಣುತ್ತಿಲ್ಲ..!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಮನಸಲ್ಲೇ ಶಪಿಸಿದಳು ಪುಟ್ಟಿ...
ಪುಟ್ಟಿ ಆ ರೀತಿ ಶಪಿಸಲು ಕಾರಣವಿತ್ತು...
ಹೇಳಿ ಕೇಳಿ ಅದು ಕಾರ್ಪೊರೇಶನ್ ಜಾಗ! ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ...
ಆದ್ರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ!

ಇನ್ನು ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ!
ಇನ್ನೆರಡು ಫ಼ರ್ಲಾಂಗ್ ಆ ಕಡೆ ಮೈಸೂರು ಬ್ಯಾಂಕ್! ಅಲ್ಲಿ ಹತ್ತಿರ ಹೆಚ್ಚು ಜನರಿರುತ್ತಾರೆ...
ಎರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿತ್ತು!

ಪುಟ್ಟಿ ಅಂದಿನ ದಿನದ ಬಗ್ಗೆ ಮೆಲಕು ಹಾಕಿದಳು...

ಪುಟ್ಟಿಗೆ ಅಂದಿನ ದಿನವೇ ಕೆಟ್ಟದಾಗಿತ್ತು...
ಬೆಳಗ್ಗೆಯಿಂದ ಮಾಡಿದ ಕೆಲಸವೆಲ್ಲ ತಪ್ಪಾಗಿತ್ತು...ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ...
ಮಾರನೇಯ ದಿನವೇ ಮಾನೇಜರ್ ಕ್ಲೈಂಟ್'ಗೆ ಡೆಮೋ ತೋರಿಸಬೇಕು ಅಂತ ಪುಟ್ಟಿಯ ತಲೆ ಮೇಲೆ ಕೂತಿದ್ದ!
ಪಾಪ ಪುಟ್ಟಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲೆ ರಾತ್ರಿಯೇ ಕೂತಿದ್ದಳು!
ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ
"ಬನ್ನಿ ಮೇಡಮ್!" ಅಂತ ಎಂದಿಗಿಂತ ಹೆಚ್ಚಿಗೆ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್!
ಆ ಕ್ಯಾಬ್ ಡ್ರೈವರ್ ಕರಿಯನನ್ನು ಕಂಡರೆ ಪುಟ್ಟಿಗೆ ಆಗದು ...
ಅವನ ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ...
"ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ಪುಟ್ಟಿ...
ದಾರಿಯಲ್ಲಿ ಬರುವಾಗ ಕಾರ್ಪೊರ್‍ಏಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ...

"ಮೇಡಮ್! ನನ್ ಕಂಪನೀದೇ ಇನ್ನೊಂದ್ ಕ್ಯಾಬಿದೇ ಈ ಕಡೇನೇ ಹೋಗ್ತಾ ಇದ್ಯಂತೆ...
ಒಂದ್ ಐದು ನಿಮಿಷ ಅಷ್ಟೇ ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ"

ಹಾಗೆ ಆ ಕರಿಯ ಹೇಳಿ ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು...
ಅಮ್ಮನ ಬೈಗುಳ ಮತ್ತೆ ಜ್ಞಾಪಕಕ್ಕೆ ಬಂತು...

ಕರಿಯ ಫೋನ್ ಮಾಡುವಾಗ ಗಮನಿಸಿದ್ದಳು ಪುಟ್ಟಿ...
ಅವನು ಮಾತಾಡುವುದು ಏನೂ ಅರ್ಥ ಆಗಲಿಲ್ಲ...ತುಳುವೋ ಕೊಂಕಣಿಯೋ ಇರಬೇಕು...
ನಗ್ತಾ ನಗ್ತಾ ಮಾತಾಡುತ್ತಿದ್ದ ಆ ಕಡೆಯವನ ಜೊತೆ...

"ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ???"
ಮನಸ್ಸಲ್ಲೇ ರೇಗಿದಳು ಪುಟ್ಟಿ...

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಪ್ರಕರಣ ನಡೆದಿತ್ತು...!
ಎಂದೂ ಭಯಪಡದ ಪುಟ್ಟಿಯ ಮನಸಲ್ಲೂ ಈ ಯೋಚನೆ ಹಾಯದಿರಲಿಲ್ಲ...
ಮತ್ತೊಮ್ಮೆ ನೋಡಿದಳು ಡ್ರೈವರ್ ಕಡೆಗೆ...ಅವನು ನಸು ನಕ್ಕ "ಇನ್ನೇನ್ ಬರತ್ತೆ ಮೇಡಮ್!"...
ಅವನ ಆ ನಗೆ ಪುಟ್ಟಿಗೆ ಹಿಡಿಸದು...
"ಕಾರಿನಲ್ಲಿ ಇನ್ನೋಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ?"
"ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್'ದ! ಈಡಿಯಟ್!"

ಪ್ರತಿಭಾ ಬಗ್ಗೆ ಯೋಚಿಸುತ್ತ ಪುಟ್ಟಿಗೆ ಸ್ವಲ್ಪ ದಿಗಿಲೇ ಆಯಿತು...
ತಮ್ಮ ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ...ಖಾರದ ಪುಡಿ ಪರ್ಸ್'ನಲ್ಲಿ ಇಟ್ಟುಕೋ ಎಂದು...
ಇಟ್ಟುಕೊಂಡಿಲ್ಲ!.."ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು..."
ಕರ್ಮಕ್ಕೆ ಮೊಬೈಲ್ ಬ್ಯಾಟರೀ ಬೇರೆ ಮುಗಿದಿತ್ತು, ತಮ್ಮನನ್ನು ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ!
ಪುಟ್ಟಿ ಸಮಯಕ್ಕೆ ಚಾರ್ಜ್ ಮಾಡುವುದಿಲ್ಲವೆಂದು ಯಾವಾಗಲೂ ಬಯ್ಸಿಕೊಳ್ಳುವವಳೇ!
ಇಂದು ಈ ರೀತಿ ಕೈ ಕೊಟ್ಟಿತ್ತು...!
ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಕಾಣಲಿಲ್ಲ...!

ಮತ್ತೊಮ್ಮೆ ಸುತ್ತ ನೋಡಿದಳು ಪುಟ್ಟಿ...ಸುಮಾರು ದೂರದಲ್ಲಿ ಯಾರೋ ಮುಸುಕು ಹೊದ್ದಂತೆ ಕಂಡಿತು...
ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವನನ್ನ ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ಪುಟ್ಟಿಯ ಮನಸಲ್ಲಿ ಹರಿಯಿತು...
ಅಷ್ಟರಲ್ಲೆ ಪಕ್ಕದ ಮೈದಾನದ ಕಾಂಪೌಂಡ್ ಮೇಲಿಂದ ಒಂದು ನಾಯಿ ಎಗರಿತು...
ಇದನ್ನು ನಿರೀಕ್ಷಿಸದ ಪುಟ್ಟಿ ಥರಗುಟ್ಟಿದಳು!

ಕೊನೆಗೂ ಇನ್ನೊಂದು ಕ್ಯಾಬ್ ಬಂತು...ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರೆ!
ಇಬ್ಬರೂ ನಗುತ್ತಿದ್ದಾರೆ...! ಸಿಲಿಂಡರ್ ಅಳವಡಿಸಿದ್ದಾಯಿತು...
"ಬನ್ನಿ ಮೇಡಮ್ ಆಗ್ಲೆ ತುಂಬಾ ಲೇಟ್ ಆಗಿದೆ" ಅಂತ ಕರೆದ...
ನಮ್ಮ ಕ್ಯಾಬ್ ಹೊರಟಿತು...ಇನ್ನು ಹೊರಟು ಸ್ವಲ್ಪ ದೂರವೂ ಹೊಗಿರಲಿಲ್ಲ!
ಮತ್ತೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಕರಿಯ!
"ಮತ್ತೆ ಏನಾಯ್ತು???" "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ - ಯಾಕೊ ಟೈಮ್ ಸರಿ ಇಲ್ಲ"
ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ!
ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡು ನಿಮಿಷದಲ್ಲೇ ಬಂದ...
"ಮೇಡಮ್! ಒಂದು ಕೆಲಸ ಮಾಡೋಣ...ನಾವು ನನ್ ಫ್ರೆಂಡ್ ಕಾರಲ್ಲೇ ನಿಮ್ಮನ್ನ ಡ್ರಾಪ್ ಮಾಡಿ ಮತ್ತೆ ಬಂದು ರಿಪೇರಿ ಮಾಡ್ತೀವಿ"
ಇದನ್ನು ಕೇಳುತ್ತಿದ್ದಂತೆ ಪುಟ್ಟಿಯ ಮೈ ತುಸು ಕಂಪಿಸಿತು!

ಏನು ಮಾಡುವುದು ಎಂದು ತಿಳಿಯಲಿಲ್ಲ...ಬೇರೆ ದಾರಿ ತೋಚಲಿಲ್ಲ...
ಒಂದು ಕಡೆ ಭಯ...ಇನ್ನೊಂದು ಕಡೆ ಮೊಂಡು ಧೈರ್ಯ ಏನು ಆಗುವುದಿಲ್ಲ ಎಂದು...
"ಆಗಲಿ ಏನಾಗುವುದೋ ನೋಡೇ ಬಿಡೋಣ! ಕೃಷ್ಣ ಎಂದೂ ಕೈ ಬಿಡುವಿದಿಲ್ಲ ನನ್ನನ್ನು ಕಾಯುತ್ತಾನೆ" ಎಂದು ಹೊರಟಳು...

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ಪುಟ್ಟಿ...ಏನಾಗುವುದೋ ಎಂಬ ಹಿಂಜರಿಕೆಯಲ್ಲೆ ಹಿಂದೆ ಕುಳಿತಳು ಪುಟ್ಟಿ!
ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ...
ಹಿಂದೆ ಕುಳಿತು ಕಾರು ಹೊರಟ ಮೇಲೆ ಪುಟ್ಟಿಯ ಗಮನಕ್ಕೆ ಬಂದದ್ದು...
ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ! ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ...

"ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ...ಸಿಲಿಂಡರ್ ಇದ್ದಂತಿತ್ತು...ಆಮೇಲೆ ಅವನು ಬಂದಮೇಲೆ ಕ್ಲಚ್ ನಾಟಕ!" ಎದೆ ಢವಗುಟ್ಟಿತು!

"ಮೆಲ್ಲನೆ ಕಾರಿನಿಂದ ಜಿಗಿಯಲೇ?" ನಡು ರಾತ್ರಿಯಲ್ಲಿ ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ಪುಟ್ಟಿ...
ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೋಣ ಎಂದೆನಿಸಿ ಪ್ರಯತ್ನಿಸಿದಾಗ ತಿಳಿಯಿತು ಇದಕ್ಕೆ ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು!
ತನ್ನ ಸ್ಥಿತಿ-ಅಸಹಾಯಕತೆ ತಿಳಿದ ಪುಟ್ಟಿಯ ಕಣ್ಣುಗಳು ನೀರೂರಿದವು...

ಕಾರ್ ರೊಯ್ಯನೆ ಹೋಗುತ್ತಿತ್ತು...ಅವರಿಬ್ಬರು ಅವರ ಪಾಟಿಗೆ ಮಾತನಾಡುತ್ತಿದ್ದರು...
ಜೋರಾಗಿ ನಗುತ್ತಿದ್ದರು...
ಪುಟ್ಟಿ ಊರಗಲ ಕಣ್ಣ ಬಿಟ್ಟು ಗಮನಿಸುತ್ತಿದ್ದಳು ಎಲ್ಲಿ ಬೇರೆ ಕಡೆಗೆ ಕರೆದೊಯ್ಯುವರೋ!
ಮನಸಿನಲ್ಲಿ ನೂರಾರು ಯೋಚನೆಗಳು...
"ಇವರಿಬ್ಬರೂ ಎನಾದರೂ ಮಾಡಿದರೆ ಏನು ಮಾಡುವುದು?ಕಿರುಚಬೇಕೆ? ನನ್ನ ಬಳಿ ಚಾಕು ಅಥವಾ ಯಾವುದೇ ಆಯುಧ ಇಲ್ಲ? ಎನು ಮಾಡುವುದು?
ಪರ್ಸ್ ಬಿಟ್ಟರೆ ಏನು ಇಲ್ಲ...ಇವರಿಬ್ಬರೂ ಧಾಂಡಿಗರಂತಿದ್ದಾರೆ!"

ಅಷ್ಟರಲ್ಲೆ ಕಾರು ಗಕ್ಕನೆ ನಿಂತಿತು...
ಯೋಚನೆಗಳಲ್ಲಿ ಮುಳುಗಿದ್ದ ಪುಟ್ಟಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ
"ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು"
ಪುಟ್ಟಿ ಕಿಟಕಿ ಆಚೆ ನೋಡಿದಳು...ಅರೆ! ಮನೆ ಬಂದಿದೆ!
ಅಷ್ಟರಲ್ಲೆ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಹೊರಬಂದರು!
ಡ್ರೈವರ್ ಹೇಳುತ್ತಿದ್ದ..."ಇಷ್ಟು ಕಷ್ಟ ಆದ್ರು ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್!
ನೋಡಿ...ಇವನು ನನ್ ಚಡ್ಡಿ ದೋಸ್ತ್! ಇದೇ ಊರಲ್ಲಿದ್ರೂ ಇಬ್ರೂ ಡ್ರೈವಿಂಗ್ ಕೆಲಸದಲ್ಲಿದ್ರೂ ೫ ವರ್ಷದಿಂದ ಸಿಕ್ಕಿರಲಿಲ್ಲ!
ನಿಮ್ಮಿಂದ ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗೂಡ್ ನೈಟ್!"

ಇಳಿದ ಪುಟ್ಟಿ ಮನೆ ಒಳಗೆ ಓಡಿದಳು...
"ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು, ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತ ಇರಲಿಲ್ವ? ಅಮ್ಮ ಪಾಪ ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ತಮ್ಮ ಹೇಳಿದಾಗಲೆ ಪುಟ್ಟಿಗೆ ಹೊಳೆದಿದ್ದು ಹಾಗೆ ಕರೆ ಮಾಡಬಹುದಿತ್ತೆಂದು...!!
"ಅಮ್ಮ ಎಷ್ಟೆ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಲು ಪುಟ್ಟಿ...

--ಶ್ರೀನಿವಾಸ ಪ. ಶೇ.
(ಬರೆದದ್ದು ೬-೭ ಆಗಸ್ಟ್ ೨೦೦೮ ನಡು ರಾತ್ರಿ...)

Wednesday, August 6, 2008

ಮಳ್ಳಿ ಮಳ್ಳಿ ಮಿಂಚುಳ್ಳಿ ....!

ಅದು ಶನಿವಾರ ಸಂಜೆ...


"ಏನು ಕರ್ಮಾನೋ!!! ಸಾಫ್ಟ್ ವೇರ್ ಇಂಜಿನೀರ್ ಬಾಳೇ ಗೋಳು" ಅಂತ ಎಂದಿನಂತೆ ಬಯ್ದುಕೊಂಡು ಆಫೀಸ್ ನಲ್ಲಿ ಕೋಡ್ ಕುಟ್'ತಾ ಕೂತಿದ್ದೆ... 'ಲೇಯ್, ಕಿತ್ತು ಹಾಕಿದ್ದು ಸಾಕು...ಪ್ರಾಜೆಕ್ಟ್ ಮಾಡಿಲ್ಲ ಅಂದ್ರೆ ಪ್ರಾಣ ಏನು ಹೋಗಲ್ಲ, ಇಲ್ಲಿ ಬಾರೋ...' ಅಂತ ನನ್ ಕೊಲೀಗ್ ಕರೆದ...ಏನಪ್ಪಾ ಅಂಥ ನೋಡಿದ್ರೆ, ಆಫೀಸ್ ಕಿಟಕಿ ಪಕ್ಕ ನಿಂತುಕೊಂಡು ಕರೀತಾ ಇದ್ದ ..ಇವನಿಗೋ ಸ್ವಲ್ಪ ಬರ್ಡ್ ವಾಚಿಂಗ್ ಹುಚ್ಚು ...

ಓಹ್! ಬರ್ಡ್ ವಾಚಿಂಗ್ ಅಂದ್ರೆ ಹುಡುಗೀರ್ ನ ನೋಡೋದು ಅಂದ್ಕೊಂಡ್ರಾ??

ಅದು ಹಾಗಲ್ಲ...ಅದು ನಿಜವಾಗಲೂ ಬರ್ಡ್ ವಾಚಿಂಗೇ!! ಅಂದ್ರೆ ಹಕ್ಕಿಗಳನ್ನ ನೋಡೋ ಹುಚ್ಚು ಸ್ವಲ್ಪ...

ಇವನ ಜೊತೆ ಸೇರಿ ನಂಗೂ ಸ್ವಲ್ಪ ಗೀಳು ಹತ್ತಿದೆ...

ಅಂದ್ ಹಾಗೆ ನಂ ಆಫೀಸ್ ಪಕ್ಕದಲ್ಲೇ ಕೆರೆ ಇದೆ...ಬೇಕಾದಷ್ಟು ತರದ ಹಕ್ಕಿಗಳು ಬರತ್ತೆ ಇಲ್ಲಿಗೆ...

ಇವನು ತೋರಿಸಿದ್ಮೇಲೆ ನಂಗೆ ಗೊತ್ತಾಗಿದ್ದು ನಂ ಸುತ್ತ ಎಷ್ಟೊಂದ್ ತರಹದ ಹಕ್ಕಿಗಳು ಹಾರಾಡ್ತವೆ ಅಂಥ..!

ನಂ ಬೆಂಗಳೂರಿನಲ್ಲಿ ಏನಿದ್ರು ಬರೀ ಕಾಗೆ, ಗುಬ್ಬಿ, ಹದ್ದು, ಪಾರಿವಾಳ...ಅಪರೂಪಕ್ಕೆ ಗರುಡ, ಮೈನಾ ಇಸ್ಟೇ ಕಾಣೋದು ಅಂತ ತಿಳ್ಕೊಂಡಿದ್ದೆ! ಅದರಲ್ಲೂ ಗರುಡ ಹಕ್ಕೀನ ಅಮ್ಮ ನನಗೆ ಚಿಕ್ಕಂದಿನಲ್ಲಿ ತೋರಿಸಿ ಕೊಟ್ಟಿದ್ದರಿಂದ ಸುಲುಭವಾಗಿ ಕಂಡು ಹಿಡಿಯುತ್ತೇನೆ...ಹೆಚ್ಚು ಜನಗಳಿಗೆ ಅದು ನಂ ಸುತ್ತಾನೆ ಹಲವು ಬಾರಿ ಕಾಣತ್ತೆ ಅನ್ನೋದರ ಬಗ್ಗೆ ಅರಿವು ಇರಲ್ಲ...ನಾವುಗಳು ಹಾಗೆ ಆಲ್ವಾ? ನಮಗೆ ಇಷ್ಟ ಇದ್ರೆ ಮಾತ್ರನೇ ಯಾವುದೇ ವಿಷಯದ ಬಗ್ಗೆ ಗಮನ...ಇಲ್ಲ ಅಂದ್ರೆ ನಂ ಕಣ್ ಎದುರಗಡೆನೇ ಇದ್ದರೂ ನಮಗೆ ಬೇಕಾಗಿಲ್ಲ ಅದು...! ವಸ್ತುಗಳು ಇದ್ದೂ ಇಲ್ಲದ ಹಾಗೆ ಇರತ್ವೆ ! ಜೋತೆಗಿರೋ ಮನುಷ್ಯರೂ ಅಷ್ಟೆ....!

ಈಗೀಗ ನನಗೆ ಹಕ್ಕಿ ನೋಡೋ ಹುಚ್ಚು ಹಿಡಿದಿದ್ರಿಂದ, ಕಿಟಕಿ ಬಳಿ ಹೋದೆ...

ಗೆಳೆಯ ನನಗೆ ತೋರಿಸಿದ ..."ಅಲ್ಲಿ ನೋಡು...'White breasted KingFisher' ಕೂತಿದೆ"...


ಹಲವಾರು ಬಾರಿ ನೋಡಿದೀನಿ ಈ King Fisher'ನ ...ನಾನಂದೆ ..."ಏನಕ್ಕಾದ್ರು King Fisher ಅಂತಾರೋ ಇದನ್ನ!!! ಯಾವಾಗ್ಲೂ ತಂತಿ ಮೇಲೆ ಸೋಮಾರಿ ತರ ಕೂತಿರತ್ತೆ...! ಒಂದ್ ಸರ್ತಿನೂ ಮೀನು ಹಿಡಿದಿದ್ದು ನೋಡೇ ಇಲ್ಲ !"...ಹೌದು... ನಾನು ಮೀನು ಹಿಡಿಯೋದನ್ನ ನೋಡೋಕ್ಕೆ ಎಷ್ಟೋ ನಿಮಿಷಗಳು ಕಾದದ್ದುಂಟು...ಆದ್ರೆ ಎಂದೂ ಮೀನು ಹಿಡಿದ್ದಿದ್ದನ್ನ ನೋಡಿಲ್ಲ...ಇಂದು ಕೂಡ ಎಂದಿನಂತೆ ಸುಮ್ಮನೆ ತಂತಿ ಮೇಲೆ ಕೂತಿತ್ತು...ನಾನಂದೆ "ಇದನ್ನ ಮಿಂಚುಳ್ಳಿ ಅಂತಾರೆ ಕನ್ನಡದಲ್ಲಿ" ...

ಅವನಿಗೆ ಕನ್ನಡ ಹೆಚ್ಚು ಬರಲ್ಲ..." 'ಮಿಂಚುಳ್ಳಿ ' ನಾ??? ಇದೇನು noun'ಆ??? (ನಾಮಪದಾನ) ಆಥವಾ ಸಂಧಿ ಸಮಾಸ ಇದ್ಯಾ?"...ನಂಗೆ ಉತ್ತರ ಗೊತ್ತಿಲ್ಲ! ನನಗೆ ತಿಳಿದ ಮಟ್ಟಿಗೆ ಇದು ನಾಮ ಪದ ಅಷ್ಟೆ! ತಲೆಗೆ ಹೊಳೆದಿದ್ದು ಬರೀ 'ಈರುಳ್ಳಿ , ಬೆಳ್ಳುಳ್ಳಿ ' ಮಾತ್ರ! ಊಹೂಂ! ಅದಕ್ಕೂ ಮಿಂಚುಳ್ಳಿಗೂ ಯಾವ ಸಂಬಂಧನೂ ಸಿಗಲಿಲ್ಲ..."Nounಏ ಇರಬೇಕು"...

ಅಷ್ಟರಲ್ಲೇ ಮಿಂಚುಳ್ಳಿ ಹಾರಿತು...ಇಬ್ರೂ ನೋಡ್ತಾ ಇದ್ವಿ ಕಿಟಕಿಯಿಂದ....

ಮಿಂಚುಳ್ಳಿ ಕೆಳಕ್ಕೆ ಹಾರಿ ಸರಿ ಸುಮಾರು ನೀರಿನ ಮಟ್ಟದಲ್ಲೇ ಹಾರುತ್ತಾ ಮುಂದೆ ಹೋಯಿತು......

ಮನಸ್ಸು ಈ ಕಡೆ ವೇಗವಾಗಿ ಓಡ್ತಾ ಇತ್ತು ...ಇವತ್ತಾದ್ರೂ ಮೀನು ಹಿಡಿಯೋದು ನೋಡ್ತೀನಾ ಅಂಥ...ಅಷ್ಟರಲ್ಲೇ ನೀರಿನ ಒಳಗೆ ಒಂದು ನೀರು ಕಾಗೆ ಕಾಣಿಸ್ತು !!! (Little Cormorant ಅಂತಾರೆ ಇಂಗ್ಲಿಷ್ ನಲ್ಲಿ )

ಅರೆ! ನಂ ಮಿಂಚುಳ್ಳಿ ಯಾಕೆ ನೀರು ಕಾಗೆ ಹತ್ತಿರ ಹೋಗ್ತಾ ಇದೆ??? ಮಿಂಚುಳ್ಳಿ ನೀರು ಕಾಗೆ ತೀರಾ ಹತ್ತಿರ ಹೋಗಿ ಅದರ ಬಾಯಲ್ಲಿ ಇರೋ ಮೀನನ್ನ ಲಪಕ್ ಅಂಥ ಕಿತ್ಕೊಂಡು ಹಾಗೆ ಇನ್ನೊಂದು ದಡಕ್ಕೆ ಹಾರಿ ಹೋಯ್ತು! ನಾವಿಬ್ಬರೂ ಹಾಗೆ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡ್ತಾ ಇದ್ವಿ....!

ಇಬ್ಬರೂ ಒಟ್ಟಿಗೆ ಕಿರುಚಿದ್ವೀ "ನೋಡಿದ್ಯಾ???!!!!"...ಅರೆ! ಮಿಂಚುಳ್ಳಿನಾ ನಾನು ಸೋಮಾರಿ ಅಂಥಾ ಬಯ್ಯುತ್ತ ಇದ್ದೆ, ಇಲ್ಲಿ ನೋಡಿದ್ರೆ ಇದರ ನಿಜ ಬಣ್ಣ ಬಯಲಾಗಿತ್ತು...


ಏನು ಕಿಲಾಡಿನಪ್ಪ ಈ ಹಕ್ಕಿ! ಪಾಪ ನೀರು ಕಾಗೆ! ಅದು ಪೆಚ್ಚಾಗಿ ಮತ್ತೆ ಮತ್ತೊಂದು ಮೀನು ಹಿಡಿಯಲು ಮತ್ತೊಮ್ಮೆ ಮುಳುಗು ಹಾಕಿತು...

ಮನದಲ್ಲಿ ತಕ್ಷಣವೇ ಹಾಡು ನಲಿಯಿತು....' ಮಳ್ಳಿ ಮಳ್ಳಿ ಮಿಂಚುಳ್ಳಿ ....! ಜಾಣ ಜಾಣ ಕಾಜಾಣ...!'

ಈ ಹಾಡನ್ನು ಬರೆದವರು ಯಾರೋ ಗೊತ್ತಿಲ್ಲ ನಂಗೆ ಯಾವ ಫಿಲಂ ಅಂತಾನು ಗೊತ್ತಿಲ್ಲ ...ಆದ್ರೆ ನಿಜವಾದ ಮಳ್ಳಿನೇ ಅದು!

'ಕೈಗೆ ಬಂದ ತುತ್ತು ಬಾಯಿಗಿಲ್ಲ' ಅಂತ ಗಾದೆ ಇದೆ...ಬಾಯಿಗೆ ಬಂದ್ರು ಹೊಟ್ಟೆಗಿಲ್ದೆ ಇರಬಹುದು ಅಂತ ಕಲಿಸಿತ್ತು ಈ ಅನುಭವ!


--ಶ್ರೀ

Monday, August 4, 2008

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನ್ನ ಮರದಡಿ ಬೇರೆಯವರಿದ್ದಲ್ಲಿ ಏನೋ ಕಸಿವಿಸಿ!
ಹಲವು ಬಾರಿ ಅವರನ್ನು 'ತಳ್ಳಿದ್ದೂ' ಉಂಟು...
ಒಂದು ದಿನವೂ ನೀರುಣಿಸಿದ್ದಿಲ್ಲ ಅದಕೆ...
ಆದರೂ ಅದೇನೋ ನಂಟು....ಏಕೆಂದರೆ
ಅದು ನನ್ನ ಮರ...ನನ್ನ ಹೊಂಗೇ ಮರ...!

ಬಿಸಿಲಲ್ಲಿ ಬವಳಿದ್ದನ್ನು ಕಂಡಿದ್ದೇನೆ...
ಮಳೆಯಲ್ಲಿ ಮಿಂದಿದ್ದನ್ನೂ ನೋಡಿದ್ದೇನೆ...
ಮಿಂದ ಮರದ ಹಚ್ಚ ಹಸಿರೇ ಮೆಚ್ಚೆನಗೆ
ಗಾಳಿಗೆ ತೂಗುವುದ ನೋಡುವ ಹುಚ್ಚೆನಗೆ!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನಗಾಗಿ ಅದು ಹೂವ ಹಾಸಿದ್ದುಂಟು...
ಹೊಂಗೆ ಹಾಸ ಮೇಲೆ ನಿಲ್ಲಲೆನಗೆ ಏನೋ ಅಳುಕು...
ಅಳುಕಿನ ಉಳುಕಿನೊಂದಿಗೆ ಅಲ್ಲಿ ನಿಂತು ನಲಿದದ್ದುಂಟು...
ಅದು ನನ್ನ ಮರ...ನನ್ನ ಹೊಂಗೇ ಮರ...!

ಹಲವು ಹಕ್ಕಿಗಳಿಗೆ ನೆಲೆ ನೀಡಿದ್ದನ್ನು ನೋಡಿರುವೆ
ನನ್ನ ಕಣ್ಣೆದುರೇ ರೆಕ್ಕೆ ಜೀವಿಗಳು ಗೂಡ ಕಟ್ಟಿವೆ!
ಕಾವು ಕೊಟ್ಟು ಮರಿ ಮಾಡುವುದ ನೋಡಿರುವೆ!
ಸಾವಿರಾರು ಇರುವೆಗಳ ಮನೆ ಕೂಡ ಇದುವೆ!
ಅದು ನನ್ನ ಮರ...ನನ್ನ ಹೊಂಗೇ ಮರ...!
ಅದು ನನ್ನ ಮರ...ನನ್ನ ಹೊಂಗೇ ಮರ...!

:
:
[ಗಂಭೀರ, ವಿಷಾದದ ಛಾಯೆಯಲ್ಲಿ]

ನನ್ನ ಮರ ಇಲ್ಲದಾಗುವ ಕಾಲ ಬರುತಿದೆ...
ಇನ್ನೆಷ್ಟು ದಿನವಿರುದೋ ಕಾಣೆ...
ಇರಬಹುದು ಹಲವು ದಿನ/ವಾರ...ಹೆಚ್ಚೆಂದರೆ ಮಾಸ!
ಅದಕ್ಕೆ ತಿಳಿಯದು ಕಾಲ ಬರಲಿಹನೆಂದು...
ಇದು ತಿಳಿದ ಎನಗೆ ವಿಚಿತ್ರ ಹಿಂಸೆ!
ದಿನವೂ ನೋಡುತ್ತೇನೆ....
ಎಂದಿನಂತೆ ಹಾಗೇ ತೂಗುತ್ತದೆ, ನಗುತ್ತದೆ!
ಅದು ನನ್ನ ಮರ...ನನ್ನ ಹೊಂಗೇ ಮರ...

ಇನ್ನೇನು ಬರಲಿರುವ ಮರಕಟುಕ...
ಹೌದು! ಮರ ಕಟುಕನೇ!
ಇನ್ನೇನು ಮರಕಟುಕ ಬರಲಿರುವ...
ನನ್ನ ಮರವ ನನ್ನಿಂದ ಕಸಿಯಲು...
ಇಲ್ಲದಾಗಿಸಲು...

ನನ್ನ ಮರವಾದರೂ ನನಗೆ ಯಾವ ಹಕ್ಕೂ ಇಲ್ಲ
ನನ್ನದಲ್ಲದ ನನ್ನ ಮರದ ಮೇಲೆ...
ನೆರಳಲ್ಲಿ ನಿಲ್ಲುವ ನಲಿವೂ ಅಳಿದಿದೆ ಈಗ....
ಕಾಲನಿಗೆ ಕಾಯುವ ಕಾಟ!
ಬರೀ ಎದೆಯೊಳಗಿನ ಅಳು!
ಅದು ನನ್ನದೇ...ಅದು ನನ್ನದೇ...
ಅದು ನನ್ನದೇ ಮರ...ನನ್ನ ಮೆಚ್ಚಿನ ಹೊಂಗೇ ಮರ...

--ಶ್ರೀ

(೩೧ ಜುಲೈ ೨೦೦೮)
-----------------------------

ನಾನು ನನ್ನ ಮರದ ಬಗ್ಗೆ ಬರೆದಿದ್ದೆ ತಪ್ಪಾಯಿತೇನೋ :(
ಬರೆದಾದ ಮೇಲೆ, ಒಂದು ವಾರ ಕೂಡ ಉಳಿಸಲಿಲ್ಲ ಪಾಪಿಗಳು...
ಗೆಳೆಯರ ದಿನದಂದೇ ನನ್ನ ಮತ್ತು ನನ್ನ ಮರದ ಸ್ನೇಹಕ್ಕೆ ಅಂತ್ಯ !!!
ಕೊಡಲಿಯಿಂದ ಮರಣ ಮೃದಂಗ ಬಾರಿಸುವಾಟ :( :(

ಗೂಡು...

ನಕಲಿ ಹಕ್ಕಿಗಳ
ಗೂಡು ಬದಲಾಗಲು
ಅಸಲಿ ಹಕ್ಕಿಗಳಿಗೆ
ಗೂಡೇ ಇಲ್ಲದಾಯಿತು...!

(೨೪ ಜುಲೈ ೨೦೦೮)

ನವಿಲಂತೆ...

ನಾ ನವಿಲಂತೆ
ಗರಿಗೆದರಿ ನಿಂತಿರಲು ...
ಎಗರಿ ಬಾರೆ
ಛಂಗನೆ, ಓ ಅಂಗನೆ...!

--ಶ್ರೀ
(೧೭ ಜುಲೈ ೨೦೦೮)