Tuesday, September 30, 2008

ಮರಳಿ ಬಾ ಶಾಲೆಗೆ...ಬೀದಿ ನಾಟಕ ಪ್ರಯೋಗ

ನಮ್ಮೂರಲ್ಲಿ (ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕು) ನಾವು ಜನ ಜಾಗೃತಿಗಾಗಿ ೭-ಸೆಪ್ಟೆಂಬರ್-೦೮ ರಂದು ಒಂದು ಸಣ್ಣ ಬೀದಿ ನಾಟಕವನ್ನು ಮಾಡಿದೆವು.
ಈ ನಾಟಕದಲ್ಲಿ, ಹಳ್ಳಿಯ ಜನರಿಗೆ ವಿದ್ಯಾಭ್ಯಾಸದ ಮಹತ್ವ, ಸರ್ಕಾರ ಮಕ್ಕಳಿಗೆ ಕೊಡುತ್ತಿರುವ ಸವಲತ್ತು,
ನೀರಿನ ಬಳಕೆ, ಕೆರೆಗಳ ಉಳಿಕೆ ಮುಂತಾದ ವಿಷಯಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದೆವು.





ಇಡೀ ನಾಟಕವನ್ನು ನಮ್ಮ ಕುಟುಂಬದವರೇ ಬರೆದು, ನಡೆಸಿಕೊಟ್ಟದ್ದು ವಿಶೇಷವಾಗಿತ್ತು.
ಪಾತ್ರಧಾರಿಗಳಾಗಿ - ನಾನು, ನನ್ನ ಅಕ್ಕ - ರೋಹಿಣಿ, ನನ್ನ ಮಾವನ ಮಗ ಆನಂದ್, ನಮ್ಮ ಮಾವ ಕುಮಾರ್, ಕು.ಇಂದು ಮತ್ತು ಕು.ಸೌಮ್ಯ ಭಾಗವಹಿಸಿದ್ದೆವು.
(ಸೂ:
ನಾಟಕದಲ್ಲಿ ಎರಡು ಹಾಡುಗಳೂ ಒಳಗೊಂಡಿದ್ದು, ಇದರ ಚಿತ್ರಣ ಇಲ್ಲಿಲ್ಲ.
ನಾಟಕವನ್ನು ಬರೆದವರು ನನ್ನ ಮಾವಂದಿರ ಮನೆಯವರಾದ ಪುಷ್ಪಾ ಹಾಗೂ ಕುಮಾರ್.
ಈ ಹಾಡುಗಳಿಗೆ ರಾಗ ಸಂಯೋಜನೆಯನ್ನು ಹಾಕಿ ಕೊಟ್ಟವರು ವೆಂಕಟೇಶ್(ಮನು).
ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಅಷ್ಟು ಚೆನ್ನಿಲ್ಲದಕ್ಕೆ ಕ್ಷಮೆಯಿರಲಿ.)

ಇದೇ ರೀತಿಯ ಬೀದಿನಾಟಕವನ್ನು ನಮ್ಮೂರ ಪಕ್ಕದ ಹಳ್ಳಿಯಾದ ತಿಪ್ಪಾಪುರದಲ್ಲೂ ನಡೆಸಿದೆವು.

ಈ ನಾಟಕವಲ್ಲದೆ, ಎರಡೂ ಹಳ್ಳಿಯ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿದೆವು.
ಹಾಗೂ ಪುಸ್ತಕಗಳು, ಆಟದ ಸಾಮಾನುಗಳು, ಬಿಸಿಯೂಟ ಕಾರ್ಯಕ್ರಮಕ್ಕೆ ಅನುವಾಗಲು ಒಂದು ಕುಕ್ಕರ್ ವಿತರಿಸಿದೆವು.

ಇದಲ್ಲದೆ, ತಿಪ್ಪಾಪುರ ಮತ್ತು ಅಡವಿ ನಾಗೇನಹಳ್ಳಿ ಮಕ್ಕಳ ನಡುವೆ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದೆವು.
ಈ ರಸಪ್ರಶ್ನೆ ಕಾರ್ಯಕ್ರಮವು ಎರಡು ವಿಭಾಗಗಳಲ್ಲಿ ನಡೆಯಿತು.
ಮೊದಲ ವಿಭಾಗದಲ್ಲಿ ೪ ಮತ್ತು ೫ ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು
ಎರಡನೇ ವಿಭಾಗದಲ್ಲಿ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದೆವು.
ಎರಡೂ ವಿಭಾಗಗಳಲ್ಲಿ ಅಡವಿ ನಾಗೇನಹಳ್ಳಿಯ ಮಕ್ಕಳು ಗೆಲುವನ್ನು ಸಾಧಿಸಿ ಬಹುಮಾನಗಳನ್ನು ಪಡೆದರು.

ಈ ಕಾರ್ಯಕ್ರಮ ಎಲ್.ಐ.ಸಿ ಮತ್ತು ಸಿ.ಒ.ಸಿ.ಬಿ. ಬ್ಯಾಂಕ್ ಸಹಕಾರದೊಂದಿಗೆ ನಡೆಯಿತು.

--ಶ್ರೀ

ಮತದ ಪಥ

ಮತದ
ಪಥ ಹಿಡಿಯಿರೆಂಬುದು
ಸಂತರ ತುಡಿತ
ಮತದ ಪಥ
ತಮದ ಪಥವೆಂಬುದು
ಬರೀ ಕುಹಕ...
ಮತದ ಪಥದಿ
ಇರಲು ಸತತ
ಗೆಲವು ಎಂದೂ ಖಚಿತ...

--ಶ್ರೀ

ನಿಂದಕರೆಂದಿಗೂ ಸಂತರೇ ಅಲ್ಲ

ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...

--ಶ್ರೀ

*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...





ಇದೇ ರೀತಿ ನಮ್ಮ ಪುರಂದರ ದಾಸರು ಈ ರೀತಿ ಅರಿಕೆ ಮಾಡಿಕೊಂಡಿದ್ದಾರೆ...

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||

ಇದೇ ರೀತಿ, ಎಲ್ಲರೂ ಒಗ್ಗೂಡಿ ಬೆಳೆಯೋಣ, ನಲಿಯೋಣ , ಏನಂತೀರಿ? :)


--ಶ್ರೀ

ಮತಾಂತರವನ್ನು ಏಕೆ ತಡೆಯಬೇಕು?

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?

ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...

:)

Tuesday, September 23, 2008

ಮತಾಂತರ ಏಕೆ ಬೇಕು?

ಪತ್ರಕರ್ತ: ಈ ಮತಾಂತರ ಏಕೆ ಬೇಕು?

ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು...

Monday, September 22, 2008

ಮಣ್ಣನು ತಿನ್ನಲು ಬೇಡವೋ



ಮಣ್ಣನು ತಿನ್ನಲು ಬೇಡವೋ ಎಂದೆ
'ಬಾಯಲ್ಲಿ ಮಣ್ಣನು ನೋಡಿಲ್ಲಿ' ಅಂದೆ
ಕೋಪದಿ ಕಿವಿಯನ್ನು ಹಿಂಡಲು ನಾನು
ಜಗವನ್ನೇ ಕಂಡೆ ಜಗವನ್ನೇ ಕಂಡೆ...



ನದಿಯ ನೀರಾಟ ಬೇಡವೊ ಎಂದೆ
'ನೀರಲ್ಲಿ ಹಾರುವೆ ನೋಡಿಲ್ಲಿ' ಅಂದೆ
ಕೋಪದಿ ಬೆತ್ತವ ತರಲು ನಾನು
ಕಾಳಿಂಗನ ಆಟ ನಾನಂದು ಕಂಡೆ...




ಮಳೆಯಲ್ಲಿ ನೆನೆವುದು ಬೇಡವೋ ಎಂದೆ
'ಮಳೆಯಲ್ಲಿ ನೆಂದಿಹೆ ನೋಡಿಲ್ಲಿ' ಅಂದೆ
ಕೊಡೆಯನ್ನು ಹಿಡಿದು ನಾನೋಡಿ ಬರಲು
ಬೆರಳ ಮೇಲೆ ಅಂದು ಗಿರಿಯನ್ನು ಕಂಡೆ...



ಬಲುತುಂಟನಿವನೆಂದು ಸಿಡಿಮಿಡಿಗೊಂಡೆ
ಲೀಲೆಯ ನೋಡಿ, ನನ್ನ ತಪ್ಪ ಕಂಡೆ
ಮಗನಲ್ಲವೆಂದು ನಾ ಅರಿತುಕೊಂಡೆ
ಜಗದೀಶನ ನಾನು ಕಣ್ಮುಂದೆ ಕಂಡೆ
ಜಗವನ್ನು ತೋರಿದ ದೇವನ ಕಂಡೆ...
ಜಗವನ್ನು ತೋರಿದ ದೇವನ ಕಂಡೆ...

--ಶ್ರೀ

(೨೧ ಸೆಪ್ಟೆಂಬರ್ ೨೦೦೮)