Tuesday, June 26, 2007

ಕಾವೇರಿ

ಕಾವೇರಿ

ಕಾವೇರಿ ನಮ್ಮದೆಂದು ನಡೆದಿಹುದು ಘರ್ಷಣೆ
ಬಗೆಹರಿವುದೆಂದೀ ಸಮಸ್ಯೆ? ಶತಮಾನದ ಬವಣೆ

ಕಾವೇರಿ ನಮ್ಮ ತಾಯಿ - ಜನ ಜೀವನದ ನಾಡಿ
ರಾಜಕಾರಣಿಗಳ ಕೈಯಲ್ಲಿ, ಆಗಿರುವಳು ರಾಡಿ

ನೀಚರಲ್ಲಿ ನೀಚರಿವರು - ಇದುವೇ ರಾಜಕಾರಣ
ಕಿಚ್ಚ ಆರಿಸಲು ಬಿಡರು - ಕಿಚ್ಚೇ ಇವರ ಔತಣ

ಸ್ವಾರ್ಥಿಗಳ ಕೈಯ ಕೆಳಗೆ, ಸಾಯುತಿಹರು ರೈತರು
ಇವರ ನೆಮ್ಮದಿಯ ಪಣಕಿಟ್ಟು, ದುಡ್ಡ ಮಾಡುತಿಹರು

ತೀರರಿವರು ಬೆಂದು ಬಸವಳಿದ ಜನರ ದಾಹ
ಇವರ ಚಿಂತೆ ಏನಿದ್ದರೂ, ತಣಿಸಲು ಅಧಿಕಾರದಾ ಮೋಹ

ಏಳಿ! ಎದ್ದೇಳಿ ಜನರೇ! ಇವರಿಗೂ ತಿಳಿಯಬೇಕು ನಮ್ಮ ನೋವು
ತಿರುಗಿಬೀಳಬೇಕು ನಾವು! ಮುಟ್ಟಿಸಿರಿ ಇವರಿಗೂ ಕಷ್ಟದ ಕಾವು

ನಿಲ್ಲಿಸಿರಿ ವಂಚನೆ, ಕಿತ್ತಾಟ, ಇನ್ನೊಬ್ಬರಾ ಮೇಲಿನ ತಿರಸ್ಕಾರ
ಬೇಕೆಂದರೂ ನಾವು ಹೋಗಲಾದೀತೇನು ದೂರ?

ಏಕೆ, ಈ ಕುದಿವ ದ್ವೇಷ? ಹಂಚಿರೆಲ್ಲ ಅಕ್ಕರೆ
ನೆಲೆಸುವುದು ನೆಮ್ಮದಿ, ನಮ್ಮ ಬಾಳು ಸಕ್ಕರೆ

ನಮ್ಮ ರಾಜ್ಯ ಎಂದ ಮನವು ಕಿರಿಯದಾಯಿತಲ್ಲವೇ?
ಒಟ್ಟಾಗಿ ಕಲೆತು ನಾವು ಕಗ್ಗಂಟ ಬಿಡಿಸಬೇಕಲ್ಲವೇ?

ಇಬ್ಬರಿಗೂ ಬೇಕಾಗಿದೆ ಇನ್ನೊಬ್ಬರಾ ಆಸರೆ
ಕೂಡಿ ಬೆಳೆದರೆಂಥ ಚೆನ್ನ! ಸ್ವರ್ಗವೇ ನಮ್ಮ ಕೈ ಸೆರೆ!

(ಜನವರಿ-ಫ಼ೆಬ್ರುವರಿ-೨೦೦೭)

No comments: