Sunday, September 21, 2008

ಪುಟ್ಟನ ದಿನಚರಿ


ಬೇಗನೆ ಎದ್ದು,
ಹಲ್ಲನು ಉಜ್ಜಿ,
ಜಳಕವ ಮಾಡಿದ
ನಮ್ಮಯ ಪುಟ್ಟ

ಬಟ್ಟೆಯ ತೊಟ್ಟು,
ತಲೆಯನು ಬಾಚಿ,
ಬೂಟನು ಹಾಕಿದ
ನಮ್ಮಯ ಪುಟ್ಟ

ಬಾಟಲು,ಪುಸ್ತಕ
ಚೀಲದಿ ತುಂಬಿ
ಹೊರಟನು ಶಾಲೆಗೆ
ನಮ್ಮಯ ಪುಟ್ಟ

ಶಾಲೆಲಿ ಕೇಳಿದ
ಹಾಡನು ಕಲಿತು
ಮನೆ-ಕಡೆ ಓಡಿದ
ನಮ್ಮಯ ಪುಟ್ಟ

ಬರುತಲೆ ಅಮ್ಮನ
ಮುದ್ದನು ಪಡೆದು
ಖುಶಿಯಲಿ ಹಾಡಿದ
ನಮ್ಮಯ ಪುಟ್ಟ

ಅಮ್ಮನ ಕೈಯಲಿ
ಊಟವ ಉಂಡು
ಮಡಿಲಲಿ ಮಲಗಿದ
ನಮ್ಮಯ ಪುಟ್ಟ

ಸಂಜೆಗೆ ಎದ್ದು
ಅಳುತಿರುವಾಗ
ಆಟಿಕೆ ನೋಡಿದ
ನಮ್ಮಯ ಪುಟ್ಟ

ಮಾಮನು ತಂದ
ಆಟಿಕೆ ಹಿಡಿದು
ಆಟವನಾಡಿದ
ನಮ್ಮಯ ಪುಟ್ಟ

ರಾತ್ರಿಗೆ ಚಪಾತಿ
ಬೇಕು ಎಂದು
ಹಟವನು ಹಿಡಿದ
ನಮ್ಮಯ ಪುಟ್ಟ

ಕೂಡಲೆ ಅಮ್ಮನು
ಚಪಾತಿ ಮಾಡಲು
ಚಪ್ಪರಿಸಿದನು
ನಮ್ಮಯ ಪುಟ್ಟ

ಹಾಲನು ಕುಡಿದು
ಹಾಸಿಗೆ ಮೇಲೆ
ಕುಣಿದಾಡಿದನು
ನಮ್ಮಯ ಪುಟ್ಟ

ಅಮ್ಮನ ಮಡಿಲಲಿ
ಲಾಲಿಯ ಕೇಳಿ
ನಿದ್ದೆಗೆ ಜಾರಿದ
ನಮ್ಮಯ ಪುಟ್ಟ

Friday, September 19, 2008

'ಟಾಟಾ' ಹೋದ 'ಟಾಟಾ'!

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.

ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.

ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.

ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.

'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.

--ಶ್ರೀ

ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.

Wednesday, September 10, 2008

Quote hanger

"Expectation is the root cause for disappointment"

- Srinivas
(2nd July 2008)

Tuesday, September 9, 2008

ತಣ್ಣಗಾದ ಕುನ್ನಕ್ಕುಡಿ ವಯೊಲಿನ್...

ನಾನು ಚಿಕ್ಕವನಿದ್ದಾಗ, ಬೇಸಿಗೆ ರಜ ಬಂತೆಂದರೆ ಸಾಕು, ತಂದೆ-ತಾಯಿಯರು, ನಮ್ಮನ್ನು ರಾಮ ನವಮಿ ಪ್ರಯುಕ್ತ ನಡೆಯುತ್ತಿದ್ದ ಶೇಷಾದ್ರಿಪುರಂ ಸಂಗೀತೋತ್ಸವಕ್ಕೆ ಕರೆದೊಯ್ಯುತ್ತ್ತಿದ್ದರು.
ಸಂಗೀತೋತ್ಸವಕ್ಕೆ ಕರೆದೊಯ್ದಾಗ ಏನೋ ಒಂದು ರೀತಿ ಖುಷಿ...ಶೇಷಾದ್ರಿಪುರಂ ಶಾಲೆಯ ಪಕ್ಕದಲ್ಲಿನ ಪಾರ್ಕ್'ನಲ್ಲಿ ಕುಳಿತು ಕಡಲೇ ಕಾಯಿ ತಿನ್ನುತ್ತಾ,
ಅಕ್ಕನೊಡನೆ ಆಟವಾಡುತ್ತಾ ಸಂಗೀತ ಕೇಳುವುದು ಒಂದು ಮೋಜು ನಮಗೆ...
ಅಕ್ಕ-ಪಕ್ಕದ ಮನೆಯವರು, ಮಾವ,ಚಿಕ್ಕಪ್ಪಂದಿರ ಮಕ್ಕಳು ಎಲ್ಲರೂ ಸಂಗೀತ ಕೇಳಲು ಬರುತ್ತಿದ್ದರಿಂದ ಅದೊಂದು ಸುಗ್ಗಿ!
ಎಲ್ಲ ಸಂಗೀತ ಮಹೋತ್ಸವದಂತೆ ಇಲ್ಲೂ, ಒಂದೊಂದು ದಿನವೂ, ಬೇರೆ-ಬೇರೆ ವಿದ್ವಾಂಸರಿಂದ ಖಚೇರಿಗಳು...
ಇವೆಲ್ಲವುಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ನಮ್ಮಂತ ಚಿಕ್ಕವರಿಗೆ ಮನವನ್ನು ಮುಟ್ಟಿದವರಲ್ಲಿ ಕೆಲವರೆಂದರೆ - ಕುನ್ನಕ್ಕುಡಿ ವೈದ್ಯನಾಥನ್, ಯು ಶ್ರೀನಿವಾಸ್,
ರವಿ ಕಿರಣ್, ಟಿ.ವಿ. ಶಂಕರ ನಾರಾಯಣ (ಇಲ್ಲಿ ನಾನು ಹಲವಾರು ಹೆಸರುಗಳನ್ನು ಮರೆತಿರಬಹುದು)...
ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ತಿಳಿವಿಲ್ಲದ ನನಗೆ, ಆಗ ಇವರೆಲ್ಲರಲ್ಲೂ ಕಂಡದ್ದು ಅವರದೇ ಆದ ಶೈಲಿ ಅಥವಾ ಬೇರೆ ತೆರನಾದ ವಾದ್ಯ!

ಕುನ್ನಕ್ಕುಡಿಯವರ ವಯೊಲಿನ್ ವಾದನ - ಬೇರೆಯವರಿಗಿಂತ ಭಿನ್ನ ಮತ್ತು ವಾದನದ ವೇಗಕ್ಕೆ ಹೆಸರುವಾಸಿ (Fast paced)...
ತಮ್ಮ ವಿಶಿಷ್ಟ ರೀತಿಯ ವಯೊಲಿನ್ ವಾದನದಿಂದ ಕರ್ನಾಟಕ ಸಂಗೀತವನ್ನು ಹೆಚ್ಚು ಜನಕ್ಕೆ ಮುಟ್ಟುವಂತೆ ಮಾಡಿದವರು ...
ಕುನ್ನಕ್ಕುಡಿಯವರು ಇಡುತ್ತಿದ್ದ ದೊಡ್ಡದಾದ ವಿಭೂತಿ, ಕುಂಕುಮ ಕೂಡ ತಮ್ಮ ಭಿನ್ನತನವನ್ನು ತೋರುತ್ತಿತ್ತು...
ಅವರು ವಯೊಲಿನ್ ನುಡಿಸುವಾಗ ಮಾಡುತ್ತಿದ್ದ ವಿಚಿತ್ರ ಹಾವ-ಭಾವಗಳು, ಚಿಕ್ಕವರಾದ ನಮಗೆ ನಗುವನ್ನು ತಂದಿದ್ದೂ ಹೌದು.
ಸಾಮಾನ್ಯವಾಗಿ ಸಂಜೆಗೆ ಪ್ರಾರಂಭವಾಗುತ್ತಿದ್ದ ಶೇಷಾದ್ರಿಪುರಂ ಸಂಗೀತ ಮಹೋತ್ಸವದಲ್ಲಿ,
ಇವರ ಖಚೇರಿಗಳು ಹಲವಾರು ಬಾರಿ ವಿಳಂಬವಾಗೇ ಪ್ರಾರಂಭವಾದರೂ, ಮಧ್ಯರಾತ್ರಿ ೧-೨ ರವರೆಗೆ ನಿರಂತರವಾಗಿ ಹರಿದು ಬರುತ್ತಿತ್ತು...
ಜನರನ್ನು ಮಂತ್ರ-ಮುಗ್ಧಗೊಳಿಸಿ, ನಡುರಾತ್ರಿಯಾದರೂ ಮನೆಗೆ ಹೋಗದಂತೆ ಕಟ್ಟಿಹಾಕುತ್ತಿತ್ತು!
ಇದಲ್ಲದೆ, ತಮ್ಮ ಹಲವಾರು ಖಚೇರಿಗಳಲ್ಲಿ, ಆಯಾ ರಾಗಕ್ಕೆ ಅನುಗುಣವಾಗಿ, ರಾಗಕ್ಕೆ ಹೊಂದುವ ಚಲನ ಚಿತ್ರದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ಹಾಡುಗಳ
ನಡುವೆ ಸೇರಿಸಿ ವಯೊಲಿನ್ ವಾದನ ಮಾಡುತ್ತಿದ್ದರು. ಖಚೇರಿಯ ಮಧ್ಯೆ, ಮುಂಜಾನೆ ಆಕಾಶವಾಣಿಯಲ್ಲಿ ಬರುತ್ತಿದ್ದ ಇಂಪನ್ನು ಜನರಿಗೆ ಉಣಬಡಿಸಿದವರಿವರು...
ಹೀಗೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಖಚೇರಿಗಳನ್ನು ಕೊಡುತ್ತಿದ್ದರಿಂದ, ಮಡಿವಂತರಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೆ...
ನನಗನಿಸಿದಂತೆ, ಇವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ದೊರಕದೇ ಹೋದದ್ದು ಇದೇ ಕಾರಣಕ್ಕಿರಬಹುದು...
ಇವರು ವಾತಾವರಣಕ್ಕೆ ತಕ್ಕಂತೆ ವಯೊಲಿನ್ ನಾದವು ಬದಲಾಗುವುದರ ಬಗ್ಗೆ ಅಧ್ಯಯನವನ್ನು ನಡೆಸಿದ್ದರು ಮತ್ತು ಗೌರವ ಡಾಕ್ಟೊರೇಟ್ ಪಡೆದಿದ್ದರು.

ನೆನ್ನೆ (೮-ಸೆಪ್ಟೆಂಬರ್-೨೦೦೮), ಕುನ್ನಕ್ಕುಡಿ ವೈದ್ಯನಾಥನ್ ರವರು ಪಂಚಭೂತಗಳಲ್ಲಿ ಲೀನರಾದರು.
ಅದ್ಭುತ ವಯೊಲಿನ್ ರಸವನ್ನು ಉಣಿಸಿದ ಇವರಿಗೆ ಅನಂತ ನಮನಗಳು.
ಕರ್ನಾಟಕ ಸಂಗೀತ ಲೋಕ ಇಂಥಾ ಒಬ್ಬ ಮೇರು ಕಲಾವಿದರನ್ನು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ ...

ಕುನ್ನಕ್ಕುಡಿ ವೈದ್ಯನಾಥನ್ ರವರ ವಯೊಲಿನ್ ವಾದನವನ್ನು ಕೇಳಲು ಇಲ್ಲಿ ಚಿಟಿಕಿಸಿ.




--ಶ್ರೀ

Sunday, August 31, 2008

ಕಳವು

"ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ...
ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ...
ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ!

ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ ದುಡ್ಡು ಕಾಣೆಯಾಗಿತ್ತು...
ಮೊದ ಮೊದಲು ರಾಜ ಇದರ ಬಗ್ಗೆ ಹೆಚ್ಚು ಗಮನಿಸಿರಲಿಲ್ಲ...
ಒಮ್ಮೆ ಕಳೆದಿದ್ದೆ ಎಂದುಕೊಂಡ ದುಡ್ಡು, ಕಳೆದಿದ್ದಲ್ಲ, ಗೆಳೆಯ ನಾಣಿಗೆ ಕೊಟ್ಟಿದ್ದು ಎಂದು ತಿಳಿದಾಗ ಸುಮ್ಮನಾಗಿದ್ದ...
ಮತ್ತೊಮ್ಮೆ ಕಳೆದೆ ಎಂದುಕೊಂಡ ದುಡ್ಡು ತಾನಗಾಗಿಯೇ ಖರ್ಚು ಮಾಡಿದ್ದು ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದ...
ಆದರೂ ಕಳವು ನಡೆಯುತ್ತಿದೆ ಎಂಬ ಗುಮಾನಿ ...
ಸಮಯ ಕಳೆದಂತೆ, ರಾಜ ತನ್ನ ವೆಚ್ಚವನ್ನೆಲ್ಲ ಗಮನಿಸತೊಡಗಿದ್ದ...
ಇತ್ತೀಚಿಗಷ್ಟೆ ತಿಳಿದಿದೆ, ತನ್ನ ಸಂಶಯ ಸರಿ ಎಂದು...!
ಹಲವು ಬಾರಿ ಮುಂಚೆಯೂ ಕಳುವಾಗಿದೆ ಎಂದು! ಇತ್ತೀಚಿಗೆ ಕಳವು ಹೆಚ್ಚಾಗಿದೆ...!

ರಾಜ ಅವಲೋಕಿಸ ತೊಡಗಿದ...’ಯಾರು ಕಳ್ಳತನ ಮಾಡುತ್ತಿರಬಹುದು???’...
ರಾಜನ ಮನೆಗೆ ಬರುವವರೇ ಕೆಲವೇ ಕೆಲವರು...
ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಜನ ಮನೆಗೆ ಬರುತ್ತಿದ್ದ ಗೆಳೆಯರಿಬ್ಬರೇ - ಸೀನ, ನಾಣಿ...
ಇಬ್ಬರೂ ನೆಚ್ಚಿನವರ್‍ಏ! ತಾನು ಕಷ್ಟದಲ್ಲಿದ್ದಾಗ ಸಹಾಯಕ್ಕೆ ನಿಂತವರು...
ಇದು ಬಿಟ್ಟರೆ, ಮನೆ ಮಾಲೀಕರ ಮನೆ ಕೆಲಸದ ಹುಡುಗಿ...
ಅವಳು ಬರುವುದೂ ವಾರಕ್ಕೆ ಒಮ್ಮೆ!
ರಾಜ ಟೈಫಾಯಿಡ್ ಜ್ವರದಿಂದ ನರಳಿದಾಗ ಅವಳೇ ಅಡುಗೆ ಮಾಡಿದ್ದು...
ಬಹಳ ಮೃದು ಸ್ವಭಾವ ಮತ್ತು ಒಳ್ಳೆಯ ನಡತೆ...
ಇವರುಗಳು ಯಾರನ್ನೂ ಶಂಕಿಸಲೂ ಮನಸ್ಸು ಒಪ್ಪಲಿಲ್ಲ...

ಎರಡು ದಿನಗಳ ಬಳಿಕ ಪರ್ಸ್’ನಿಂದ ಮತ್ತೆ ಕಳುವಾಯಿತು!
ರಾಜನಿಗೆ ತಲೆ ಚಿಟ್ಟು ಹಿಡಿದಂತಾಯಿತು...
ಒಲ್ಲದ ಮನದಲ್ಲಿ, ಇವರೆಲ್ಲರ ಮೇಲೆ ಕಣ್ಣಿಡಲಾರಂಭಿಸಿದ...
ಇವರೆಲ್ಲ ಬಂದಾಗ ಅವರ ಪ್ರತಿ ಚಲನ-ವಲನಗಳನ್ನು ಗಮನಿಸಿದ...
ಆದರೆ, ಆ ರೀತಿ ಗಮನಿಸುತ್ತಿದ್ದಾಗಲೆಲ್ಲ ಕಳುವಾಗಲೇ ಇಲ್ಲ...

ಸೀನ-ನಾಣಿ ಈ ಕಳವು ಮಾಡಿಲ್ಲವೆಂದು ಧೃಡ ಪಟ್ಟಾಗ,
ತನ್ನ ಕಳುವಿನ ಕಥೆಯನ್ನು ಅವರ ಬಳಿ ಹೇಳಿದ...
"ರಾಜ, ನಮ್ ಮನೆ ಹತ್ರ ಒಬ್ಬ ಕವಡೆ ಹಾಕಿ ಶಾಸ್ತ್ರ ಹೇಳ್ತಾನೆ...
ಅವನನ್ನ ಕೇಳೋಣ ಬಾ, ಅವನು ನನ್ನ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸರಿಯಾಗಿ ಹೇಳಿದಾನೆ..."
ಸೀನನಿಗೆ ಸ್ವಲ್ಪ ದೈವ/ದೆವ್ವಗಳ ಬಗ್ಗೆ ಕೊಂಚ ನಂಬಿಕೆ ಹೆಚ್ಚು...
ಇದನ್ನೆಲ್ಲ ನಂಬದ ನಾಣಿ ಹೇಳಿದ..."ಲೋ ರಾಜ, ಕಳ್ಳತನ ಆದ್ರೆ, ಪೋಲೀಸ್ ಹತ್ರ ಹೋಗ್ತಾರೋ?
ಬುರುಡೆ ದಾಸಯ್ಯನ ಹತ್ತಿರ ಹೋಗ್ತಾರೋ? ಬಾ ನಾವು ಪೋಲೀಸ್ ಕಂಪ್ಲೈಂಟ್ ಕೊಡೋಣ..."

ರಾಜನಿಗೆ ಎರಡಕ್ಕೂ ಮನಸಿಲ್ಲ...
ಪೋಲೀಸ್ ಬಳಿ ಹೋದರೆ ಕಳ್ಳನ್ನ ಹಿಡಿಯೋದು ಬಿಟ್ಟು ಸುಮ್ಮನೆ ಸ್ಟೇಷನ್ ಗೆ ಅಲೆದಾಡಿಸ್ತಾರೆ,
ಲಂಚದ ಗೋಳು ಬೇರೆ...
ಸೀನ ಹೇಳಿದ ಕವಡೆ ಶಾಸ್ತ್ರದ ಬಗ್ಗೆನೂ ನಂಬಿಕೆ ಇಲ್ಲ...
ಆದರೆ ರಾಜ ಸಾಮಾನ್ಯವಾಗಿ ಸೀನನ ಮಾತು ತಳ್ಳಿ ಹಾಕಲಾರ...
ಹಾಗಾಗಿ, ಸೀನನೊಡನೆ ಶಾಸ್ತ್ರ ಕೇಳೋಕ್ಕೆ ಹೋದ...
ಶಾಸ್ತ್ರಿಗಳು ಎರಡು ಮೂರು ಬಾರಿ ಕವಡೆ ಹಾಕಿ, ಒಂದೆರಡು ಪ್ರಶ್ನೆ ಹಾಕಿ...
"ಕಳುವೇ ಆಗಿಲ್ಲ ಹೋಗಿ, ನಿಮ್ ಹಣ ಭದ್ರವಾಗಿದೆ" ಅಂದ್ಬಿಟ್ಟ್ರು!

ರಾಜನಿಗೋ ಮೊದಲೇ ಇದರ ಬಗ್ಗೆ ಹೆಚ್ಚು ನಂಬಿಕೆ ಇರಲಿಲ್ಲ...
"ಥೂ ನಿನ್ನ! ನಾನು ಅಲ್ಲಿ ದುಡ್ಡು ಕಳ್ಕೊಂಡಿದ್ರೆ, ನಿಮ್ ಶಾಸ್ತ್ರಿ ಎಂಥಾ ಬುರುಡೇ ಬಿಡ್ತಾನೋ?!!!
ಇಂಥಾವರೆಲ್ಲ ನಮ್ ಥರದವರಿಂದ ಜೀವನ ಮಾಡ್ತಾರೆ ಅಷ್ಟೆ!"
"ಹೋಗಲೀ, ನಾನು ಊರಿಗೆ ಇಪ್ಪತೈದು ಸಾವಿರ ಕಳಿಸ್ಬೇಕು, ಉಳಿಸಿದ ದುಡ್ಡೆಲ್ಲ ಕಳುವಾಗಿದೆ, ಈವತ್ತು ಅಮ್ಮ ಬರುತ್ತಾರೆ ಊರಿಂದ.
ಅವರಿಗೆ ಇದೆಲ್ಲ ಗೊತ್ತಾಗೋದು ಬೇಡ, ನೀನು ಸಂಜೆ ದುಡ್ಡು ಅಡ್ಜಸ್ಟ್ ಮಾಡಿಕೊಂಡು ಬಂದು ಕೊಡು,
ನಾನು ಅಮ್ಮ ಬಂದ ತಕ್ಷಣ ಅವರಿಗೆ ಕೊಟ್ಟು ಬಿಡ್ತೀನಿ, ಕಳ್ಳನ್ನ ಆಮೇಲೆ ಹಿಡಿಯೋಣ...
ನಿನ್ನ ದುಡ್ಡು ಪ್ರತಿ ತಿಂಗಳು ಕೊಂಚ ಕೊಂಚ ವಾಪಸ್ ಕೊಡ್ತೀನಿ"

ಸೀನ ಮಾತು ಕೊಟ್ಟಂತೆ, ಸಂಜೆ ಬಂದು ದುಡ್ಡನ್ನು ಕೊಟ್ಟು ಹೋದ...
ರಾಜ ದುಡ್ಡು ಭದ್ರವಾಗಿಟ್ಟು, ಅಮ್ಮನ ಹಾದಿಗೆ ಕಾದ...
ಸಂಜೆಯೇ ಬರಬೇಕಾಗಿದ್ದ ಅಮ್ಮ, ಊರಿಂದ ಬರುವ ಹೊತ್ತಿಗೆ ರಾತ್ರಿಯಾಗಿತ್ತು...
ಊಟ ಮಾಡುತ್ತ ಅಣ್ಣನ ಆರೋಗ್ಯ, ಸೋರುತ್ತಿರುವ ಅಡಿಗೆ ಮನೆ ಸೂರು, ಊರಿನ ಕಥೆ ಎಲ್ಲ ಮಗನಿಗೆ ಹೇಳಿದ್ದಾದ ಮೇಲೆ...
"ರಾಜೂ...ಕೊಂಚ ಹಾಸಿಗೆ ಹಾಸಪ್ಪ, ತುಂಬಾ ಸುಸ್ತಾಗಿದೆ...ಬೆಳಗ್ಗೆ ಬೇಗ ಎದ್ದೇಳು, ಗುಂಡು ಮಾಮ ಮನೆಗೆ ಹೋಗಿಬರೋಣ, ಅವಳ ಮಗಳು ಸುಮಾ ಇದೇ ಊರಲ್ಲಿ ಕೆಲಸ ಮಾಡ್ತಿದ್ದಾಳಂತೆ, ಸುಮ್ಮನೆ ಹಾಗೆ ಗಮನಿಸು, ಮನಸ್ಸಿಗೆ ಹಿಡುಸಿದರೆ ಮದುವೆ ಬಗ್ಗೆ ಮಾತಾಡೋಣ..."
"ಅಮ್ಮ...ದುಡ್ಡು ಬೇಕೂ ಅಂದಿದ್ಯಲ್ಲ..."...
"ನಾಳೆ ಸಂಜೆ ಊರಿಗೆ ಹೋಗಬೇಕಾದ್ರೆ ಕೊಡೋ...ಈ ಸರಿ ಹೊತ್ತಲ್ಲಿ ಯಾಕೆ?"
ರಾಜನಿಗೆ ಕಳುವಿನ ಬಗ್ಗೆ ಅಮ್ಮನಿಗೆ ಹೇಳಬೇಕೂ ಎಂದು ನಾಲಿಗೆ ತುದಿಗೆ ಬಂದರೂ,
ಅಮ್ಮ ಸುಮ್ಮನೆ ಆತಂಕ ಪಡುತ್ತಾರೆ, ಊರಿನಿಂದ ಬಂದು ಸುಸ್ತಾಗಿದೆ, ಇದರ ಬಗ್ಗೆ ತಿಳಿಸಿದರೆ ರಾತ್ರಿಯೆಲ್ಲ ನಿದ್ದೆ ಮಾಡುವುದಿಲ್ಲವೆಂದು ಸುಮ್ಮನಾದ...
ಸೀನ ಕೊಟ್ಟ ಹಣ ಭದ್ರವಾಗಿದೆಯೆಂದು ಮತ್ತೊಮ್ಮೆ ಕಪಾಟು ನೋಡಿ, ಅಮ್ಮನ ಪಕ್ಕದಲ್ಲಿ ಮಲಗಿದ ರಾಜ...

***

ಅಮ್ಮ ರಾಜನನ್ನು ಎಬ್ಬಿಸಿದರು...
"ರಾಜೂ...ಎದ್ದು ಬೇಗ ರೆಡಿ ಆಗು, ಗುಂಡು ಮಾಮ ಮನೆಗೆ ಹೋಗೋಣ...ಬೇಗನೆ ಬರುತ್ತೀವಿ ಎಂದು ನಾನು ಮುಂಚೆಯೇ ತಿಳಿಸಿದ್ದೀನಿ.."...
ಏಳುತ್ತಿದ್ದಂತೆ ಮುಖ ತೊಳೆದ ರಾಜ ಹಣ ಭದ್ರವಾಗಿದೆಯೋ ನೋಡೋಣ ಎಂದು ಪರೀಕ್ಷಿಸಿದ...
ಇಟ್ಟಿದ್ದ ಜಾಗ ಖಾಲಿ ಇರುವುದನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು...!
ತಕ್ಷಣವೇ ಕೂಗಿದ..."ಅಮ್ಮಾ! ಅಮ್ಮಾ! ನಾನು ನೆನ್ನೆ ಇಟ್ಟ ಹಣ ಕಳುವಾಗಿದೆ ಅಮ್ಮಾ...ಈ ಮನೆಯಲ್ಲಿ ಯಾಕೋ ಕಳವು ತೀರ ಹೆಚ್ಚಿದೆ!
ನೆನ್ನೆ ನೀನು ದಣಿದಿದ್ದರಿಂದ ಹೇಳಲಿಲ್ಲ...ಈಗ ಅಣ್ಣನ ಆಪೊರೇಷನ್’ಗೆ ಬೇಕಾದ ದುಡ್ಡು ಎಲ್ಲಿ ಹೊಂದಿಸಲಿ!?"
ಎಂದು ದುಃಖದಿಂದ ಹಾಸಿಗೆ ಮೇಲೆ ರಾಜ ಕುಸಿದ...
"ಕಳುವೆಲ್ಲಾಯ್ತೋ??? ಅಲ್ಲೇ ಅಟ್ಟದ ಮೇಲೆ ಪೆಟ್ಟಿಗೆನಲ್ಲಿ ನಡುರಾತ್ರಿ ಇಟ್ಟೆಯಲ್ಲ, ಆಗಲೇ ಮರೆತು ಹೋಯ್ತಾ?"
"ಇಲ್ಲಮ್ಮ...ನಾನು ಅಟ್ಟದ ಮೇಲಲ್ಲ ಇಟ್ಟಿದ್ದು, ಕಪಾಟಿನಲ್ಲಿ! ಚೆನ್ನಾಗಿ ಜ್ಞಾಪಕವಿದೆ!"
"ಒಮ್ಮೆ ತೆಗೀ ನೋಡೋಣ ಅಟ್ಟದ ಮೇಲಿನ ಪೆಟ್ಟಿಗೆ..."
ರಾಜ ಅಟ್ಟದ ಮೇಲಿನ ಪೆಟ್ಟಿಗೆ ತೆಗೆದ...
"ಎಲ್ಲಿಂದಾ ಬಂತೋ ಇಷ್ಟೊಂದು ದುಡ್ಡೂ???"
"ನಂಗೇನೂ ಗೊತ್ತಿಲ್ಲಮ್ಮ, ಪೆಟ್ಟಿಗೆ ತೆಗೆದೇ ತಿಂಗಳುಗಳಾಯಿತು"
"ಅಯ್ಯೋ ಶಿವನೇ...ಚಿಕ್ಕವನಾದಾಗ ಬರೀ ನಿದ್ದೇಲಿ ಮಾತಾಡ್ತಿದ್ದಿ...ಈಗ ನಿದ್ದೇಲಿ ಓಡಾಡಕ್ಕೆ ಶುರು ಮಾಡಿದೀಯೇನೋ??!!!
ನಡೀ ಗುಂಡು ಮಾಮ ಮನೆಗೆ ಹೋಗೋ ಹೊತ್ತಾಯ್ತು...ಮದುವೆ ಆದ ಮೇಲೆ ಮಂಚಕ್ಕೆ ಕಟ್ಟಿ ಹಾಕ್ತಾಳೆ ನಿನ್ನ ಹೆಂಡತಿ"
ಎಂದು ನಕ್ಕು, ರಾಜನ ತಲೆ ಮಟುಕಿದ ಅಮ್ಮ ಎದ್ದು ಹೋದರು...
ಪೆಟ್ಟಿಗೆಯಲ್ಲಿದ್ದ ರಾಶಿ ಹಣವನ್ನು ನೋಡುತ್ತಾ ಪೆಚ್ಚಾಗಿ ಕುಳಿತ ರಾಜ!


--ಶ್ರೀ
(೩೦-ಆಗಸ್ಟ್-೨೦೦೮)

Friday, August 29, 2008

ಕುಹೂ ದನಿಯು ಕಿವಿ ತೂತ ಕೊರೆದಿತ್ತು!

ಕೋಗಿಲೆಯ ಕುಹೂ ದನಿಯು
ಕಿವಿ ತೂತ ಕೊರೆದಿತ್ತು!
ಚಿಟ ಪಟನೆ ಮಳೆ ಹನಿಯು
ಕಾದೆಣ್ಣೆಯಂತಿತ್ತು!
ಇವನ್ಯಾವ ಅರಸಿಕನೆಂದು
ಹಳಿಯಬೇಡಿರಿ ಎನ್ನ...

ಮೆತ್ತನೆಯ ಹಾಸಿರಲು
ಬೆಚ್ಚನೆ ನಾ ಹೊದ್ದಿರಲು
ತಿಳಿ ನಿದ್ದೆ ಹತ್ತಿರಲು...
ನಾ ಹೀಗೆ ಬಗೆದದ್ದು
ಸುಳ್ಳೇನೋ ಅಣ್ಣ???

--ಶ್ರೀ
(ಆಟೋದಲ್ಲಿ ಗೀಚಿದ್ದು!!! ೨೮/೦೮/೦೮ )

Thursday, August 7, 2008

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"
ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ...

ಅಮ್ಮನ ಮೂಡ್ ಯಾಕೊ ಸರಿ ಇರಲಿಲ್ಲ...ಎಷ್ಟೊ ಸರತಿ ಪುಟ್ಟಿ ಮಧ್ಯ ರಾತ್ರಿ ಬಂದದ್ದುಂಟು...
ಆದರೂ ಅಮ್ಮನಿಗೆ ಯಾಕೋ ಆತಂಕವಾಗಿತ್ತು ಇಂದು...

ಮನಸ್ಸಲ್ಲೇ ಕೊರಗಿದರು ಅಮ್ಮ
"ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???"

***

"ಛೆ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು...
ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು...ಇಲ್ಲ ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು!
ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"...ಸುತ್ತ ಕಣ್ಣು ಹಾಯಿಸಿದಳು ಪುಟ್ಟಿ...
ಹತ್ತಿರ ಯಾರು ಕಣ್ಣಿಗೆ ಬೀಳಲಿಲ್ಲ...

ನಡು ರಾತ್ರಿ ಆಫೀಸಿಂದ ಹೊರಟಿದ್ದಳು ಪುಟ್ಟಿ...
ಸಮಯ ೨.೩೦ ಆಗಿತ್ತು...ಎಂದೂ ಇಲ್ಲದ್ದು ಇಂದು ಕೆಂಪೇಗೌಡ ರಸ್ತೆಯಲ್ಲೂ ಇಂದು ಯಾರೂ ಕಾಣುತ್ತಿಲ್ಲ..!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಮನಸಲ್ಲೇ ಶಪಿಸಿದಳು ಪುಟ್ಟಿ...
ಪುಟ್ಟಿ ಆ ರೀತಿ ಶಪಿಸಲು ಕಾರಣವಿತ್ತು...
ಹೇಳಿ ಕೇಳಿ ಅದು ಕಾರ್ಪೊರೇಶನ್ ಜಾಗ! ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ...
ಆದ್ರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ!

ಇನ್ನು ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ!
ಇನ್ನೆರಡು ಫ಼ರ್ಲಾಂಗ್ ಆ ಕಡೆ ಮೈಸೂರು ಬ್ಯಾಂಕ್! ಅಲ್ಲಿ ಹತ್ತಿರ ಹೆಚ್ಚು ಜನರಿರುತ್ತಾರೆ...
ಎರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿತ್ತು!

ಪುಟ್ಟಿ ಅಂದಿನ ದಿನದ ಬಗ್ಗೆ ಮೆಲಕು ಹಾಕಿದಳು...

ಪುಟ್ಟಿಗೆ ಅಂದಿನ ದಿನವೇ ಕೆಟ್ಟದಾಗಿತ್ತು...
ಬೆಳಗ್ಗೆಯಿಂದ ಮಾಡಿದ ಕೆಲಸವೆಲ್ಲ ತಪ್ಪಾಗಿತ್ತು...ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ...
ಮಾರನೇಯ ದಿನವೇ ಮಾನೇಜರ್ ಕ್ಲೈಂಟ್'ಗೆ ಡೆಮೋ ತೋರಿಸಬೇಕು ಅಂತ ಪುಟ್ಟಿಯ ತಲೆ ಮೇಲೆ ಕೂತಿದ್ದ!
ಪಾಪ ಪುಟ್ಟಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲೆ ರಾತ್ರಿಯೇ ಕೂತಿದ್ದಳು!
ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ
"ಬನ್ನಿ ಮೇಡಮ್!" ಅಂತ ಎಂದಿಗಿಂತ ಹೆಚ್ಚಿಗೆ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್!
ಆ ಕ್ಯಾಬ್ ಡ್ರೈವರ್ ಕರಿಯನನ್ನು ಕಂಡರೆ ಪುಟ್ಟಿಗೆ ಆಗದು ...
ಅವನ ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ...
"ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ಪುಟ್ಟಿ...
ದಾರಿಯಲ್ಲಿ ಬರುವಾಗ ಕಾರ್ಪೊರ್‍ಏಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ...

"ಮೇಡಮ್! ನನ್ ಕಂಪನೀದೇ ಇನ್ನೊಂದ್ ಕ್ಯಾಬಿದೇ ಈ ಕಡೇನೇ ಹೋಗ್ತಾ ಇದ್ಯಂತೆ...
ಒಂದ್ ಐದು ನಿಮಿಷ ಅಷ್ಟೇ ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ"

ಹಾಗೆ ಆ ಕರಿಯ ಹೇಳಿ ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು...
ಅಮ್ಮನ ಬೈಗುಳ ಮತ್ತೆ ಜ್ಞಾಪಕಕ್ಕೆ ಬಂತು...

ಕರಿಯ ಫೋನ್ ಮಾಡುವಾಗ ಗಮನಿಸಿದ್ದಳು ಪುಟ್ಟಿ...
ಅವನು ಮಾತಾಡುವುದು ಏನೂ ಅರ್ಥ ಆಗಲಿಲ್ಲ...ತುಳುವೋ ಕೊಂಕಣಿಯೋ ಇರಬೇಕು...
ನಗ್ತಾ ನಗ್ತಾ ಮಾತಾಡುತ್ತಿದ್ದ ಆ ಕಡೆಯವನ ಜೊತೆ...

"ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ???"
ಮನಸ್ಸಲ್ಲೇ ರೇಗಿದಳು ಪುಟ್ಟಿ...

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಪ್ರಕರಣ ನಡೆದಿತ್ತು...!
ಎಂದೂ ಭಯಪಡದ ಪುಟ್ಟಿಯ ಮನಸಲ್ಲೂ ಈ ಯೋಚನೆ ಹಾಯದಿರಲಿಲ್ಲ...
ಮತ್ತೊಮ್ಮೆ ನೋಡಿದಳು ಡ್ರೈವರ್ ಕಡೆಗೆ...ಅವನು ನಸು ನಕ್ಕ "ಇನ್ನೇನ್ ಬರತ್ತೆ ಮೇಡಮ್!"...
ಅವನ ಆ ನಗೆ ಪುಟ್ಟಿಗೆ ಹಿಡಿಸದು...
"ಕಾರಿನಲ್ಲಿ ಇನ್ನೋಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ?"
"ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್'ದ! ಈಡಿಯಟ್!"

ಪ್ರತಿಭಾ ಬಗ್ಗೆ ಯೋಚಿಸುತ್ತ ಪುಟ್ಟಿಗೆ ಸ್ವಲ್ಪ ದಿಗಿಲೇ ಆಯಿತು...
ತಮ್ಮ ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ...ಖಾರದ ಪುಡಿ ಪರ್ಸ್'ನಲ್ಲಿ ಇಟ್ಟುಕೋ ಎಂದು...
ಇಟ್ಟುಕೊಂಡಿಲ್ಲ!.."ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು..."
ಕರ್ಮಕ್ಕೆ ಮೊಬೈಲ್ ಬ್ಯಾಟರೀ ಬೇರೆ ಮುಗಿದಿತ್ತು, ತಮ್ಮನನ್ನು ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ!
ಪುಟ್ಟಿ ಸಮಯಕ್ಕೆ ಚಾರ್ಜ್ ಮಾಡುವುದಿಲ್ಲವೆಂದು ಯಾವಾಗಲೂ ಬಯ್ಸಿಕೊಳ್ಳುವವಳೇ!
ಇಂದು ಈ ರೀತಿ ಕೈ ಕೊಟ್ಟಿತ್ತು...!
ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಕಾಣಲಿಲ್ಲ...!

ಮತ್ತೊಮ್ಮೆ ಸುತ್ತ ನೋಡಿದಳು ಪುಟ್ಟಿ...ಸುಮಾರು ದೂರದಲ್ಲಿ ಯಾರೋ ಮುಸುಕು ಹೊದ್ದಂತೆ ಕಂಡಿತು...
ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವನನ್ನ ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ಪುಟ್ಟಿಯ ಮನಸಲ್ಲಿ ಹರಿಯಿತು...
ಅಷ್ಟರಲ್ಲೆ ಪಕ್ಕದ ಮೈದಾನದ ಕಾಂಪೌಂಡ್ ಮೇಲಿಂದ ಒಂದು ನಾಯಿ ಎಗರಿತು...
ಇದನ್ನು ನಿರೀಕ್ಷಿಸದ ಪುಟ್ಟಿ ಥರಗುಟ್ಟಿದಳು!

ಕೊನೆಗೂ ಇನ್ನೊಂದು ಕ್ಯಾಬ್ ಬಂತು...ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರೆ!
ಇಬ್ಬರೂ ನಗುತ್ತಿದ್ದಾರೆ...! ಸಿಲಿಂಡರ್ ಅಳವಡಿಸಿದ್ದಾಯಿತು...
"ಬನ್ನಿ ಮೇಡಮ್ ಆಗ್ಲೆ ತುಂಬಾ ಲೇಟ್ ಆಗಿದೆ" ಅಂತ ಕರೆದ...
ನಮ್ಮ ಕ್ಯಾಬ್ ಹೊರಟಿತು...ಇನ್ನು ಹೊರಟು ಸ್ವಲ್ಪ ದೂರವೂ ಹೊಗಿರಲಿಲ್ಲ!
ಮತ್ತೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಕರಿಯ!
"ಮತ್ತೆ ಏನಾಯ್ತು???" "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ - ಯಾಕೊ ಟೈಮ್ ಸರಿ ಇಲ್ಲ"
ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ!
ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡು ನಿಮಿಷದಲ್ಲೇ ಬಂದ...
"ಮೇಡಮ್! ಒಂದು ಕೆಲಸ ಮಾಡೋಣ...ನಾವು ನನ್ ಫ್ರೆಂಡ್ ಕಾರಲ್ಲೇ ನಿಮ್ಮನ್ನ ಡ್ರಾಪ್ ಮಾಡಿ ಮತ್ತೆ ಬಂದು ರಿಪೇರಿ ಮಾಡ್ತೀವಿ"
ಇದನ್ನು ಕೇಳುತ್ತಿದ್ದಂತೆ ಪುಟ್ಟಿಯ ಮೈ ತುಸು ಕಂಪಿಸಿತು!

ಏನು ಮಾಡುವುದು ಎಂದು ತಿಳಿಯಲಿಲ್ಲ...ಬೇರೆ ದಾರಿ ತೋಚಲಿಲ್ಲ...
ಒಂದು ಕಡೆ ಭಯ...ಇನ್ನೊಂದು ಕಡೆ ಮೊಂಡು ಧೈರ್ಯ ಏನು ಆಗುವುದಿಲ್ಲ ಎಂದು...
"ಆಗಲಿ ಏನಾಗುವುದೋ ನೋಡೇ ಬಿಡೋಣ! ಕೃಷ್ಣ ಎಂದೂ ಕೈ ಬಿಡುವಿದಿಲ್ಲ ನನ್ನನ್ನು ಕಾಯುತ್ತಾನೆ" ಎಂದು ಹೊರಟಳು...

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ಪುಟ್ಟಿ...ಏನಾಗುವುದೋ ಎಂಬ ಹಿಂಜರಿಕೆಯಲ್ಲೆ ಹಿಂದೆ ಕುಳಿತಳು ಪುಟ್ಟಿ!
ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ...
ಹಿಂದೆ ಕುಳಿತು ಕಾರು ಹೊರಟ ಮೇಲೆ ಪುಟ್ಟಿಯ ಗಮನಕ್ಕೆ ಬಂದದ್ದು...
ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ! ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ...

"ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ...ಸಿಲಿಂಡರ್ ಇದ್ದಂತಿತ್ತು...ಆಮೇಲೆ ಅವನು ಬಂದಮೇಲೆ ಕ್ಲಚ್ ನಾಟಕ!" ಎದೆ ಢವಗುಟ್ಟಿತು!

"ಮೆಲ್ಲನೆ ಕಾರಿನಿಂದ ಜಿಗಿಯಲೇ?" ನಡು ರಾತ್ರಿಯಲ್ಲಿ ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ಪುಟ್ಟಿ...
ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೋಣ ಎಂದೆನಿಸಿ ಪ್ರಯತ್ನಿಸಿದಾಗ ತಿಳಿಯಿತು ಇದಕ್ಕೆ ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು!
ತನ್ನ ಸ್ಥಿತಿ-ಅಸಹಾಯಕತೆ ತಿಳಿದ ಪುಟ್ಟಿಯ ಕಣ್ಣುಗಳು ನೀರೂರಿದವು...

ಕಾರ್ ರೊಯ್ಯನೆ ಹೋಗುತ್ತಿತ್ತು...ಅವರಿಬ್ಬರು ಅವರ ಪಾಟಿಗೆ ಮಾತನಾಡುತ್ತಿದ್ದರು...
ಜೋರಾಗಿ ನಗುತ್ತಿದ್ದರು...
ಪುಟ್ಟಿ ಊರಗಲ ಕಣ್ಣ ಬಿಟ್ಟು ಗಮನಿಸುತ್ತಿದ್ದಳು ಎಲ್ಲಿ ಬೇರೆ ಕಡೆಗೆ ಕರೆದೊಯ್ಯುವರೋ!
ಮನಸಿನಲ್ಲಿ ನೂರಾರು ಯೋಚನೆಗಳು...
"ಇವರಿಬ್ಬರೂ ಎನಾದರೂ ಮಾಡಿದರೆ ಏನು ಮಾಡುವುದು?ಕಿರುಚಬೇಕೆ? ನನ್ನ ಬಳಿ ಚಾಕು ಅಥವಾ ಯಾವುದೇ ಆಯುಧ ಇಲ್ಲ? ಎನು ಮಾಡುವುದು?
ಪರ್ಸ್ ಬಿಟ್ಟರೆ ಏನು ಇಲ್ಲ...ಇವರಿಬ್ಬರೂ ಧಾಂಡಿಗರಂತಿದ್ದಾರೆ!"

ಅಷ್ಟರಲ್ಲೆ ಕಾರು ಗಕ್ಕನೆ ನಿಂತಿತು...
ಯೋಚನೆಗಳಲ್ಲಿ ಮುಳುಗಿದ್ದ ಪುಟ್ಟಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ
"ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು"
ಪುಟ್ಟಿ ಕಿಟಕಿ ಆಚೆ ನೋಡಿದಳು...ಅರೆ! ಮನೆ ಬಂದಿದೆ!
ಅಷ್ಟರಲ್ಲೆ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಹೊರಬಂದರು!
ಡ್ರೈವರ್ ಹೇಳುತ್ತಿದ್ದ..."ಇಷ್ಟು ಕಷ್ಟ ಆದ್ರು ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್!
ನೋಡಿ...ಇವನು ನನ್ ಚಡ್ಡಿ ದೋಸ್ತ್! ಇದೇ ಊರಲ್ಲಿದ್ರೂ ಇಬ್ರೂ ಡ್ರೈವಿಂಗ್ ಕೆಲಸದಲ್ಲಿದ್ರೂ ೫ ವರ್ಷದಿಂದ ಸಿಕ್ಕಿರಲಿಲ್ಲ!
ನಿಮ್ಮಿಂದ ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗೂಡ್ ನೈಟ್!"

ಇಳಿದ ಪುಟ್ಟಿ ಮನೆ ಒಳಗೆ ಓಡಿದಳು...
"ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು, ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತ ಇರಲಿಲ್ವ? ಅಮ್ಮ ಪಾಪ ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ತಮ್ಮ ಹೇಳಿದಾಗಲೆ ಪುಟ್ಟಿಗೆ ಹೊಳೆದಿದ್ದು ಹಾಗೆ ಕರೆ ಮಾಡಬಹುದಿತ್ತೆಂದು...!!
"ಅಮ್ಮ ಎಷ್ಟೆ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಲು ಪುಟ್ಟಿ...

--ಶ್ರೀನಿವಾಸ ಪ. ಶೇ.
(ಬರೆದದ್ದು ೬-೭ ಆಗಸ್ಟ್ ೨೦೦೮ ನಡು ರಾತ್ರಿ...)