Monday, June 29, 2009

ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!

ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು...


ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!



ಈ ಹಿಂದಿ ಹಾಡಿಗೂ, ಗೀತಾ ಚಿತ್ರಗೀತೆಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ?
ಇತ್ತೀಚಿಗೆ ಟಿ.ವಿ. ಮಾಧ್ಯಮದವರೂ, ಕನ್ನಡಪ್ರಭ, ಪ್ರಜಾವಾಣಿ ಮುಂತಾದ ಹೆಸರಾಂತ ಪತ್ರಿಕೆಗಳೂ, ಈ "ಜೊತೆ"ಗೆ ಕೈ ಕೊಟ್ಟು "ಸಾಥ್"ನ ಸಾಥಿಗಳಾಗಿದ್ದಾರೆ...
ಈ "ಸಾಥ್" ಪದದ ಬಳಕೆ, "ಜೊತೆ ಜೊತೆಯಲ್ಲಿ" ಎಂಬ ಅದ್ಭುತ ಹಾಡಿನಲ್ಲಿ ಬಳಸಿದ್ದರೆ ಹೇಗಿರುತ್ತಿತ್ತು ಎಂದನಿಸಿತು.
’ಜೊತೆ’ ಎಂಬ ಕನ್ನಡ ಪದವೂ ತೆರೆಮರೆಗೆ ಸರಿಯುತ್ತಿದೆಯೇ?
ನೀವು ಸಾಥ್‍ನ ಸಾಥಿಗಳಾಗಿದ್ದೀರೇ, ಜೊತೆಯ ಜೊತೆಯಲಿರುವವರೇ?

--ಶ್ರೀ

Saturday, June 27, 2009

ಹೂವು ಮತ್ತು ಟೊಂಗೆ



ಕೊನರಿದ
ಹೊಸ ಹೂಗಳ
ಸವಿಯುತ, ಆನಂದದಿ
ನಲಿಯುತ, ಹೊಗಳುತ,
ಹಳೆ ಹೂಗಳ,
ಚಿಗುರಿಸಿದ
ರೆಂಬೆ-ಟೊಂಗೆಗಳ
ಮರೆಯುವುದೆಷ್ಟು ಸುಲುಭ!

Friday, June 26, 2009

ಮನದ ಹೊಗೆ

ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು...

ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...

--ಶ್ರೀ

Tuesday, June 16, 2009

ಕಾಡುವ ಕರಿನೆರಳು

ಕಾಡುವ
ಕರಿನೆರಳನು ದಿಟ್ಟಿಸಿ
ಬೇಗುದಿಯಲಿ
ಸುಡುವುದಕಿಂತ,
ಕಂಗಳನೆತ್ತಿ
ಸುಡುವ ನೇಸರನಲಿ
ನೆಡುವುದು ಲೇಸು...

--ಶ್ರೀ
(೧೭ - ಜೂನ್ - ೨೦೦೯)

Wednesday, June 10, 2009

ಕೊಚ್ಚೆಯಿಂದ ದೂರ ಉಳಿವಿರೇಕೆ?

ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...

--ಶ್ರೀ
(೧೦ - ಜೂನ್ - ೨೦೦೯)

Monday, June 8, 2009

ಅರಿವು-ಅಳಿವು

ತಿಳಿ ನೀರೂ ಹರಿಯದೆ ನಿಲಲು
ಕೊಳೆಯುವುದು, ಹಳಸುವುದು...
ತಿಳಿವಿನ ಹರಿವು ನಿಲಲು,
ಅಳಿವಿನ ಉರುಳನು ಎಳೆದಂತಲವೇನು?

--ಶ್ರೀ
(೮ - ಜೂನ್ - ೨೦೦೯)

Friday, June 5, 2009

ತಂಪಾದ ಗುಣಗಳ ಕಂಪು

ತಂಪಾದ ಗುಣಗಳು ದೂರದಲಿರುವ ಗರಿಮೆಗಳ ಮುಟ್ಟುವುದು
ಕಂಪಾದ ಕೇದಗೆಯ ಬಳಿಗೆ ದುಂಬಿಗಳು ತಂತಾನೆ ಬರುವಂತೆ

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

--ಶ್ರೀ

(೫-ಜೂನ್-೨೦೦೯)